ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಹೊರವಲಯದಲ್ಲಿರುವ ವಿಶ್ವವಿದ್ಯಾಲಯದ ಮುಖ್ಯದ್ವಾರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನಂತರ ಕುಲಸಚಿವ ಶಂಕರಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಸತಿ ನಿಲಯಕ್ಕೆ ದಾಖಲಾಗುವ ಸಮಯದಲ್ಲಿ ಆಡಳಿತಾಧಿಕಾರಿಗಳು ಕೇವಲ ₹೧೦೦ ಮಾತ್ರ ಶುಲ್ಕವಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ವಸತಿ ನಿಲಯಕ್ಕೆ ಪ್ರವೇಶ ಮಾಡಿಕೊಂಡಿರುತ್ತಾರೆ. ಎರಡು ವರ್ಷಗಳಿಂದ ಯಾವುದೇ ಶುಲ್ಕ ಕೇಳದೆ ಈಗ ಏಕಾಏಕಿ ಎಲ್ಲಾ ವರ್ಷದ ಶುಲ್ಕವನ್ನು ಒಟ್ಟಿಗೆ ತುಂಬಬೇಕು ಎಂದು ಒತ್ತಾಯಿಸಿ ದಿನನಿತ್ಯ ಮಾನಸಿಕ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದರು.ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಮಾತನಾಡಿ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಮಹಿಳಾ ವಿಶ್ವವಿದ್ಯಾಲಯದ ಸ್ಥಾಪನೆ ಆಗಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ವಸತಿ ಪ್ರದೇಶ ನೀಡಿ, ಇದೀಗ ಏಕಾಏಕಿ ಎಲ್ಲ ವರ್ಷದ ಶುಲ್ಕದ ಕಟ್ಟಿ ಎಂದು ಹೇಳಿ ಬಡ ದಲಿತ ವಿದ್ಯಾರ್ಥಿಗಳಿಂದ ದುಡ್ಡು ವಸೂಲಿಗೆ ಇಳಿದಿರುವುದೂ ದುರಂತ. ಶುಲ್ಕ ಕಟ್ಟದ್ದಿದರೆ ಶೈಕ್ಷಣಿಕ ಕ್ಲಿಯರೆನ್ಸ್ ನೀಡುವುದಿಲ್ಲ ಎನ್ನುವ ಉದ್ದಟತನದ ಮಾತುಗಳಿಂದ ವಿದ್ಯಾರ್ಥಿಗಳಲ್ಲಿ ಆತಂಕ ನಿರ್ಮಾಣವಾಗಿದೆ. ಶುಲ್ಕ ಕಟ್ಟುವ ನೆಪದಲ್ಲಿ ನಿಲಯ ಪಾಲಕರು ವಿದ್ಯಾರ್ಥಿಗಳಿಗೆ ಅಸಭ್ಯವಾಗಿ ವರ್ತಿಸುವುದು ನೋಡಿದರೆ ವಿಶ್ವವಿದ್ಯಾಲಯ ದುಡ್ಡು ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಈಗಲಾದರೂ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿಗಳು ಎಚ್ಚೆತ್ತುಕೊಂಡು ವಿಶ್ವ ವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಹಾಗೂ ವಿಶ್ವ ವಿದ್ಯಾಲಯದಲ್ಲಿನ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಿ ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬೆಳಗಾವಿ ಪರಿಷತ್ ಸಂಚಾಲಕ ಆದರ್ಶ ಗಸ್ತಿ, ಮಾದೇಶ್ ಛಲವಾದಿ, ಸಂದೇಶ್ ಕುಮಟಗಿ, ಪಂಡಿತ್ ಯಲಗೋಡ, ಪ್ರಶಾಂತ್ ದಾಂಡೇಕರ್, ಲತಾ ರಾಠೋಡ್, ಪ್ರತಾಪ ತೋಳನೂರ, ಭೀಮರಾಯ ಬಡಿಗೇರ್, ನಿಂಗಣ್ಣ ವಾಲಿಕಾರ, ಅಜಯ್ ತಮ್ಮಗೋಳ, ಪ್ರವೀಣ್ ಚವಾಣ, ಉಜಾಲ ಕೇರುಟಗಿ, ಪುಟ್ಟಿ ಜಾದಾವ, ರಶ್ಮಿ ಕಾಂಬಳೆ, ಸಾಕ್ಷಿ ಕಾಲೇಬಾಗ, ಪೂಜಾ ರಾವೂರ್, ಮೇಗಶ್ರೀ ನಾಟಿಕಾರ್, ಅಶ್ವಿನಿ ದಾಳಿ, ಗೀತಾ ರಾಠೋಡ, ಪದ್ಮಾವತಿ ನಾಯಕ, ಪ್ರತಿಭಾ ಪೂಜಾರಿ, ಅರ್ಪಿತಾ ಬನಸೋಡೆ, ಕವಿತಾ ರಾಠೋಡ, ಅಕ್ಷತಾ ದಾಶಾಳ, ಅನ್ನಪೂರ್ಣ ಬಂಜಾಳೆ, ಸುಜಾತ ಚವಾಣ, ಸೋನಾಲಿ ಹಿರೇನಾಯ ಮುಂತಾದವರು ಇದ್ದರು.