ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ, ದೌರ್ಜನ್ಯ ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಬ್ಬಂದಿ ಮೇಲೆ ನಡೆಸಿದ ದೌರ್ಜನ್ಯ ಎಸಗಿದ ಕೆಆರ್ಎಸ್ ಪಕ್ಷದ ಮೂವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲೂಕು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಯ ಆವರಣದಲ್ಲಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಮುಖ್ಯವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ಮಾತನಾಡಿ, ಆಸ್ಪತ್ರೆಯಲ್ಲಿ ಅನಾಥ ರೋಗಿಗಳಿಗೆ, ಸಾರ್ವಜನಿಕರಿಗೆ ಯಾವುದೆ ಲೋಪ ಆಗದಂತೆ ಚಿಕಿತ್ಸೆ ಜೋತೆಗೆ ಸೇವೆ ನೀಡಲಾಗುತ್ತಿದೆ. ಕೆಆರ್ಎಸ್ ಪಕ್ಷದವರು ಎಂದು ಹೇಳಿಕೊಂಡ ಮುತ್ತು ಮಹಿಷವಾಡಗಿ, ಸಾಗರ ಕುಂಬಾರ, ಶಿವಾನಂದ ಹೂಗಾರ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದರ ಜೊತೆಗೆ ದೌರ್ಜನ್ಯ ಎಸಗಿದ್ದು, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಿಬ್ಬಂದಿ ಕೊರತೆ ಇದ್ದರೂ ಜನರಿಗೆ ಯಾವುದೇ ತೊಂದರೆ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ವಿನಾಕಾರಣ ಆಸ್ಪತ್ರೆಯ ತೆಜೋವಧೆ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮಿಶಿ, ದಾನೇಶ ಘಾಟಗೆ, ಯಮನಪ್ಪ ಗುಣದಾಳ, ರಾಜೇಸಾಬ ಕಡಕೋಳ ಮಾತನಾಡಿದರು.
ಶ್ರೀನಾಥ ನವಣಿ, ಡಾ. ಸುನೀತಾ ಎಚ್.ಡಿ, ಡಾ.ರಷ್ಮಿ ಪಾಟೀಲ, ಡಾ.ವಿ.ಎಸ್. ಕಂದಗಲ್ಲ, ಡಾ.ಸುಧೀರ ಬೆನಕಟ್ಟಿ, ಡಾ.ಎಂ.ಎ. ದೇಸಾಯಿ, ಡಾ.ಗೀತಾ, ಡಾ. ಶ್ರೀಶೈಲ ನಾಯಿಕ, ಡಾ.ಪವನ ಬಳ್ಳೂರ ಇತರರು ಇದ್ದರು. ದಲಿತಪರ ಹಾಗೂ ವಿವಿಧ ಸಂಘಟನೆ, ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.