ಮಂಡ್ಯ ಗ್ರಾಮಾಂತರ ಗ್ರಾಪಂಗೆ ಸೇರಿದ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ೧೯ ಕುಟುಂಬಗಳು ಕಳೆದ ೪೦ ವರ್ಷದಿಂದ ವಾಸವಾಗಿವೆ. ಇವರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ, ಇ-ಸ್ವತ್ತು ಮಾಡಿಕೊಟ್ಟಿಲ್ಲ, ಇದರಿಂದ ಅವರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ. ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಆಕ್ರೋಶ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದ ೧೯ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಇ-ಸ್ವತ್ತು ಮಾಡಿಕೊಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾ ಪಂಚಾಯ್ತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮಂಡ್ಯ ಗ್ರಾಮಾಂತರ ಗ್ರಾಪಂಗೆ ಸೇರಿದ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ೧೯ ಕುಟುಂಬಗಳು ಕಳೆದ ೪೦ ವರ್ಷದಿಂದ ವಾಸವಾಗಿವೆ. ಇವರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ, ಇ-ಸ್ವತ್ತು ಮಾಡಿಕೊಟ್ಟಿಲ್ಲ, ಇದರಿಂದ ಅವರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ ಎಂದರು.
ಸುವರ್ಣ ಮತ್ತು ದೊಡ್ಡೋಳಮ್ಮರಿಗೆ ಸೇರಿದ ಎರಡು ಮನೆಗಳನ್ನು ಮಾರಾಟ ಮಾಡಲಾಗಿದ್ದು, ಅಧಿಕಾರಿಗಳು ಹಣ ಪಡೆದು ಕೆ.ಜೆ.ವಿಜಯ್ ಮತ್ತು ಆಶಾ ಎಂಬುವರಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಮಂಡ್ಯ ಗ್ರಾಮಾಂತರ ಪಂಚಾಯ್ತಿ ಎಲ್ಲಾ ಕುಟುಂಬಗಳಿಗೂ ಈ ಸ್ವತ್ತು ಮಾಡಿಕೊಟ್ಟು ಮೂಲಸೌಕರ್ಯ ಮತ್ತು ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ವಿಭಾಗೀಯ ಸಂಚಾಲಕ ಟಿ. ಡಿ ಬಸವರಾಜು,ಡಿ.ಕೆ ಅಂಕಯ್ಯ,ಶಿವು ಎಂ, ಮುರುಗನ್, ಉಮೇಶ್ ಉಮ್ಮಡಹಳ್ಳಿ, ಧನಲಕ್ಷ್ಮಿ, ನಾಗಮಣಿ, ಲಕ್ಷ್ಮಿ, ಮಾರಿಯಮ್ಮ, ಸುಶೀಲ, ಯಶೋದಮ್ಮ.ಯಲ್ಲಮ್ಮ, ಆಶಾ, ಸಿ.ಪಿ.ಸೌಮ್ಯ, ವಸಂತ ನೇತೃತ್ವ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.