ಶೃಂಗೇರಿ: ಮೃಗಶೀರ ಮಳೆಯ ಆರ್ಭಟ

KannadaprabhaNewsNetwork | Published : Jun 17, 2025 3:05 AM

ಶೃಂಗೇರಿ, ತಾಲೂಕಿನಾದ್ಯಂತ ಮೃಗಶಿರ ಮಳೆ ಅಬ್ಬರ ಮುಂದುವರಿದಿದ್ದು ಭಾನುವಾರ ರಾತ್ರಿಯಿಡೀ ಮತ್ತು ಸೋಮವಾರವೂ ಸುರಿದ ಮಳೆಯಿಂದಾಗಿ ವಿವಿಧೆಡೆ ಭೂ-ಗುಡ್ಡಕುಸಿತ, ಗಾಳಿ ಮಳ‍ೆಗೆ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಡಿತ, ರಸ್ತೆ ಸಂಪರ್ಕ ಕಡಿತ ಸಹಿತ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗೆ ।ಶ್ರೀ ಮಠದ ನದಿ ತೀರದ ಕಪ್ಪೆಶಂಕರ । ತಗ್ಗು ಪ್ರದೇಶ ಮುಳುಗಡೆ.

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಮೃಗಶಿರ ಮಳೆ ಅಬ್ಬರ ಮುಂದುವರಿದಿದ್ದು ಭಾನುವಾರ ರಾತ್ರಿಯಿಡೀ ಮತ್ತು ಸೋಮವಾರವೂ ಸುರಿದ ಮಳೆಯಿಂದಾಗಿ ವಿವಿಧೆಡೆ ಭೂ-ಗುಡ್ಡಕುಸಿತ, ಗಾಳಿ ಮಳ‍ೆಗೆ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಡಿತ, ರಸ್ತೆ ಸಂಪರ್ಕ ಕಡಿತ ಸಹಿತ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಸೋಮವಾರ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿತ್ತು. ವಾರದ ಸಂತೆ ದಿನವಾದ ಸೋಮವಾರ ಸಂತೆ ವ್ಯಾಪಾರ ವಹಿವಾಟಿಗೂ ಪರಿಣಾಮ ಬೀರಿತು. ಭಾನುವಾರ ಸಂಜೆಯಿಂದಲೇ ಮಂಗಳೂರು ಶೃಂಗೇರಿ ಸಂಪರ್ಕ ಬಂದ್ ಆಗಿದ್ದರಿಂದ ಎಸ್.ಕೆ.ಬಾರ್ಡರ್, ಕೆರೆಕಟ್ಟೆ,ನೆಮ್ಮಾರು ಮಾರ್ಗದಲ್ಲಿ ಪ್ರಯಾಣಿಕರು ಬಸ್ ಸೌಕರ್ಯವಿಲ್ಲದೇ, ವಾಹನ ಸೌಕರ್ಯವಿಲ್ಲದೇ ಪರದಾಡಬೇಕಾಯಿತು.

ಕೆರೆಕಟ್ಟೆ, ಎಸ್.ಕೆ.ಬಾರ್ಡರ್, ನೆಮ್ಮಾರು, ಕಿಗ್ಗ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಯಾಗುತ್ತಿದ್ದು, ತುಂಗಾನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ಶ್ರೀ ಮಠದ ತುಂಗಾನದಿ ತೀರದ ಕಪ್ಪೆ ಶಂಕರ ದೇಗುಲಕ್ಕೂ ನೀರು ನುಗ್ಗಿದ್ದು ಜಲಾವೃತಗೊಂಡಿದೆ. ಪ್ರವಾಹ ಪೀಡಿತ ಗಾಂಧಿ ಮೈದಾನ, ಕುರುಬಗೇರಿಗೂ ಪ್ರವಾಹದ ಭೀತಿ ಉಂಟಾಗಲಿದೆ.

ನರಸಿಂಹ ಪರ್ವತದ ತಪ್ಪಲು ಕಿಗ್ಗಾ, ಸಿರಿಮನೆ, ಸಿಂದೋಡಿ ಸುತ್ತಮುತ್ತಲ ಪ್ರದೇಶಗಳಲೂ ಜೋರಾಗಿರುವ ಮಳೆಯಿಂದ ನಳಿನಿ, ನಂದಿನಿ ನದಿಗಳಲ್ಲಿ ನೀರು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳು, ಅಡಕೆ ತೋಟಗಳು, ಜಮೀನುಗಳಿಗೂ ನೀರು ನುಗ್ಗಿ ಜಲಾವೃತಗೊಂಡಿದೆ.

