ಕನ್ನಡಪ್ರಭ ವಾರ್ತೆ ಪಾವಗಡ
ಬೆಳಿಗ್ಗೆ ಸರ್ಕಾರಿ ಹಾಗೂ ಹೊರಗುತ್ತಿಗೆಯರು ಸೇರಿ 120ಕ್ಕಿಂತ ಹೆಚ್ಚು ನೌಕರರು ಪುರಸಭೆ ಅವರಣದಲ್ಲಿ ಶಾಮೀಯಾನ ಹಾಕಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದರು. ಬಳಿಕ ಪಟ್ಟಣದ ಶ್ರೀ ಶನೇಶ್ವರಸ್ವಾಮಿ ವೃತ್ತದಿಂದ ಬಳ್ಳಾರಿ ರಸ್ತೆಯ ತಾಲೂಕು ಕಚೇರಿಯ ವರೆವಿಗೆ ಪ್ರತಿಭಟನೆಯ ಮೆರವಣಿಗೆ ತೆರಳಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
ಈ ವೇಳೆ ಮಾತನಾಡಿದ ಮುಖಂಡರು, ಪುರಸಭೆಯ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಾವುಗಳು ಸಾರ್ವಜನಿಕರಿಗೆ ಅತ್ಯವಶ್ಯಕ ಸೇವೆಗಳಾದ ಸ್ವಚ್ಛತೆ ಹಾಗೂ ನೀರು ಸರಬರಾಜು ಒದಗಿಸುವ ಕೆಲಸದಲ್ಲಿ ನಿರತರಾಗಿದ್ದು, ಅನೇಕ ವರ್ಷಗಳಿಂದ ಹಲವಾರು ಸೇವಾ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪೌರಸೇವಾ ನೌಕರರಿಗೂ ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ.ಕೆ.ಜಿ.ಎ.ಡಿ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ಸರಿ ಸುಮಾರು 20-25 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು ಮತ್ತು ಲೋಡರ್ಸ್,ಚಾಲಕರು, ಕಂಪ್ಯೂಟರ್ ಆಪರೇಟರ್ಗಳು. ಜ್ಯೂನಿಯರ್ ಪ್ರೋಗ್ರಾಮರ್ ಮತ್ತು ಲೆಕ್ಕಿಗರನ್ನು ಖಾಯಂಗೊಳಿಸಬೇಕು. ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂಗೊಳಿಸುವುದು. ಎಸ್.ಎಫ್.ಸಿ (ರಾಜ್ಯ ಹಣಕಾಸು ಆಯೋಗ) ವೇತನ ನಿಧಿಯಿಂದ ಎಲ್ಲಾ ಪೌರಸೇವಾ ನೌಕರರಿಗೂ ವೇತನ ಪಾವತಿ ಮಾಡಬೇಕಾಗಿರುತ್ತದೆ. ಹೀಗಾಗಿ ಎಲ್ಲಾ ಬೇಡಿಕೆಗಳನ್ನು ಸರ್ಕಾರದಿಂದ ಈಡೇರಿಸಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರ ಸೇವಾ ನೌಕರರ ಜೀವನಮಟ್ಟ ಸುಧಾರಿಸಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಡಿ.ಎನ್.ವರದರಾಜು ಮಾತನಾಡಿ ಪುರಸಭೆಯ ಪೌರ ಸೇವಾ ನೌಕರರ ಬೇಡಿಕೆಯ ಮನವಿ ಪತ್ರ ಸ್ವೀಕರಿಸಿದ್ದು ಪರಿಶೀಲಿಸಲಾಗಿದೆ. ಈ ಕೂಡಲೇ ಸರ್ಕಾರದ ಗಮನ ಸೆಳೆದು ವರದಿ ಸಲ್ಲಿಸಲಿರುವ ಭರವಸೆ ವ್ಯಕ್ತಪಡಿಸಿದರು
ಇದೇ ವೇಳೆ ಹಿರಿಯ ಆರೋಗ್ಯಧಿಕಾರಿ ಶಂಷುದ್ದೀನ್,ಎಂಜಿನಿಯರ್ಗಳಾದ ಯಂಜೇಶ್ಬಾಬು, ವಿಜಯಲಕ್ಷ್ಮೀ, ಪುರಸಭೆಯ ಕಂದಾಯ ಅಧಿಕಾರಿ ಪ್ರದೀಪ್, ಕಚೇರಿಯ ವ್ಯವಸ್ಥಾಪಕ ಸಂತೋಷ್, ಲೆಕ್ಕಾಧಿಕಾರಿ ಹರೀಶ್, ಹಿರಿಯ ಸಮುದಾಯದ ಸಂಘಟನಾಧಿಕಾರಿ ಭಾಗ್ಯಮ್ಮ, ಗಿರಿಜಮ್ಮ,ಸೌಭಾಗ್ಯ,ಕಂದಾಯ ತನಿಖಾಧಿಕಾರಿ, ನಂದೀಶ, ಜಿ.ಕೆ.ಹರೀಶ್, ಮಂಜುನಾಥ್ ,ರಾಮಕೃಷ್ಣ, ಶಾಂತಕುಮಾರ್, ಸುನಿತಾ, ರಾಜೇಶ್ವರಿ, ಪ್ರತಿಮಾ, ರಿಯಾಜ್ ಜಿಲಾನಿ, ಸತೀಶ್, ದಾದಾಪೀರ್ ಎಲ್ಲಾ ಪೌರಸೇವಾ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.