ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : May 21, 2026, 01:30 AM IST
20ಕೆಡಿವಿಜಿ6-ದಾವಣಗೆರೆಯಲ್ಲಿ ಬುಧವಾರ ಪಿಂಚಣಿ ಪರಿಷ್ಕರಣೆ, ತುಟ್ಟಿಭತ್ಯೆ ಒಳಗೊಂಡಂತೆ ಇತರೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬಿಎಸ್ಸೆನ್ನೆಲ್‌ ಮತ್ತು ಎಂಟಿಎನ್ನೆಲ್‌ ಪಿಂಚಣಿ ನೌಕರರ ಒಕ್ಕೂಟದ ಪದಾಧಿಕಾರಿಗಳು, ನಿವೃತ್ತರು ಪ್ರತಿಭಟನಾ ಧರಣಿ ನಡೆಸಿದರು. | Kannada Prabha

ಸಾರಾಂಶ

ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಕೆಪಿಆರ್‌ಡಿಒ ಕರೆಯ ಮೇರೆಗೆ ದಾವಣಗೆರೆ ತಾಲೂಕು ಔಷಧ ವ್ಯಾಪಾರಿಗಳ ಸಂಘ ನಗರದಲ್ಲಿ ಹಾಗೂ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಔಷಧಿ ವ್ಯಾಪಾರಿಗಳ ಸಂಘಗಳ ನೇತೃತ್ವದಲ್ಲಿ ಔಷಧಿ ವ್ಯಾಪಾರಿಗಳು ಕಪ್ಪುಪಟ್ಟಿ ಧರಿಸಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

- ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ದಾವಣಗೆರೆ ನಗರ, ಜಿಲ್ಲೆಯ ಔಷಧಿ ಮಾರಾಟಗಾರರು । ಆಡಳಿತಕ್ಕೆ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಕೆಪಿಆರ್‌ಡಿಒ ಕರೆಯ ಮೇರೆಗೆ ದಾವಣಗೆರೆ ತಾಲೂಕು ಔಷಧ ವ್ಯಾಪಾರಿಗಳ ಸಂಘ ನಗರದಲ್ಲಿ ಹಾಗೂ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಔಷಧಿ ವ್ಯಾಪಾರಿಗಳ ಸಂಘಗಳ ನೇತೃತ್ವದಲ್ಲಿ ಔಷಧಿ ವ್ಯಾಪಾರಿಗಳು ಕಪ್ಪುಪಟ್ಟಿ ಧರಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಔಷಧಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ, ದೇಶದಲ್ಲಿ ಆನ್ ಲೈನ್ ಔಷಧ ಮಾರಾಟವನ್ನು ದೇಶದಲ್ಲಿ ಸಂಪೂರ್ಣವಾಗಿ ನಿಲ್ಲಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಔಷಧಿ ನಿಯಂತ್ರಣ ಇಲಾಖೆ ಹಾಗೂ ಆಯಾ ತಾಲೂಕು ಸಂಘಗಳು ತಾಲೂಕು ಆಡಳಿತಕ್ಕೆ ಮನವಿ ಅರ್ಪಿಸಿದರು.

ಸಂಘದ ಪದಾಧಿಕಾರಿಗಳು ಮಾತನಾಡಿ, ಆನ್ ಲೈನ್ ಔಷಧ ಮಾರಾಟ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಾನೂನು ಬಾಹಿರವಾಗಿ ಆನ್‌ಲೈನ್ ಮೂಲಕ ಔಷಧಿ ವ್ಯಾಪಾರ ನಡೆಸುತ್ತಿರುವ ಸಂಸ್ಥೆಗಳು ಹಾಗೂ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಸರ್ಕಾರ ಮೊದಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಜನಜೀವನ ಮೇಲೆ ಗಂಭೀರ ಪರಿಣಾಮ:

ಕೇಂದ್ರ ಸರ್ಕಾರವು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್‌ ಕಾಯ್ದೆ 1940 ಹಾಗೂ ಅದರಡಿ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ ಔಷಧಿ ಮಾರಾಟಕ್ಕೆ ಸಂಬಂಧಿಸಿದಂತೆ ಅಗತ್ಯ ಪರವಾನಗಿ, ನೋಂದಣಿ ಮತ್ತು ಅರ್ಹತೆಯ ಮಾನದಂಡ ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಈಚಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕಾನೂನು ಬಾಹಿರವಾಗಿ ಆನ್ ಲೈನ್ ಮೂಲಕ ಔಷಧಿ ಮಾರಾಟ ಮತ್ತು ವಿತರಣೆ ಮಾಡುತ್ತಿದ್ದಾರೆ. ಇದು ಜನರ ಆರೋಗ್ಯ, ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.

