ಪ್ರಾಧಿಕಾರದ ಹಣ ದುರ್ಬಳಕೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 22, 2026, 02:00 AM IST
21ಕೆಕೆಆರ್1:ಕೊಪ್ಪಳ ನಗರದ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಿವೇಶನಾಕಾಂಕ್ಷಿಗಳ ೮.೪೩ ಕೋಟಿಗೂ ಅಧಿಕ ಹಣ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ವೇಳೆ   ನಗರದ ಪ್ರಾಧಿಕಾರ ಕಚೇರಿಗೆ ಬಿಜೆಪಿಯವರು ಮುತ್ತಿಗೆ ಹಾಕುವ ವೇಳೆ ಪೊಲೀಸರು ಬಂಧಿಸಿದರು.  | Kannada Prabha

ಸಾರಾಂಶ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಕೊಪ್ಪಳ ಶಾಸಕರು ಯಾಕೆ ಮಾತನಾಡುತ್ತಿಲ್ಲ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ನಿವೇಶನಾಕಾಂಕ್ಷಿಗಳ ₹೮.೪೩ ಕೋಟಿಗೂ ಅಧಿಕ ಹಣ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ಜರುಗಿತು. ನಗರದ ಪ್ರಾಧಿಕಾರ ಕಚೇರಿಗೆ ಬಿಜೆಪಿಯವರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಪ ಸದಸ್ಯೆ ಹೇಮಲತಾ ನಾಯಕ್, ಸ್ವಂತ ನಿವೇಶನದ ಕನಸು ಕಂಡು ಹಣ ಪಾವತಿಸಿದ್ದ ನೂರಾರು ಸಾರ್ವಜನಿಕರ ₹೮.೪೩ ಕೋಟಿಗೂ ಅಧಿಕ ಹಣದ ದುರುಪಯೋಗವಾಗಿರುವ ಆರೋಪ ಗಂಭೀರವಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿರುವ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್‌ಗೆ ಪ್ರಾಧಿಕಾರದಲ್ಲಿ ಇಂತಹ ಜವಾಬ್ದಾರಿ ಹೇಗೆ ದೊರೆಯಿತು ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಕೊಪ್ಪಳ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಯಾರ ಒತ್ತಡದ ಮೇಲೆ ₹೮.೪೩ಕೋಟಿ ಹಣ ಅನೇಕ ಅಕೌಂಟ್‌ಗೆ ಜಮೆಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದರು.

ಸಚಿವ ತಂಗಡಗಿ, ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಹಗರಣದ ಕುರಿತು ಯಾವಾಗ ಉತ್ತರ ಕೊಡುತ್ತಿರಿ...? ಎಂಬುದನ್ನು ತಿಳಿಸಿ, ನಿಮಗೆಲ್ಲ ಇದರಲ್ಲಿ ಎಷ್ಟೆಷ್ಟು ಪಾಲು ಬಂದಿದೆ ಎಂಬುದನ್ನು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ಆರೋಪಿಯ ಕುಟುಂಬಸ್ಥರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಕುರಿತು ತನಿಖೆ ನಡೆಸಿ ಹಣದ ಅಂತಿಮ ಫಲಾನುಭವಿ ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ವಿಳಂಬವಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯ ಪೊಲೀಸ್ ತನಿಖೆಯ ಬದಲಿಗೆ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ಶಿವರಾಮೇಗೌಡ, ಮಹಾಂತೇಶ ಪಾಟೀಲ್, ಗಣೇಶ ಹೊರತಟ್ನಾಲ್, ಸುನೀಲ ಹೇರೂರು, ವೀರೇಶ ಸಜ್ಜನ್, ವೆಂಕಟೇಶ ಹಾಲವರ್ತಿ, ಅಮರೇಶ್ ಮುರಳಿ, ಅಂದಪ್ಪ, ಪುಟ್ಟರಾಜು, ಮಹಾಲಕ್ಷ್ಮಿ ಕಂದಾರಿ, ಬಸವರಾಜ್ ಉಳ್ಳಾಗಡ್ಡಿ, ದೀಪಕ್, ಉಮೇಶ್, ಗುರ್ರಪ್ಪ, ದೇವಪ್ಪ ಹ್ಯಾಟಿ, ನಾಗು ದೊಡ್ಡಮನಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