ಮುಂದುವರಿದ ಭೂಮಿ ಹಾಗು ಗುಡ್ಡಕುಸಿತ:

ನಿರಂತರ ಮಳೆಗೆ ಮಂಗಳೂರು ಶಿವಮೊಗ್ಗ ಸಂಪರ್ಕ ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ಆನೆಗುಂದದಿಂದ ತನಿಕೋಡು ವರೆಗೂ ಅಲ್ಲಲ್ಲಿ ಗುಡ್ಡಕುಸಿದು ರಸ್ತೆಯ ಮೇಲೆ ಬೀಳುತ್ತಿವೆ. ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನೆಮ್ಮಾರು ಸಾಲ್ಮರ ಸಮೀಪ ಶನಿವಾರ ರಾತ್ರಿಯಿಂದ ಗುಡ್ಡ ಕುಸಿತದಿಂದ ಸಂಚಾರ ಕಡಿತಗೊಂಡಿತ್ತು. ಸೋಮವಾರ ಬೆಳಿಗ್ಗೆಯಿಂದ ಪುರರ್ ಆರಂಭಗೊಂಡಿತು.

ಆನೆಗುಂದ ಬಳಿ ರಸ್ತೆ ಸಮೀಪವೇ ಗುಡ್ಡಕುಸಿಯುತ್ತಿರುವುದರಿಂದ ಶೃಂಗೇರಿ, ಕೊಪ್ಪ, ಶಿವಮೊಗ್ಗ ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ. ಆನೆಗುಂದ ಸಮೀಪ ರಸ್ತೆ ಅಗಲೀಕರಣದಲ್ಲಿ ಗುಡ್ಡ ಕೊರೆದ ಪರಿಣಾಮ ಈಗ ಮಳೆಯಿಂದ ಗುಡ್ಡಕುಸಿಯುತ್ತಿದ್ದು ಕೆಲಮನೆಗಳು ಕುಸಿಯುವ ಭೀತಿಯಲ್ಲಿದೆ. ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ತ್ಯಾವಣ ಬಳಿ ನಿರ್ಮಾಣ ಹಂತದ ಸಾರಿಗೆ ಸಂಸ್ಥೆ ಡಿಪೋ ಬಳಿ ಗುಡ್ಡಕುಸಿದು ಮಣ್ಣು ರಸ್ತೆ ಮೇಲೆ ಬೀಳುತ್ತಾ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಇನ್ನೂ ಹಲವೆಡೆ ಭೂಕುಸಿತಗಳು ಉಂಟಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳದ ದಂಡೆಗಳು ಒಡೆದು ರಸ್ತೆ, ಹೊಲ ಗೆದ್ದೆಗಳಿಗೆ ನೀರು ನುಗ್ಗಿ ಹಾನಿಯುಂಟಾಗುತ್ತಿದೆ. ಆಗುಂಬೆ ಶೃಂಗೇರಿ ರಾಜ್ಯಹೆದ್ದಾರಿ ನೇರಳಕೊಡಿಗೆ ಸಮೀಪ ಭೂಕುಸಿತದ ಭೀತಿ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಗುಡ್ಡ ಜರಿದು ಬೀಳುತ್ತಿದ್ದು ಸಂಚಾರ ಕಡಿತ ಗೊಳ್ಳುತ್ತಿದೆ. ಶೃಂಗೇರಿ ವೆಲ್ ಕಂ ಗೇಟ್, ಕೆರೆಆಂಜನೇಯ ಬೀದಿ, ಹೊಸ್ಕೆರೆ ಮಾರ್ಗದಲ್ಲಿ ನಡೆಯತ್ತರುವ ರಾ.ಹೆ. ಅಗಲೀಕರಣ ಕಾಮಗಾರಿ ಸ್ಥಳದಲ್ಲಿ ಮಳೆಯಿಂದಾಗಿ ರಸ್ತೆಯೆಲ್ಲ ಕೆಸರುಮಯ, ಪಾದಚಾರಿ, ವಾಹನ ಸವಾರರಿಗೆ ತೊಂದರೆಯಾಗಿದೆ.

16 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನಾದ್ಯಂತ ಮೃಗಶಿರ ಮಳೆ ಅಬ್ಬರಿಸುತ್ತಿರುವುದರಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು.