ದ್ವಿಚಕ್ರ, ರಿಕ್ಷಾ ಚಾಲಕರು ಪ್ರತಿನಿತ್ಯ ವಾಹನ ದುರಸ್ತಿಗೆ ಹಣ ವ್ಯಯಿಸುವ ದುಸ್ಥಿತಿ ಕನ್ನಡಪ್ರಭ ವಾರ್ತೆ ಹೊನ್ನಾವರ
ಬಸ್ ನಿಲ್ದಾಣಕ್ಕೆ ಆಗಮಿಸುವ ಕೋರ್ಟ್ ರಸ್ತೆಯು ಸಹ ಹೊಂಡಮಯವಾಗಿದೆ. ದುರ್ಗಾಕೇರಿ, ಪ್ರಭಾತನಗರ, ರಾಯಲಕೇರಿ, ಸೇರಿದಂತೆ ಪಟ್ಟಣದ ವಿವಿಧ ಭಾಗದಲ್ಲಿ ರಸ್ತೆಗಳು ಹೊಂಡಮಯವಾಗಿದ್ದು, ಸಾರ್ವಜನಿಕರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಹೊಂಡ ತಪ್ಪಿಸಲು ಹೋಗಿ ಹಲವರು ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಹೋಗುವಾಗ ವಾಹನ ಬಂದಾಗ ಕೆಸರುಮಯ ನೀರು ಸಿಂಪಡಣೆಯಾದ ನಿದರ್ಶನಗಳು ಆಗಿವೆ. ದ್ವಿಚಕ್ರ ಹಾಗೂ ರಿಕ್ಷಾ ಚಾಲಕರು ಪ್ರತಿನಿತ್ಯ ವಾಹನ ದುರಸ್ತಿಗೆ ಹೆಚ್ಚಿನ ಹಣ ವ್ಯಯಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ.ಎನ್. ಗೌಡ ಮಾತನಾಡಿ, ಪಟ್ಟಣದ ರಸ್ತೆಗಳು ಹೊಂಡಮಯವಾಗಿದೆ. ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಜನರು ಬರುತ್ತಾರೆ. ಅಲ್ಲದೇ ಬೇರೆ ತಾಲೂಕು, ಜಿಲ್ಲೆಗೆ ತೆರಳುವ ಬಸ್ ನಿತ್ಯ ಬರುವಾಗ ಈ ಮುಂಭಾಗದ ಹೊಂಡದಿಂದ ಹೊನ್ನಾವರದ ಮಾನ ಹರಾಜು ಆಗುತ್ತಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರ ಸಮಸ್ಯೆ ಮನಗಂಡು ಸಾಂಕೇತಿಕವಾಗಿ ಇಂದು ಪ್ರತಿಭಟನೆ ಮಾಡಲಾಗಿದೆ. 15 ದಿನದೊಳಗೆ ಹೊಂಡಮಯ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದೇ ಹೊದಲ್ಲಿ ಪಪಂ ಮುಂದೆ ಜನಪ್ರತಿನಿಧಿಗಳ ಮನೆ ಹಾಗೂ ಕಚೇರಿಯ ಎದುರು ಸಾರ್ವಜನಿಕರು, ರಿಕ್ಷಾ ಚಾಲಕರ ಸಹಕಾರದ ಮೇರೆಗೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಉದ್ಯಮಿ ಅನುಪ ಪ್ರಭು, ಪರಮೇಶ್ವರ ಮೇಸ್ತ, ಗಣಪತಿ ಗೌಡ, ರಾಜೇಂದ್ರ ಪ್ರಭು, ಶಂಕರ ಮೇಸ್ತ, ಪ್ರಕಾಶ ಪಿಂಟೋ, ರಾಮನಾಥ ನಾಯ್ಕ, ಮಹೇಶ ಭಂಡಾರಿ ಇತರರಿದ್ದರು.