ಮಳಗಿಯಲ್ಲಿಯೇ ಗ್ರಿಡ್ ನಿರ್ಮಾಣ ಮಾಡಲು ರೈತರ ಒತ್ತಾಯ
ಹಾವೇರಿ ಜಿಲ್ಲೆಯ ಬದಲು ಉತ್ತರ ಕನ್ನಡ ಜಿಲ್ಲೆಯಿಂದಲೇ ತಮಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಮಳಗಿ ಗ್ರಾಮದಲ್ಲಿ ಮಳಗಿ, ಕೊಡಂಬಿ, ಪಾಳಾ, ಬೆಡಸಗಾಂವ ಭಾಗದ ರೈತರು ಶಿರಸಿ-ಹುಬ್ಬಳ್ಳಿ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಹಾವೇರಿ ಜಿಲ್ಲೆ ಹಾನಗಲ್ ವಿದ್ಯುತ್ ಉಪ ಕೇಂದ್ರದಿಂದ ಪಾಳಾ ಗ್ರಿಡ್ ಮೂಲಕ ಪಾಳಾ, ಮಳಗಿ, ಕೋಡಂಬಿ, ಬೆಡಸಗಾಂವ ಸುತ್ತಮುತ್ತ ಪ್ರದೇಶಗಳಿಗೆ ವಿದ್ಯುತ್ ಪೂರೈಸಲಾಗುತ್ತದೆ. ಆದರೂ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗುವುದಿಲ್ಲ. ದಿನಕ್ಕೆ ಹತ್ತಾರು ಬಾರಿ ವಿದ್ಯುತ್ ಕಡಿತಗೊಳ್ಳುತದೆ. ಕೇಳಿದರೆ ಹಾವೇರಿಯಿಂದ ಮೇನ್ ಸಪ್ಲೈ ಹೋಗಿದೆ ಯಾವಾಗ ಬರುತ್ತದೆ ಹೇಳಲು ಸಾಧ್ಯವಿಲ್ಲ ಎಂಬ ಉತ್ತರ ನೀಡಲಾಗುತ್ತದೆ. ಸಾಲ ಶೂಲ ಮಾಡಿ ಬೋರ್ವೆಲ್ ಕೊರೆಸಿ ಬೆಳೆ ಬೆಳೆಯಲಾಗುತ್ತಿದೆ. ಪದೇ ಪದೇ ವಿದ್ಯುತ್ ಕಡಿತಗೊಳ್ಳುವುದರಿಂದ ಬೋರವೆಲ್ ಗೆ ಅಳವಡಿಸಲಾದ ಮೋಟಾರಗಳು ಸುಟ್ಟು ಹೋಗುತ್ತಿವೆ. ಇದರಿಂದ ಜೀವನ ನಡೆಸುವುದು ಕಷ್ಟಸಾದ್ಯವಾಗುತ್ತಿದ್ದು, ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳು ಬೀದಿಪಾಲಾಗುವ ಸ್ಥಿತಿ ಬಂದಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯಕ್ಕೆ ನೀಡುವ ನಮಗೇ ಸಮರ್ಪಕವಾದ ವಿದ್ಯುತ್ ಪೂರೈಕೆಯಾಗದೆ ಇರುವುದು ಶೋಚನಿಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ತಕ್ಷಣದಿಂದ ಹಾವೇರಿ ಜಿಲ್ಲೆ ಮೇನ್ ಸಪ್ಲೈ ತೆಗೆದು ಉತ್ತರ ಕನ್ನಡ ಜಿಲ್ಲೆಯಿಂದಲೇ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಬೇಕು. ಅಲ್ಲದೇ ವಿದ್ಯುತ್ ಗ್ರಿಡ್ ನಿರ್ಮಾಣಕ್ಕಾಗಿ ಮಳಗಿ ಗ್ರಾಮ ಪಂಚಾಯಿತಿಯಿಂದ ೧ ಎಕರೆ ಜಾಗ ಕಾಯ್ದಿರಿಸಲಾಗಿದೆ. ಆದ್ದರಿಂದ ಮಳಗಿಯಲ್ಲಿಯೇ ಗ್ರಿಡ್ ನಿರ್ಮಾಣ ಮಾಡಬೇಕು ಎಂದು ಪಟ್ಟು ಹಿಡಿದರು.ಬಳಿಕ ಸ್ಥಳಕ್ಕಾಗಮಿಸಿದ ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ, ಶಿರಸಿ ವಿದ್ಯುತ್ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಚೋಟಿ, ಮುಂಡಗೋಡ ವಿದ್ಯುತ್ ಉಪ ವಿಭಾಗದ ಸಹಾಯಕ ಎಂಜಿನಿಯರ್ ಧರ್ಮರಾಜ ಮುಂತಾದ ಅಧಿಕಾರಿಗಳು ಇನ್ಮುಂದೆ ವಿದ್ಯುತ್ ಕಡಿತಗೊಳ್ಳದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಒಂದು ವರ್ಷದೊಳಗಾಗಿ ಹಾವೇರಿ ಬದಲಾಗಿ ಜಿಲ್ಲೆಯಿಂದಲೇ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಲಾಗುವು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
೯ಎಂಎನ್.ಡಿ೧,೨
ಹಾವೇರಿ ಜಿಲ್ಲೆಯ ಬದಲು ಉತ್ತರ ಕನ್ನಡ ಜಿಲ್ಲೆಯಿಂದಲೇ ತಮಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಮಳಗಿ ಗ್ರಾಮದಲ್ಲಿ ಮಳಗಿ, ಕೊಡಂಬಿ, ಪಾಳಾ, ಬೆಡಸಗಾಂವ ಭಾಗದ ರೈತರು ಶಿರಸಿ-ಹುಬ್ಬಳ್ಳಿ ಹೆದ್ದಾರಿ ತಡೆದು ಪ್ರತಿಭಟಿಸಿದರು.