ಬಡವರ ಬಿಪಿಎಲ್‌ ಕಾರ್ಡ್‌ ಸ್ಥಗಿತ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Oct 30, 2024, 12:39 AM ISTUpdated : Oct 30, 2024, 12:40 AM IST
29ಎಚ್‌ಪಿಟಿ3- ಹೊಸಪೇಟೆಯಲ್ಲಿ ಬಡವರ ಬಿಪಿಎಲ್‌ ಕಾರ್ಡ್‌ ಸ್ಥಗಿತಕ್ಕೆ ವಿರೋಧಿಸಿ ಸ್ಲಂ ಜನರ ಸಂಘಟನೆ ಹಾಗೂ ನಗರ ವಿಕಲಚೇತನರ ಸಂಘಟನೆಯ ಸದಸ್ಯರು ತಹಸೀಲ್ದಾರ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೂಡಲೇ ಸರ್ಕಾರ ಆಹಾರ ಇಲಾಖೆ ಎಡವಟ್ಟನ್ನು ಸರಿಪಡಿಸಿ ಅರ್ಹ ಎಲ್ಲರಿಗೆ ಪಡಿತರ ಚೀಟಿಗಳನ್ನು ನೀಡಿ ಪಡಿತರ ಆಹಾರ ಧಾನ್ಯವನ್ನು ವಿತರಿಸಲು ಒತ್ತಾಯಿಸಲಾಯಿತು.

ಹೊಸಪೇಟೆ: ಕುಟುಂಬಗಳ ತಲಾ ಆದಾಯದ ಕಾರಣವನ್ನು ಇಟ್ಟುಕೊಂಡು ಏಕಾಏಕಿ ಸಾವಿರಾರು ಬಡವರ ಬಿಪಿಎಲ್ ಕಾರ್ಡ್ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಸ್ಲಂ ಜನರ ಸಂಘಟನೆ ಹಾಗೂ ನಗರ ವಿಕಲಚೇತನರ ಸಂಘಟನೆಯ ಸದಸ್ಯರು ಇಲ್ಲಿನ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ಆಶ್ರಿತ್ ವೆಂಕಟೇಶ ಅವರಿಗೆ ಮನವಿ ಸಲ್ಲಿಸಲಾಯಿತು.

ಆಹಾರ ಇಲಾಖೆ ಇತ್ತೀಚಿಗೆ ಹೊಸ ನಿಯಮ ಜಾರಿ ಮಾಡಿದ್ದು, ಆ ನಿಯಮದ ಪ್ರಕಾರ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರ ತಲಾ ಆದಾಯವನ್ನು ಕೂಡಿಸಿ ₹1.20 ಲಕ್ಷ ವಾರ್ಷಿಕ ಆದಾಯ ಮೀರಿದ ಪಡಿತರ ಚೀಟಿಗಳನ್ನು ಏಕಾಏಕಿ ಸ್ಥಗಿತಗೊಳಿಸಿ ಲಕ್ಷಾಂತರ ಬಡಬಗ್ಗರ ಪಡಿತರವನ್ನು ಪಡೆಯದಂತೆ ಮಾಡಲಾಗಿದೆ. ಆಹಾರ ಇಲಾಖೆ ಹಾಗೂ ಅಧಿಕಾರಿಗಳ ಎಡವಟ್ಟಿನಿಂದಾಗಿ ಸಾವಿರಾರು ಪಡಿತರ ಚೀಟಿಗಳು ಸ್ಥಗಿತಗೊಂಡಿದ್ದು, ರಾಜ್ಯದಲ್ಲಿ ಲಕ್ಷಾಂತರ ಜನ ಪಡಿತರ ಧಾನ್ಯವಿಲ್ಲದೆ ಉಪವಾಸ ಇರಬೇಕಾದ ದುಸ್ಥಿತಿಯನ್ನು ತಂದೊಡ್ಡಿದೆ ಎಂದು ಸಂಘಟನೆಗಳ ಮುಖಂಡರಾದ ವೆಂಕಟೇಶ, ಬಿ.ಟಿ. ಮಂಜುನಾಥ ಹೇಳಿದರು.

ಆಹಾರ ಇಲಾಖೆಯು ಕುಟುಂಬದ ಸದಸ್ಯರ ತಲಾ ಆದಾಯವನ್ನು ಕ್ರೋಢೀಕರಿಸುವಾಗ ಆ ಪಡಿತರ ಚೀಟಿಯ ಕುಟುಂಬದ ಸದಸ್ಯರಲ್ಲಿ ವಿಶೇಷ ಚೇತನರು, ಮಕ್ಕಳು, ವೃದ್ಧರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು, ದೈಹಿಕವಾಗಿ ಬಲಹೀನಗೊಂಡವರು, ದುಡಿಯಲು ಆಗದ ಅಶಕ್ತರು, ಇರುವುದನ್ನು ಅಂದಾಜಿಸದೆ ತಮ್ಮ ಸರ್ವಾಧಿಕಾರ ಹಾಗೂ ಕುರುಡು ನಿಯಮವನ್ನು ಜಾರಿಗೆ ತರುವುದರ ಮೂಲಕ ದೊಡ್ಡ ಎಡವಟ್ಟು ಮಾಡಿದೆ. ಈ ಎಡವಟ್ಟಿನಿಂದಾಗಿ ಹೊಸಪೇಟೆ ತಾಲೂಕಿನಲ್ಲಿ 1500ಕ್ಕೂ ಹೆಚ್ಚು ಪಡಿತರ ಚೀಟಿಗಳು ರದ್ದಾಗಿದ್ದು, 9 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳು ಸ್ಥಗಿತಗೊಂಡಿವೆ. ಕೂಡಲೇ ಸರ್ಕಾರ ಆಹಾರ ಇಲಾಖೆ ಎಡವಟ್ಟನ್ನು ಸರಿಪಡಿಸಿ ಅರ್ಹ ಎಲ್ಲರಿಗೆ ಪಡಿತರ ಚೀಟಿಗಳನ್ನು ನೀಡಿ ಪಡಿತರ ಆಹಾರ ಧಾನ್ಯವನ್ನು ವಿತರಿಸುವಂತೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಲೋಹಿತ್‌, ಅಂಜಿನಿ, ಹುಲಿಗೆಮ್ಮ, ಮೌನೇಶ್, ಕೆ. ನಿಂಗಪ್ಪ, ಹನುಮಂತ, ಖಾಜಬನ್ನಿ, ಶೇಕ್ಷಾವಲಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ಲಸಿಕೆ ಹಾಕಿಸಿ ಅಂಗವಿಕಲತೆ ಹೋಗಲಾಡಿಸಿ: ಪೂರ್ಣಿಮಾ
ಬಡವರಿಗೆ ನಲ್ಲೂರು ಕುಟುಂಬ ಕೊಡುಗೆ ಅಪಾರ: ಓಂಕಾರ ಶ್ರೀ