ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿ, ಪೆಟ್ರೋಲ್ ಬಾಂಬ್ ಎಸೆದಿದ್ದನ್ನು ಖಂಡಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ಗುರುವಾರ ಚಿಕ್ಕಮಗಳೂರು ನಾಗರಿಕ ಸಮಿತಿ ಸಾರ್ವಜನಿಕ ಗಣೋತ್ಸವ ಮಂಡಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್, ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ನಡೆದಿರುವ ದಾಳಿ ಪೂರ್ವ ನಿಯೋಜಿತ. ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದೇಶಕ್ಕೆ ಮೊಘಲರು ಬಂದ ಮೇಲೆಯೇ ಮುಸ್ಲಿಮರು ಬಂದಿದ್ದು. ಮುಸ್ಲಿಮರು ಬರುವ ಮೊದಲು ಭಾರತದಲ್ಲಿ ಇದ್ದಿದ್ದು ಹಿಂದೂಗಳು ಮಾತ್ರ. ಹೀಗೆ ಎಲ್ಲಿಂದಲೋ ಬಂದ ಮುಸ್ಲಿಮರು ಹಿಂದೂಗಳ ಭೂಮಿ ಅತಿಕ್ರಮಣ ಮಾಡಿ ಬದುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಸ್ಲಿಮರು ಹೇಳಿದಂತೆ ಹಿಂದೂಗಳು ಕೇಳಲು ಆಗುವುದಿಲ್ಲ. ಎಲ್ಲರೂ ಸಂವಿಧಾನ ಹೇಳಿದಂತೆ ಕೇಳಬೇಕು. ಸಂವಿಧಾನದಲ್ಲಿ ಎಲ್ಲಿಯೂ ಮಸೀದಿ ದರ್ಗಾಗಳ ಎದುರು ಬ್ಯಾಂಡ್ ಬಾರಿಸಬಾರದು. ಭಜನೆ ಮಾಡಬಾರದು ಎಂದು ಹೇಳಿಲ್ಲ. ಮಸೀದಿಯಲ್ಲಿ ಪ್ರತಿದಿನ ಆಜಾನ್ ಕೂಗಲಾಗುತ್ತದೆ. ನಾವು ಕಾನೂನಿಗೆ ಗೌರವ ಕೊಟ್ಟು ಅದನ್ನು ಸಹಿಸಿಕೊಂಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಶಶಿ ಆಲ್ದೂರು, ಶಾಮ್ ಗೌಡ, ಸಚಿನ್ ಗೌಡ, ಜೆಸಂತ ಅನಿಲ್ ಕುಮಾರ್, ಮಂಜುನಾಥ್, ಸುನಿಲ್, ದೀಪು ಹಾಗೂ ಕಾರ್ಯಕರ್ತರು ಇದ್ದರು.12 ಕೆಸಿಕೆಎಂ 6ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಯುವಕರು ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಗುರುವಾರ ಚಿಕ್ಕಮಗಳೂರು ನಾಗರಿಕ ಸಮಿತಿ ಸಾರ್ವಜನಿಕ ಗಣೋತ್ಸವ ಮಂಡಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.