ಬಳ್ಳಾರಿಯಲ್ಲಿ ಹಾಲಿನ ದರ ಕಡಿತ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Sep 06, 2024, 01:05 AM IST
ಹಾಲಿನ ದರ ಕಡಿತಗೊಳಿಸಿರುವ ರಾಬಕೊವಿ ಒಕ್ಕೂಟದ ರೈತ ವಿರೋಧಿ ನೀತಿ ಖಂಡಿಸಿ ಬಳ್ಳಾರಿಯ ಒಕ್ಕೂಟದ ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.  | Kannada Prabha

ಸಾರಾಂಶ

ರಾಬಕೊವಿ ಒಕ್ಕೂಟದ ಆಡಳಿತ ಮಂಡಳಿ 2024ರ ಸೆ. 1ರಿಂದ ಅನ್ವಯವಾಗುವಂತೆ ಹಾಲಿನದ ದರವನ್ನು ಪ್ರತಿ ಲೀಟರ್‌ಗೆ ₹ 1.50 ಕಡಿತಗೊಳಿಸಿದೆ.

ಬಳ್ಳಾರಿ: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಹಾಲಿನ ದರವನ್ನು ₹ 1.50 ಕಡಿತಗೊಳಿಸಿದ ರಾಬಕೊವಿ ಹಾಲು ಒಕ್ಕೂಟದ ನಿಲುವು ಖಂಡಿಸಿ ನಗರದ ಒಕ್ಕೂಟದ ಆಡಳಿತ ಕಚೇರಿ ಎದುರು ಹಾಲು ಉತ್ಪಾದಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ರಾಬಕೊವಿ ಒಕ್ಕೂಟದ ಆಡಳಿತ ಮಂಡಳಿ 2024ರ ಸೆ. 1ರಿಂದ ಅನ್ವಯವಾಗುವಂತೆ ಹಾಲಿನದ ದರವನ್ನು ಪ್ರತಿ ಲೀಟರ್‌ಗೆ ₹ 1.50 ಕಡಿತಗೊಳಿಸಿದೆ. ರಾಜ್ಯದ ಎಲ್ಲ ಹಾಲು ಒಕ್ಕೂಟದ ದರ ನೋಡಿದರೆ ಬಳ್ಳಾರಿ ಒಕ್ಕೂಟದಲ್ಲಿ ಅತಿಕಡಿಮೆ ದರ ನೀಡಲಾಗುತ್ತಿದೆ. ಇದರಿಂದ ಹಾಲು ಉತ್ಪಾದಕರಿಗೆ ತೀವ್ರ ಸಮಸ್ಯೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಹಾಲು ಒಕ್ಕೂಟದ ಆಡಳಿತ ಮಂಡಳಿಯ ಆಡಳಿತಾವಧಿ ಮುಗಿದಿದ್ದು ಸರ್ಕಾರದ ಆದೇಶದಂತೆ ಹಾಲಿನ ದರ ಕಡಿಮೆ ಮಾಡುವ ಯಾವುದೇ ಅಧಿಕಾರ ಈಗಿನ ಆಡಳಿತ ಮಂಡಳಿಗಿಲ್ಲ. ಆದರೆ, ಹಾಲಿ ಆಡಳಿತ ಮಂಡಳಿಯು ತನಗಿರುವ ಅಧಿಕಾರ ವ್ಯಾಪ್ತಿಯನ್ನು ಮೀರಿ ರೈತ ವಿರೋಧಿಯಾಗಿ ನಿರ್ಧಾರ ತೆಗೆದುಕೊಂಡಿದೆ.

ಹಾಲು ಉತ್ಪಾದಕರಿಗೆ ಮಾರಕವಾಗಿ ತೆಗೆದುಕೊಂಡಿರುವ ನಿಲುವನ್ನು ಕೂಡಲೇ ಬದಲಾಯಿಸಬೇಕು. ಹಾಲು ದರ ಇಳಿಕೆ ಮಾಡಿದ ದಿನದಿಂದಲೇ ಅನ್ವಯವಾಗುವಂತೆ ಈ ಹಿಂದಿನ ದರ ಮುಂದುವರಿಸಬೇಕು. ಈ ಮೂಲಕ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮುಂದಿನ ಹೋರಾಟ ಕುರಿತು ಚರ್ಚಿಸಿದ ಪ್ರತಿಭಟನಾಕಾರರು, ಇನ್ನು ವಾರದೊಳಗೆ ಆಡಳಿತ ಮಂಡಳಿ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಹೋದರೆ, ಹೋರಾಟದ ಸ್ವರೂಪ ಬದಲಾಯಿಸಲು ನಿರ್ಧರಿಸಿತು.

ಒಕ್ಕೂಟದ ನಿರ್ದೇಶಕರಾದ ಜಿ. ಸತ್ಯನಾರಾಯಣ, ಎಂ. ಸತ್ಯನಾರಾಯಣ, ನಾಗವೇಣಿ, ಧನುಂಜಯ, ಸೂರ್ಯನರಾಯಣ, ಜಗನ್, ಪ್ರಾಂತ ರೈತ ಸಂಘದ

ವಿ.ಎಸ್. ಶಿವಶಂಕರ, ವೆಂಕಟೇಶ ಹೆಗಡೆ, ಬಿ.ಎಂ. ಪಾಟೀಲ್, ಸುಧೀರ್, ವಿಜಯಕುಮಾರ, ಎರಿಸ್ವಾಮಿ ಸೇರಿದಂತೆ ನೂರಾರು ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಹಾಲಿನ ದರ ಕಡಿತಗೊಳಿಸಿರುವ ರಾಬಕೊವಿ ಒಕ್ಕೂಟದ ರೈತ ವಿರೋಧಿ ನೀತಿ ಖಂಡಿಸಿ ಬಳ್ಳಾರಿಯ ಒಕ್ಕೂಟದ ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!