ಬಳ್ಳಾರಿ: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ಹಾಲಿನ ದರವನ್ನು ₹ 1.50 ಕಡಿತಗೊಳಿಸಿದ ರಾಬಕೊವಿ ಹಾಲು ಒಕ್ಕೂಟದ ನಿಲುವು ಖಂಡಿಸಿ ನಗರದ ಒಕ್ಕೂಟದ ಆಡಳಿತ ಕಚೇರಿ ಎದುರು ಹಾಲು ಉತ್ಪಾದಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಹಾಲು ಒಕ್ಕೂಟದ ಆಡಳಿತ ಮಂಡಳಿಯ ಆಡಳಿತಾವಧಿ ಮುಗಿದಿದ್ದು ಸರ್ಕಾರದ ಆದೇಶದಂತೆ ಹಾಲಿನ ದರ ಕಡಿಮೆ ಮಾಡುವ ಯಾವುದೇ ಅಧಿಕಾರ ಈಗಿನ ಆಡಳಿತ ಮಂಡಳಿಗಿಲ್ಲ. ಆದರೆ, ಹಾಲಿ ಆಡಳಿತ ಮಂಡಳಿಯು ತನಗಿರುವ ಅಧಿಕಾರ ವ್ಯಾಪ್ತಿಯನ್ನು ಮೀರಿ ರೈತ ವಿರೋಧಿಯಾಗಿ ನಿರ್ಧಾರ ತೆಗೆದುಕೊಂಡಿದೆ.
ಹಾಲು ಉತ್ಪಾದಕರಿಗೆ ಮಾರಕವಾಗಿ ತೆಗೆದುಕೊಂಡಿರುವ ನಿಲುವನ್ನು ಕೂಡಲೇ ಬದಲಾಯಿಸಬೇಕು. ಹಾಲು ದರ ಇಳಿಕೆ ಮಾಡಿದ ದಿನದಿಂದಲೇ ಅನ್ವಯವಾಗುವಂತೆ ಈ ಹಿಂದಿನ ದರ ಮುಂದುವರಿಸಬೇಕು. ಈ ಮೂಲಕ ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಮುಂದಿನ ಹೋರಾಟ ಕುರಿತು ಚರ್ಚಿಸಿದ ಪ್ರತಿಭಟನಾಕಾರರು, ಇನ್ನು ವಾರದೊಳಗೆ ಆಡಳಿತ ಮಂಡಳಿ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಹೋದರೆ, ಹೋರಾಟದ ಸ್ವರೂಪ ಬದಲಾಯಿಸಲು ನಿರ್ಧರಿಸಿತು.
ವಿ.ಎಸ್. ಶಿವಶಂಕರ, ವೆಂಕಟೇಶ ಹೆಗಡೆ, ಬಿ.ಎಂ. ಪಾಟೀಲ್, ಸುಧೀರ್, ವಿಜಯಕುಮಾರ, ಎರಿಸ್ವಾಮಿ ಸೇರಿದಂತೆ ನೂರಾರು ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಹಾಲಿನ ದರ ಕಡಿತಗೊಳಿಸಿರುವ ರಾಬಕೊವಿ ಒಕ್ಕೂಟದ ರೈತ ವಿರೋಧಿ ನೀತಿ ಖಂಡಿಸಿ ಬಳ್ಳಾರಿಯ ಒಕ್ಕೂಟದ ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.