ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 19, 2026, 02:00 AM IST
ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.  | Kannada Prabha

ಸಾರಾಂಶ

ಬಸವರಾಜ ಶೀಲವಂತರ ಮಾತನಾಡಿ, ಖರ್ಗೆ ಅವರಿಗೆ ಮಾಡಿರುವ ಅವಮಾನ ಕೇವಲ ಒಬ್ಬ ವ್ಯಕ್ತಿಗಲ್ಲ, ಇಡೀ ದಲಿತ ಮತ್ತು ಶೋಷಿತ ವರ್ಗಕ್ಕೆ ಮಾಡಿರುವ ಅಪಮಾನ. ಈ ಮನಸ್ಥಿತಿಯ ವಿರುದ್ಧ ಚಳವಳಿಯ ಬೆಂಕಿಯನ್ನು ದೇಶವ್ಯಾಪಿ ತೀವ್ರಗೊಳಿಸಬೇಕಿದೆ ಎಂದರು.

ಗದಗ: ಉತ್ತರಾಖಂಡದ ಹಲದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಹಿಂದೂಪರ ಸಂಘಟನೆಗಳು ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಹಾಗೂ ಹೋಮ, ಹವನ ನಡೆಸಿರುವುದನ್ನು ಖಂಡಿಸಿ ಮಂಗಳವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಹಾಗೂ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಬಸವರಾಜ ಶೀಲವಂತರ ಮಾತನಾಡಿ, ಖರ್ಗೆ ಅವರಿಗೆ ಮಾಡಿರುವ ಅವಮಾನ ಕೇವಲ ಒಬ್ಬ ವ್ಯಕ್ತಿಗಲ್ಲ, ಇಡೀ ದಲಿತ ಮತ್ತು ಶೋಷಿತ ವರ್ಗಕ್ಕೆ ಮಾಡಿರುವ ಅಪಮಾನ. ಈ ಮನಸ್ಥಿತಿಯ ವಿರುದ್ಧ ಚಳವಳಿಯ ಬೆಂಕಿಯನ್ನು ದೇಶವ್ಯಾಪಿ ತೀವ್ರಗೊಳಿಸಬೇಕಿದೆ ಎಂದರು.

ಅಶೋಕ ಬರಗುಂಡಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸಂವಿಧಾನ ಕಟ್ಟಿಕೊಟ್ಟ ನಾಡಿನಲ್ಲಿ ಇಂದಿಗೂ ಅಸ್ಪೃಶ್ಯತೆ ಮತ್ತು ಜಾತೀಯತೆ ಜೀವಂತವಾಗಿದೆ ಎಂಬುದನ್ನು ಮನುವಾದಿಗಳು ತೋರಿಸಿಕೊಟ್ಟಿದ್ದಾರೆ. ಹಿಂದೆ ಬಾಬು ಜಗಜೀವನ್‌ರಾಂ ಅವರಿಗೂ ಇದೇ ರೀತಿ ಮೂರ್ತಿ ಅನಾವರಣದ ವೇಳೆ ಅಪಮಾನ ಮಾಡಲಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಮುಖ ನಾಯಕರು. ಅವರಿಗೆ ಜಾತಿಯ ಹೆಸರಿನಲ್ಲಿ ಅಪಮಾನ ಮಾಡಿರುವುದು ನಾಡಿನ ಆತ್ಮಸಾಕ್ಷಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಕಡೇಮನಿ ಮಾತನಾಡಿ, ರಾಷ್ಟ್ರಮಟ್ಟದ ಹಿರಿಯ ನಾಯಕರಿಗೇ ಈ ಮಟ್ಟದ ಜಾತಿ ತಾರತಮ್ಯ ಎದುರಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ದೇಶದಲ್ಲಿ ಇಂತಹ ಹೀನ ಕೃತ್ಯಗಳು ಮರುಕಳಿಸುತ್ತಿರುವುದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಗದಗ ಬಂದ್ ಕರೆ ನೀಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

​ಮುಖಂಡ ಮಾರ್ತಾಂಡಪ್ಪ ಹಾದಿಮನಿ ಮಾತನಾಡಿ, ದೇಶದ ಮೂಲ ನಿವಾಸಿಗಳಾದ ಶೋಷಿತರಿಗೆ ಅವಮಾನ ಸಹಿಸಲು ಸಾಧ್ಯವಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಶಕ್ತಿಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ನಂತರ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ಸೂಳಿಭೂಮಿ ಮುಂತಾದವರು ಮಾತನಾಡಿದರು. ​ಪ್ರತಿಭಟನಾನಿರತರು ಕೇಂದ್ರ ಸರ್ಕಾರ ಹಾಗೂ ಮನುವಾದಿಗಳ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು, ಪ್ರಗತಿಪರ ಚಿಂತಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂದೇ ಮಾತರಂ ಗೀತೆಗೆ ಅಗೌರವ ತೋರಿದ ಘಟನೆ ಖಂಡನೀಯ
ಕಳಸಾರೋಹಣ, ಸಂಭ್ರಮದ ಪೂರ್ಣಕುಂಭ ಶೋಭಾಯಾತ್ರೆ