ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಪ್ರತಿಭಟನೆ

KannadaprabhaNewsNetwork | Published : Dec 21, 2024 1:19 AM

ಹಿರಿಯೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರ್ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಹಿರಿಯೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಸಮಿತಿ ವತಿಯಿಂದ ತಹಸೀಲ್ದಾರ್ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಮಂಗಳವಾರ ನಡೆದ ಸದನದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಅವರು ಕೇಂದ್ರ ಗೃಹ ಮಂತ್ರಿಗಳಾಗಿರುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನದ ಅಡಿಯಲ್ಲಿ ಎಂಬುದನ್ನು ಮರೆತಿದ್ದಾರೆ. ಅಂಬೇಡ್ಕರ್ ಅವರೊಂದು ಶಕ್ತಿಯಾಗಿದ್ದು, ಇಡೀ ದೇಶದ ಅಡಿಪಾಯ ಅವರು ರಚಿಸಿದ ಸಂವಿಧಾನದ ಮೇಲೆ ನಿಂತಿದೆ. ಅಂತಹ ಮಹಾನ್ ಶಕ್ತಿಯ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನವನ್ನು ಗೌರವಿಸದ ಯಾವೊಬ್ಬ ವ್ಯಕ್ತಿಗೂ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅಸ್ಪೃಶ್ಯರು, ದಲಿತರು, ಶೋಷಿತರು ಬಾಬಾ ಸಾಹೇಬರ ಸಿದ್ಧಾಂತಗಳಿಗೆ ತಲೆಬಾಗುವ ಎಲ್ಲಾ ಅನುಯಾಯಿಗಳು ಅಂಬೇಡ್ಕರ್ ರವರನ್ನು ದೇವರೆಂದೇ ಪೂಜಿಸುತ್ತಿದ್ದು, ಅಂತಹವರನ್ನು ಖಂಡಿಸಲು ಇವರಿಗೆ ಅಧಿಕಾರವನ್ನು ಕೊಟ್ಟವರು ಯಾರು? ಆದ್ದರಿಂದ ಅವರು ರಾಜೀನಾಮೆ ನೀಡುವವರೆಗೂ ಹೋರಾಟಗಳು ನಿಲ್ಲುವುದಿಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್‌ ನ ಭಕ್ತರಿಗೆ ದಲಿತರ, ಶೋಷಿತರ ಅಸ್ಪೃಶ್ಯತೆಯ ಕಷ್ಟಗಳು ತಿಳಿಯುವುದಿಲ್ಲ. ಆದ್ದರಿಂದ ಸಚಿವರ ಮೇಲೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಘವೇಂದ್ರ.ಆರ್, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಸೆಲ್ ಗ್ರಾಮಾಂತರ ಅಧ್ಯಕ್ಷ ಜಿ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಕೃಷ್ಣಮೂರ್ತಿ, ಗೋವಿಂದಪ್ಪ, ಲಕ್ಷ್ಮಣ ರಾವ್, ಓಂಕಾರಪ್ಪ, ರಂಗಸ್ವಾಮಿ, ಕೆಂಚಪ್ಪ, ಮಂಜುನಾಥ್, ತಿಪ್ಪೇಸ್ವಾಮಿ, ಹರಳಯ್ಯ, ನಾಗರಾಜ್ ಮತ್ತಿತರರಿದ್ದರು.