ಕನ್ನಡಪ್ರಭ ವಾರ್ತೆ ಶಹಾಪುರ
ನಗರದಲ್ಲಿ ಅನಧಿಕೃತ ತರಬೇತಿ ಕೇಂದ್ರಗಳನ್ನು ಮುಚ್ಚದಿದ್ದರೆ ಆ.5 ರಿಂದ ಕನ್ನಡ ಶಾಲೆಗಳ ಉಳಿವಿಗಾಗಿ ಶಾಲೆಗಳಿಗೆ ರಜೆ ಘೋಷಿಸಿ, ಕ್ಷೇತ್ರ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ತಹಸೀಲ್ದಾರ್ ಕಾರ್ಯಾಲಯದವರೆಗೆ ಪ್ರತಿಭಟನೆ ನಡೆಸಿ, ನಿರಂತರ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್. ಚನ್ನಬಸು ವನದುರ್ಗ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸಲೆಂಟ್ ನವೋದಯ ತರಬೇತಿ ಕೇಂದ್ರ, ವಿದ್ಯಾದೀಪ (ಗಬ್ಬೂರು) ನವೋದಯ ತರಬೇತಿ ಕೇಂದ್ರ, ಜೀನಿಯಸ್ ತರಬೇತಿ ಕೇಂದ್ರಗಳು ಸೇರಿದಂತೆ ಇನ್ನು ಹಲವಾರು ಕೋಚಿಂಗ್ ಸೆಂಟರ್ಗಳು ತರಬೇತಿ ನೀಡುತ್ತಿವೆ. ಅನಧಿಕೃತ ತರಬೇತಿ ಕೇಂದ್ರಗಳಲ್ಲಿ ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳ ಮಕ್ಕಳು ತರಬೇತಿ ಕೇಂದ್ರಕ್ಕೆ ಹೋಗುತ್ತಿರುವುದರಿಂದ ಸರಕಾರಿ ಮತ್ತು ಖಾಸಗಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಎಂದರು.ಕೆಲವರು ಸರಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿ, ಸರ್ಕಾರಿ ಶಾಲೆಗೆ ಕಳುಹಿಸದೇ ಬೇರೆ ಕಡೆ ಕೋಚಿಂಗ್ ಸೆಂಟರ್ ಗಳಿಗೆ ಕಳಿಸುತ್ತಿದ್ದಾರೆ. ಇದರಿಂದ ಮಗುವಿನ ಹೆಸರಲ್ಲಿ ಸರ್ಕಾರದ ಸೌಲಭ್ಯಗಳು ದುರ್ಬಳಕೆಯಾಗುತ್ತಿವೆ. ಇದಕ್ಕೆ ಶಿಕ್ಷಣ ಇಲಾಖೆ ಪ್ರೋತ್ಸಾಹ ನೀಡುತ್ತಿರುವುದು ದುರಂತದ ಸಂಗತಿ ಎಂದು ಬೇಸರ ಹೊರ ಹಾಕಿದರು.ಈ ಬಗ್ಗೆ ಮನವಿ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ನಗರದಲ್ಲಿ 120 ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು ಅದರಲ್ಲಿ 60 ರಿಂದ 65 ಕನ್ನಡ ಮಾಧ್ಯಮ ಶಾಲೆಗಳಿವೆ. ಕಳೆದ ಎರಡು ವರ್ಷಗಳಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.ವಿದ್ಯಾದೀಪ ಕೋಚಿಂಗ್ ಸೆಂಟರ್ಗೆ ಇತ್ತೀಚೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯ ಸದಸ್ಯ ಶಶಿಧರ್ ಕೋಸುಂಬೆ ಭೇಟಿ ನೀಡಿದಾಗ ವಿದ್ಯಾದೀಪ ತರಬೇತಿ ಕೇಂದ್ರದಲ್ಲಿ ಯಾವ ವಿದ್ಯಾರ್ಥಿಗಳು ಇರದೇ ಬೀಗ ಹಾಕಲಾಗಿತ್ತು. ಭೇಟಿ ನೀಡುವ ಬಗ್ಗೆ ಮಾಹಿತಿ ನೀಡಿದವರು ಯಾರು..? ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲವು ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.ಅನಧಿಕೃತ ತರಬೇತಿ ಕೇಂದ್ರಗಳ ಬಗ್ಗೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಗಮನಕ್ಕೂ ತರಲಾಗಿದೆ. ಆ.5 ರಿಂದ 9ರ ವರೆಗೆ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಆ.11ರಿಂದ ಪ್ರತಿ ಐದು ಶಾಲೆಗಳು ಅನಧಿಕೃತ ತರಬೇತಿ ಕೇಂದ್ರಗಳ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಅನಧಿಕೃತ ತರಬೇತಿ ಕೇಂದ್ರಗಳು ಯಾವ ಹಂತದಲ್ಲಾದರೂ ಮುಚ್ಚಬಹುದು. ಪಾಲಕರು ಅನಧಿಕೃತ ತರಬೇತಿ ಕೇಂದ್ರಗಳಿಗೆ ಕೊಟ್ಟಿರುವ ಹಣವನ್ನು ಕೂಡಲೇ ಹಿಂದಿರುಗಿಸಿಕೊಳ್ಳಬೇಕು ಎಂದು ಪಾಲಕರಿಗೆ ಮನವಿ ಮಾಡಿದರು. ಖಾಸಗಿ ಕನ್ನಡ ಮಾಧ್ಯಮ ಶಾಲೆ ಒಕ್ಕೂಟದ ಕಾರ್ಯದರ್ಶಿ ವಿ. ಸತ್ಯಂರೆಡ್ಡಿ, ಸಂಚಾಲಕ ಮಲ್ಲಿಕಾರ್ಜುನ ಪಾಟೀಲ್, ಶರಣು ಪಾಟೀಲ್, ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ, ಸಹ ಕಾರ್ಯದರ್ಶಿ ತಿಪ್ಪಣ್ಣ ಕ್ಯಾತನಾಳ, ಖಜಾಂಚಿ ಪ್ರವೀಣ ಫಿರಂಗಿ, ಉಪಾಧ್ಯಕ್ಷ ವೈ.ಎಂ. ಪಾಟೀಲ್ ಸೇರಿದಂತೆ ಖಾಸಗಿ ಒಕ್ಕೂಟದ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಇದ್ದರು.