ಕಚೇರಿ ಮುತ್ತಿಗೆ ಯತ್ನ: ಕೈಯಲ್ಲಿ ಭಿತ್ತಿ ಪತ್ರ ಹಿಡಿದು ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪ್ರಾಧಿಕಾರದ ಕಚೇರಿಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ-ನುಗ್ಗಾಟ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಬಿಜೆಪಿ ನಿಯೋಗವು ಎಸ್ಪಿ ಅರಸಿದ್ದಿ ಅವರನ್ನು ಭೇಟಿಯಾಗಿ ನಾಯಕರ ಸಹಿ ಒಳಗೊಂಡ ಮನವಿಪತ್ರ ಸಲ್ಲಿಸಿತು. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ತನಿಖೆಗೊಳಪಡಿಸಿ ಶೀಘ್ರ ಆರೋಪಿಗಳನ್ನು ಬಂಧಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವುದಾಗಿ ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.

ಭ್ರಷ್ಟರನ್ನು ಕಾಪಾಡುವ ಸರ್ಕಾರ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಕಾಪಾಡುವ ಕೆಲಸ ಆಗುತ್ತಿದೆ ಎಂದು ಎಂ.ಎಲ್.ಸಿ ಹೇಮಲತಾ ನಾಯಕ ಹೇಳಿದರು.

ಕೊಪ್ಪಳ ಭ್ರಷ್ಟರಿಗೆ ರೆಡ್ ಕಾರ್ಪೆಟ್ ಹಾಸಿಗೆ ಹಾಸಿ ಕರೆಸಿಕೊಂಡ ಹಾಗೇ ಆಗಿದೆ. ಪ್ರಾಧಿಕಾರದ ಹಣ ತನ್ನ ಸ್ವಂತ ಖಾತೆಗೆ ಹಾಗೂ ಕುಟುಂಬದವರಿಗೆ ವರ್ಗಾವಣೆ ರವೀಂದ್ರ ಎಂಬಾತನು ಮಾಡಿಕೊಂಡಿದ್ದಾನೆ. ಇಷ್ಟೆಲ್ಲ ಭ್ರಷ್ಟಾಚಾರ ಆಗಿದೆ. ಇದು ಜಿಲ್ಲಾಡಳಿತದ ವೈಫಲ್ಯ ಇದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಯಾರೋ ಇದ್ದಾರೆ. ಅದಕ್ಕೆ ಇಷ್ಟೆಲ್ಲ ನಡೆದಿದೆ. ಹಿಂದೆ ನಿರ್ಮಿತಿ ಕೇಂದ್ರದಲ್ಲಿ ಅವ್ಯವಹಾರವಾಗಿತ್ತು. ರವೀಂದ್ರನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಗೆ ಬರುತ್ತೇವೆ ಎಂದು ಗೊತ್ತಾಗಿ ನಮಗಿಂತ ಹೆಚ್ಚು ಜನ ಪೊಲೀಸರು ಬಂದು ಪ್ರತಿಭಟನೆ ನಿಲ್ಲಿಸುತ್ತಿದ್ದಾರೆ. ಪ್ರತಿಭಟನೆಗೆ ಅವಕಾಶ ಸಹ ಕೊಡುತ್ತಿಲ್ಲ. ಡಿಕೆಶಿ ಸಿಎಂ ಆಗಿದ್ದರಿಂದ ಬದಲಾವಣೆ ಆಗುತ್ತದೆ ಎಂದು ಭಾವಿಸಿದ್ದೇವು. ಆದರೆ ಮಾತಿನ ಪ್ರಕಾರ ಸಹ ನಡೆದುಕೊಳ್ಳುತ್ತಿಲ್ಲ ಎಂದರು.

ಪ್ರತಿಭಟನೆಗೆ ತಡೆದ ಪೊಲೀಸರ ವಿರುದ್ಧ ಎಂ.ಎಲ್‌.ಸಿ ಹೇಮಲತಾ ನಾಯಕ ಹರಿಹಾಯ್ದರು. ಕಾನೂನು ನಮಗೆ ಹೇಳಿಕೊಡುತ್ತಿರಿ, ಕಾನೂನು ನೀವೇ ಮುರಿಯುತ್ತಿರಿ ಎಂದು ವಾದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಶೀಲಾ ಹೆಗಡೆಗೆ ನಾಟಕ ಅಕಾಡೆಮಿ ಪ್ರಶಸ್ತಿ
ಬಿಜೆಪಿ ಕಾರ್ಯಕರ್ತರು-ಪೊಲೀಸರ ನಡುವೆ ಹೈಡ್ರಾಮಾ