ಸರ್ಕಾರ ಮತ್ತು ಔಷಧಿ ನಿಯಂತ್ರಣ ಇಲಾಖೆ ನಿಯಮಾನುಸಾರ ಅನರ್ಹ ವ್ಯಕ್ತಿಗಳ ಮೂಲಕ ಔಷಧಿ ವಿತರಣೆ ಹಾಗೂ ಮಾರಾಟ ನಿಷೇಧಿತವಾಗಿದೆ. ಕಂಪೋಸಿಟ್ ಕಂಪನಿಗಳಿಂದ ನಡೆಸಲ್ಪಡುವ ಡಿಸ್ಟ್ರಿಬ್ಯೂಷನ್ ವ್ಯಾಪಾರದಲ್ಲಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಔಷಧಿ ವ್ಯಾಪಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ನರ್ಸಿಂಗ್ ಹೋಂ, ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಮಾರಾಟ ನಡೆಸಲು ಪರವಾನಗಿ ಕಡ್ಡಾಯವಾಗಿದ್ದು, ಸರ್ಕಾರದ ಅಧಿಸೂಚನೆಗಳ ಪ್ರಕಾರ ಮಾತ್ರ ಅವು ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ತನಿಖೆ ನಡೆಸಿ, ಕ್ರಮ ಕೈಗೊಳ್ಳಿ:

ಆದರೆ, ಸರ್ಕಾರ, ಇಲಾಖೆ ನಿಯಮಗಳನ್ನೆಲ್ಲಾ ಉಲ್ಲಂಘಿಸಿ, ಅನೇಕ ಆನ್ ಲೈನ್ ವೇದಿಕೆಗಳು ಮತ್ತು ಅನಧಿಕೃತ ವ್ಯಕ್ತಿಗಳು ಔಷಧಿಗಳನ್ನು ಮನೆ ಬಾಗಿಲಿಗೆ ಪೂರೈಸುತ್ತಿರುವುದು ಕಂಡು ಬರುತ್ತಿದೆ. ಇದು ನಕಲಿ ಔಷಧಿ, ವೈದ್ಯರ ಸಲಹೆ ಇಲ್ಲದೇ, ಔಷಧಿ ಬಳಕೆ ಹಾಗೂ ಸಾರ್ವಜನಿಕರ ಆರೋಗ್ಯದ ಅಪಾಯಗಳಿಗೂ ಕಾರಣವಾಗುವ ಸಾಧ್ಯತೆ ಇದೆ. ಕಾನೂನು ಬಾಹಿರವಾಗಿ ಆನ್ ಲೈನ್ ಔಷಧಿ ವ್ಯಾಪಾರ ಮಾಡುವ ಸಂಸ್ಥೆಗಳು, ವ್ಯಕ್ತಿಗಳು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರಿಯಾಯಿತಿ ನೀತಿ ಮಾರಕ:

ಆನ್ ಲೈನ್ ಔಷಧಿ ಮಾರಾಟದಿಂದ ಆಗುವ ಅಪಾಯ, ಅನಾಹುತ, ದುರಂತಗಳ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರ, ಔಷಧಿ ನಿಯಂತ್ರಣ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು. ನಿಯಂತ್ರಣವಿಲ್ಲದ ಆನ್ ಲೈನ್ ಔಷಧಿ ಮಾರಾಟವು ಅಪಾಯ ತಂದೊಡ್ಡಲಿವೆ. ಅಕ್ರಮ ಇ-ಫಾರ್ಮಸಿಗಳ ಹಾವಳಿಯಿಂದ ಸಮಸ್ಯೆಯಾಗುತ್ತಿದೆ. ನಕಲಿ ವೈದ್ಯರ ಚೀಟಿ ಬಳಕೆಯಿಂದಲೂ ಅಪಾಯ ಹೆಚ್ಚಲಿದೆ. ಆ್ಯಂಟಿ ಬಯೋಟಿಕ್‌, ಚಟಕ್ಕೆ ಬೀಳಿಸುವ ಔಷಧಿಗಳ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು. ರೋಗಿ ಮತ್ತು ಫಾರ್ಮಸಿಸ್ಟ್ ಮಧ್ಯೆ ನೇರ ಸಂಪರ್ಕದ ಕೊರತೆಯಾಗಲಿದೆ. ಅನಗತ್ಯ ಹಾಗೂ ಅತಿಯಾದ ರಿಯಾಯಿತಿ ನೀತಿ ಮಾರಕವಾಗಲಿದೆ ಎಂದು ಎಚ್ಚರಿಸಿದರು.

