ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ
ಸೌತನಹಳ್ಳಿ ಗೋಮಾಳದಲ್ಲಿ ಅಜ್ಜಂಪುರ ಪಟ್ಟಣ ಪಂಚಾಯಿತಿ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಬೇಕು ಎಂದು ತಾಲೂಕಿನ ಸೊಲ್ಲಾಪುರ, ಬೇಗೂರು, ಮುಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಎಸ್. ಎಂ. ನಾಗರಾಜ್ ಮಾತನಾಡಿ ಘಟಕ ನಿರ್ಮಾಣ ಸ್ಥಳ ಗೋಮಾಳ ಆಗಿದೆ. ಇದು ಸುತ್ತಲೂ ಹತ್ತಾರು ಗ್ರಾಮಗಳ ಸಾವಿರಾರು ಜಾನುವಾರುಗಳ ಮೇವಿಗೆ ಮೂಲವಾಗಿದೆ. ಘಟಕ ನಿರ್ಮಿಸಿದರೆ ಜಾನುವಾರುಗಳ ಮೇವಿಗೆ ಕುತ್ತು ಬರಲಿದೆ. ಹೈನುಗಾರಿಕೆ ನಡೆಸಿ ಜೀವನ ನಿರ್ವಹಿಸುತ್ತಿರುವ ಬಹುತೇಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಜಿಪಂ ಮಾಜಿ ಸದಸ್ಯ ಎಂ ಕೃಷ್ಣಮೂರ್ತಿ ಮಾತನಾಡಿ ಘಟಕ ನಿರ್ಮಾಣ ಭೂಮಿ ರಾಷ್ಟ್ರೀಯ ಹೆದ್ದಾರಿ 176ಕ್ಕೆ ಹೊಂದಿ ಕೊಂಡಿದ್ದು ಘಟಕದ 100 ಮೀ. ಅಂತರದಲ್ಲಿ ವೇದಾವತಿ ನದಿ ಪಾತ್ರವಿದೆ. ಘಟಕದಿಂದ ನೀರು ವಿಷಯುಕ್ತವಾದರೆ ಜಲಚರ ಗಳ ಜೀವಕ್ಕೆ ಸಂಚಕಾರ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
-- ಬಾಕ್ಸ್--
ಜನ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕುಘಟಕ ನಿರ್ಮಾಣದಿಂದಾಗುವ ದುಷ್ಪರಿಣಾಮವನ್ನು ಗಂಬೀರವಾಗಿ ಪರಿಗಣಿಸಬೇಕು. ಘಟಕ ನಿರ್ಮಾಣ ಸ್ಥಗಿತಗೊಳಿಸಿ ಸ್ಥಳಾಂತರಸಬೇಕು. ಜಿಲ್ಲಾಡಳಿತ ಜನ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಗರಗದಹಳ್ಳಿ ಹೈಕೋರ್ಟ್ ವಕೀಲ ವಸಂತ್ ಕುಮಾರ್ ಹೇಳಿದರು.
ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದ ಅವರು ಈ ಕಾಮಗಾರಿಗೆ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲಾಗುವುದು ಎಂದು ತಿಳಿಸಿದರು.