ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Jul 1, 2025 1:48 AM

ಭ್ರಷ್ಟಾಚಾರದ, ಪಂಚಾಯತ ವ್ಯವಸ್ಥೆ, ವಿಕೇಂದ್ರೀಕರಣ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದ ಸರ್ಕಾರ

ಯಲ್ಲಾಪುರ: ಕಾಂಗ್ರೆಸ್ ರಾಜ್ಯವನ್ನು ದಿವಾಳಿ ದಿಕ್ಕಿನತ್ತ ಸಾಗಿಸುತ್ತಿದೆ. ಇದೊಂದು ತುಷ್ಠೀಕರಣದ ಸರ್ಕಾರ. ಭ್ರಷ್ಟಾಚಾರದ, ಪಂಚಾಯತ ವ್ಯವಸ್ಥೆ, ವಿಕೇಂದ್ರೀಕರಣ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದ ಸರ್ಕಾರ ಎಂದು ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.

ಅವರು ಜೂ.೩೦ರಂದು ಬಿಜೆಪಿ ಮಂಡಳ ಸಂಘಟಿಸಿದ್ದ ಪ್ರತಿಭಟನಾರ್ಥ ಹಾಸಣಗಿ, ಕಂಪ್ಲಿ, ಉಮ್ಮಚಗಿ, ಕುಂದರಗಿ ಪಂಚಾಯತಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ಗ್ರಾಪಂ ಎದುರು ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.

ಆಡಳಿತ ಪಕ್ಷದ ಶಾಸಕರೇ ಮನೆ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿದ್ದಾರೆ. ಶಾಸಕರೇ ಚರಂಡಿ ಮಾಡಲು ಹಣ ಇಲ್ಲ ಎನ್ನುತ್ತಿರುವುದು ಈ ಸರ್ಕಾರದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ದಿವಾಳಿ ಸರ್ಕಾರವನ್ನು ಹಿಂದೆಲ್ಲೂ ಕಂಡಿಲ್ಲ. ಈ ಸರ್ಕಾರದ ವಿರುದ್ಧ ಜನ ಧ್ವನಿ ಎತ್ತಬೇಕಾಗಿದೆ. ಇಲ್ಲವಾದರೆ ಅಭಿವೃದ್ಧಿ ಈಗ ೨ ವರ್ಷ ಇಲ್ಲದ ಹಾಗೆ ಮುಂದಿನ ೩ ವರ್ಷ ಕೂಡ ಅಭಿವೃದ್ಧಿ ಇಲ್ಲದಂತಾಗುತ್ತದೆ ಎಂದರು.

ರಾಜ್ಯ ಮಹಿಳಾ ಮೋರ್ಚಾ ಪ್ರಮುಖಿ ರೇಖಾ ಹೆಗಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗೃಹಲಕ್ಷೀ ಯೋಜನೆ ಹೇಳಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದ ನರ್ಸಿಂಗ್ ಟ್ರೇನಿಂಗ್ ಬಂದ್ ಮಾಡಿದ್ದು, ಸಾವಿರಾರು ಪದವಿ ಪಡೆದ ಮಹಿಳೆಯರ ಸಂತೋಷವನ್ನು ಕಿತ್ತುಕೊಂಡಿದೆ ಎಂದರು.

ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಪಂಚ ಗ್ಯಾರಂಟಿಯಿಂದ ಬಂದ ಸರ್ಕಾರ ಜನರ ಜೀವನಕ್ಕೆ ಮಾರಕವಾಗಿದೆ. ಆಡಳಿತ ವ್ಯವಸ್ಥೆ ಅತ್ಯಂತ ಭ್ರಷ್ಟತೆಯಿಂದ ಕೂಡಿದೆ ಎಂದರು.

ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಕೇಂದ್ರ ಸರ್ಕಾರದ ಪ್ರತಿ ಯೋಜನೆಗಳು ಭಾರತದ ಮುಂದಿನ ೧೦೦ ವರ್ಷ ಭವಿಷ್ಯದ ಕನಸನ್ನು ಹೊತ್ತು ಆಡಳಿತ ನಡೆಸುತ್ತಿದ್ದರೆ ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆಯ ಮೂಲಕ ರಾಜ್ಯ ಸಾಲದ ಶೂಲಕ್ಕೆ ತಳ್ಳಿದೆ ಎಂದು ಹೇಳಿದರು.

ಮಂಡಳ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡ ಯಾವ ಉದ್ದೇಶಕ್ಕಾಗಿ ಪಕ್ಷ ಪ್ರತಿಭಟನೆಯ ಕುರಿತು ವಿವರಿಸಿ, ಗ್ರಾಪಂ ಅವ್ಯವಸ್ಥೆ ಬಗ್ಗೆ ಮಾತನಾಡಿದರು.

ಕಂಪ್ಲಿ ಪಂಚಾಯತ ಅಧ್ಯಕ್ಷೆ ರೇಣುಕಾ ಬಿ ಭೋವಿವಡ್ಡರ, ಸದಸ್ಯ ಗಣೇಶ ಹೆಗಡೆ, ಮಾಜಿ ಅಧ್ಯಕ್ಷ ಪವನಕುಮಾರ ಕೆಸರಕರ ಮಾತನಾಡಿದರು.

ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿನೀಷ ಭಟ್ಟ, ಪ್ರಧಾನ ಕಾರ್ಯದರ್ಶಿ ಬಾಬಣ್ಣ ಪತ್ರೇಕರ, ಪಕ್ಷದ ಪದಾಧಿಕಾರಿಗಳಾದ ರಘುಪತಿ ಹೆಗಡೆ, ಸದಾಶಿವ ಚಿಕ್ಕೊತ್ತಿ, ಪ್ರಸನ್ನ ಭಟ್ಟ ಹಿತ್ಲಳ್ಳಿ, ನಾಗರಾಜ ಭೋವಿವಡ್ಡರ, ಪರಶುರಾಮ ಸಿದ್ದಿ, ದಿವಾಕರ ಪೂಜಾರಿ, ಗಣಪತಿ ಶಂಕರಗದ್ದೆ, ರಾಘು ಹೆಗಡೆ ಕುಂದರಗಿ, ರಾಮು ಹೆಗಡೆ, ಸರಸ್ವತಿ ಪಟಗಾರ, ಶ್ರೀಪಾದ ಸಂಕದಗುಂಡಿ, ಮಣಿಕಂಠ ದೇವಡಿಗ, ಶ್ರೀಧರ ಪೂಜಾರಿ, ನಾರಾಯಣ ಖಂಡೇಕರ, ಸೀತಾರಾಮ ಗೌಡ, ರಾಜೇಂದ್ರ ಗೌಡರ ಯಡಳ್ಳಿ, ರಾಜೇಶ್ ನಾಯ್ಕ, ಮುಸ್ತಾಕ್ ಶೇಕ್, ವಾಸು ಬೋವಿ ಉಪಸ್ಥಿತರಿದ್ದರು.