ಸಂಘದ ಎಸ್.ಜಿ.ರುದ್ರೇಶ, ಬಿ.ಒ. ಮಲ್ಲಿಕಾರ್ಜುನ, ಡಿ.ಎಂ.ಪ್ರಭಾಕರ ಸ್ವಾಮಿ, ಕೆ.ವಿಠಲರಾಜ, ಜೆ.ಬಿ.ಶಂಭುಲಿಂಗಪ್ಪ, ವಿ.ಎ.ಸುನಿಲ್, ಟಿ.ಎಂ.ವೀರೇಂದ್ರ, ಎಲ್.ಜಿ.ಮಲ್ಲಿಕಾರ್ಜುನ, ಸೈಯದ್ ಸುಭಾನ್, ಎನ್.ಮಹೇಶ, ಎನ್.ಜಯಣ್ಣ, ಎಂ.ಬಸವರಾಜ, ಕೆ.ಇ. ಪ್ರಕಾಶ, ಡಿ. ಬಾಲಚಂದ್ರ ರೆಡ್ಡಿ, ಮಂಜುನಾಥ ಬಾಬು, ಎಂ.ಶಶಿಧರ, ಪ್ರವೀಣ ಡಿ.ಜೈನ್, ರಮೇಶ ವಿ.ಜೈನ್, ವೈ.ಬಿ.ಕೃಷ್ಣಾಜಿ, ಕೆ.ಕರಿಯಪ್ಪ, ಎಸ್.ನಾಗರಾಜ, ಬಿ.ಹಜ್ಮತ್‌ವುಲ್ಲಾ, ವಿಜಯಕುಮಾರ, ಎಂ.ಪ್ರಕಾಶ, ನಾಗರಾಜ ಗೋಡ್ಬೋಳೆ, ಶಿವಕುಮಾರ, ವಸಂತ, ರವಿಕುಮಾರ ನುಗ್ಗೇಹಳ್ಳಿ ಇತರರು ಇದ್ದರು.

- - -

(ಬಾಕ್ಸ್‌) * ಆನ್‌ಲೈನ್ ಔಷಧಿ ಮಾರಾಟಕ್ಕೆ ಕಡಿವಾಣ ಬೀಳಲಿ

ಅಕ್ರಮ ಇ-ಫಾರ್ಮಸಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಅತಿಯಾದ ರಿಯಾಯಿತಿ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ಚಿಲ್ಲರೆ ಔಷಧಿ ಅಂಗಡಿಗಳಿದ್ದು, ದೇಶದಲ್ಲಿ ಸುಮಾರು 12.40 ಲಕ್ಷಕ್ಕೂ ಅಧಿಕ ಔಷಧಿ ವ್ಯಾಪಾರಿಗಳಿದ್ದಾರೆ. ಸರ್ಕಾರ ಮೊದಲು ಆನ್ ಲೈನ್ ಔಷಧಿ ಮಾರಾಟಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

- - -

-(ಫೋಟೋಗಳಿವೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರುದ್ರಭೂಮಿಗಾಗಿ ವೀರಶೈವ ಲಿಂಗಾಯತ ಸಮಾಜದಿಂದ ತಹಸೀಲ್ದಾರರಿಗೆ ಮನವಿ
ಪರೀಕ್ಷಾ ಪ್ರಾಧಿಕಾರಗಳು ಜವಾಬ್ದಾರಿಯಿಂದ ಕೆಲಸ ಮಾಡಲಿ