ಕನ್ನಡಪ್ರಭ ವಾರ್ತೆ ತಿಪಟೂರು
ದೇವನಹಳ್ಳಿಯಲ್ಲಿ ಕೈಗಾರಿಕ ಘಟಕಕ್ಕಾಗಿ ಭೂ ಸ್ವಾಧೀನಪಡಿಸಿಕೊಂಡಿರುವ ರೈತರ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕೆಂದು ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಭೂ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ, ಪ್ರಾಂತ್ಯ ರೈತ ಸಂಘ ಹಾಗೂ ರಾಜ್ಯ ರೈತ ಸಂಘದ ಮುಖಂಡರು ತಾಲೂಕು ಆಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸಣ್ಣ ಮಾತನಾಡಿ, ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ತಮ್ಮ ಸಾವಿರಾರು ಎಕರೆ ಭೂಮಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರು. ಆದರೆ ಸರ್ಕಾರ ರೈತರ ಅಷ್ಟು ದಿನಗಳ ಹೋರಾಟಕ್ಕೆ ಕಿವಿಕೊಡದ ಪರಿಣಾಮ ಈ ಹೋರಾಟ ಬೆಂಬಲಿಸಿ ರಾಜ್ಯದ ಮೂಲೆ ಮೂಲೆಗಳಿಂದ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರ ತನ್ನ ಭೂ ಸ್ವಾಧೀನ ನೀತಿ ಕೈಬಿಡುವವರೆಗೂ ಹೋರಾಟ ಮುಂದುವರೆಯಲು ನಿರ್ಧರಿಸಿದ್ದರು. ಆದರೆ ಅಲ್ಲಿನ ಪೋಲಿಸರು ಏಕಾಏಕಿ ಹೋರಾಟಗಾರರನ್ನು ಅಮಾನವೀಯವಾಗಿ ಹಿಂಸಿಸಿ ಬಂಧಿಸಿದ್ದಾರೆ. ಈ ಹಿನ್ನಲೆಯಲ್ಲಿ ರೈತ ಸಂಘಗಳು ರಾಜ್ಯ ವ್ಯಾಪಿ ಸರ್ಕಾರ ಹಾಗೂ ಪೋಲಿಸರ ದೌರ್ಜನ್ಯ ಕ್ರಮವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು ಕೂಡಲೇ ಅಲ್ಲಿನ ರೈತರ ಫಲವತ್ತಾದ ಭೂಮಿಯನ್ನು ಭೂ ಸ್ವಾಧಿನ ಪ್ರಕ್ರಿಯೆಯಿಂದ ಕೈಬಿಡಬೇಕು, ಬಂಧಿತ ಹೋರಾಟಗಾರರನ್ನು ಪ್ರಕರಣಗಳನ್ನು ದಾಖಲಿಸದೆ ಬಿಡುಗಡೆ ಮಾಡಬೇಕು. ದೌರ್ಜನ್ಯ ಎಸಗಿದ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಾಂತ್ಯ ರೈತ ಸಂಘದ ತಾ. ಗೌರವಾಧ್ಯಕ್ಷ ಕೊಟ್ರಪ್ಪ, ತಾ. ಅಧ್ಯಕ್ಷ ಮಲ್ಲಿಕಯ್ಯ, ಕಾರ್ಯದರ್ಶಿ ಸುಧಾಕರ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಲಾಪುರ ದೇವರಾಜು, ತಾಲೂಕು ಅಧ್ಯಕ್ಷ ಜಯಾನಂದಯ್ಯ, ರೈತ ಮುಖಂಡರುಗಳಾದ ಬಿ. ಯೋಗೀಶ್ವರಸ್ವಾಮಿ, ಸೌಹಾರ್ಧ ಅಲ್ಲಾಬಕಾಶಿ, ಬೆಲೆಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ನಾಗರಾಜು ಸೇರಿದಂತೆ ರೈತರು ಭಾಗವಹಿಸಿದ್ದರು.ಫೋಟೋ 26-ಟಿಪಿಟಿ4ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ :ತಿಪಟೂರು ತಾಲೂಕು ಆಡಳಿತ ಸೌಧದ ಮುಂದೆ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.