ಪಹಲ್ಗಾಂ ನರಮೇಧ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : May 5, 2025 12:51 AM

ಸಾರಾಂಶ

ಪಹಲ್ಗಾಮ್‌ ನರಮೇಧ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳ್ಳಾರಿಯಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಮೆರವಣಿಗೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪಹಲ್ಗಾಮ್‌ ನರಮೇಧ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರವಾಸಕ್ಕೆ ತೆರಳಿದ್ದ ಭಾರತೀಯರ ಮೇಲೆ ಹೇಡಿ ಜಿಹಾದಿಗಳು ಕ್ರೂರತನ ಪ್ರದರ್ಶನ ಮಾಡಿದ್ದಾರೆ. ಧರ್ಮ ಯಾವುದು ಎಂದು ಕೇಳಿಕೊಂಡು ಕೊಲೆಗೈದಿದ್ದಾರೆ. ದೇಶದಲ್ಲಿ ಭಯೋತ್ಪಾದಕ ಜಿಹಾದಿಗಳನ್ನು ನಿರ್ನಾಮ ಮಾಡಬೇಕು. ಭಾರತೀಯ ಮೇಲೆ ಯಾವುದೇ ದಾಳಿಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆಸಿದ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಅಮಾಯಕ ಮುಗ್ಧ ಜನರನ್ನು ಹತ್ಯೆಗೈದಿರುವ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು. ಭಯೋತ್ಪಾದಕರನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಸೂಕ್ತ ಉತ್ತರ ನೀಡಲಿದೆ ಎಂದು ಹೇಳಿದರು.

ಕಾಶ್ಮೀರ ದಾಳಿ ಬಳಿಕ ಭಾರತೀಯರು ಎಚ್ಚೆತ್ತುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಪಾಕಿಸ್ತಾನವನ್ನು ಕ್ಷಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಭಾರತದ ಎಚ್ಚರಿಕೆಗೆ ದಂಗಾಗಿರುವ ಪಾಕಿಸ್ತಾನಿಗಳು, ತಮ್ಮ ವಿರುದ್ಧ ಯುದ್ಧ ಮಾಡದಂತೆ ಹೇಳಿ ಎಂದು ಇತರ ಮುಸ್ಲಿಂ ದೇಶಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಪಾಕಿಗಳ ನಾಟಕಕ್ಕೆ ಜಗ್ಗುವುದಿಲ್ಲ. ಏಟಿಗೆ ಎದುರೇಟು ನೀಡಲೇಬೇಕು. ದುಷ್ಟ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದರು. ಬಿಜೆಪಿ ಮುಖಂಡ ಗಣಪಾಲ ಐನಾಥರೆಡ್ಡಿ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಮೃತ್ಯುಂಜಯಸ್ವಾಮಿ ಬಂಡ್ರಾಳು ಹಾಗೂ ವೇದಿಕೆಯ ನೂರಕ್ಕೂ ಹೆಚ್ಚು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಗರದ ಗಡಗಿ ಚನ್ನಪ್ಪ ವೃತ್ತದಿಂದ ಶುರುಗೊಂಡ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಬಳಿಕ ಜಿಲ್ಲಾಡಳಿತ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಕಳುಹಿಸಿಕೊಡಲಾಯಿತು.

Share this article