- ಹೆಬ್ಬಳಿಗೆರೆ ರಾ.ಹೆ.13ರಲ್ಲಿ ರಸ್ತೆ ತಡೆ, ಮನವಿ । ಕಿ.ಮೀ.ವರೆಗೆ ವಾಹನಗಳ ಸಾಲು- - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ತಾಲೂಕಿನ ಹೆಬ್ಬಳಿಗೆರೆ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಸ್ತೆ ತಡೆ, ಧರಣಿ ನಡೆಸಿದರು. ರಸ್ತೆ ತಡೆಯಿಂದಾಗಿ ಕಿಲೋ ಮೀಟರ್ವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು.ರೈತ ಸಂಘದ ಮಲ್ಲಶೆಟ್ಟಿ ಚನ್ನಬಸಪ್ಪ ಮಾತನಾಡಿ, ಒಂದು ತಿಂಗಳಿನಿಂದ ತಾಲೂಕಿನ ಕಂಚಿಗನಾಳ್, ಹರಳಕಟ್ಟ, ಶೆಟ್ಟಿಹಳ್ಳಿ, ಮಾದಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಹೆಬ್ಬಳಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಸಿ.ಕೆಂಚಪ್ಪ ಮಾತನಾಡಿ, ಈಗಾಗಲೇ ಈ ಗ್ರಾಮಗಳಿಗೆ ಸೂಳೆಕೆರೆಯಿಂದ ಕುಡಿಯುವ ನೀರಿನ ಯೋಜನೆ ರೂಪುಗೊಂಡು ಕಾರ್ಯಗತವಾಗಿದೆ. ನೀರಿನ ಹರಿವು ಇಲ್ಲದ ಕಾರಣ ಗ್ರಾಮದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಸ್ತೆತಡೆ ವಿಷಯ ತಿಳಿದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಭಿಯಂತರ ಲೋಹಿತ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವಿ ಆಲಿಸಿದರು. ಹೆಚ್ಚುವರಿ ಮೋಟಾರುಗಳನ್ನು ಅಳವಡಿಸಿ, ನೀರನ್ನು ಪಂಪ್ ಮಾಡುವ ಕೆಲಸ ಈಗಾಗಲೇ ಪ್ರಗತಿಯಲ್ಲಿದೆ. 8-10 ದಿನಗಳಲ್ಲಿ ನೀರಿನ ಸಮಸ್ಯೆ ಇಲ್ಲದಂತೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ತಡೆ ಪ್ರತಿಭಟನೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಬಳಿಕ ರಸ್ತೆ ತಡೆ ಸ್ಥಗಿತಗೊಳಿಸಲಾಯಿತು.
ಸುಮಾರು 2 ಗಂಟೆ ಕಾಲ ರಸ್ತೆ ತಡೆ ನಡೆದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ 1 ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇಲಾಖೆಯ ಅಭಿಯಂತರರಾದ ಹರೀಶ್, ಗಿರೀಶ್ ಹಾಜರಿದ್ದರು. ರಸ್ತೆ ತಡೆಯಲ್ಲಿ ರೈತ ಸಂಘದ ಕಾಳೇಶ್, ಗಣೇಶ್, ಸಿದ್ದೇಶ್, ರಮೇಶ್, ಬಸವಾಪುರ ರಂಗನಾಥ್ ಸೇರಿದಂತೆ ಹರಳಕಟ್ಟ, ಹೆಬ್ಬಳಗೆರೆ ಗ್ರಾಮಸ್ಥರು ಭಾಗವಹಿಸಿದ್ದರು.- - - -25ಕೆಸಿಎನ್ಜಿ1.ಜೆಪಿಜಿ:
ಚನ್ನಗಿರಿ ತಾಲೂಕಿ ಹೆಬ್ಬಳಗೆರೆ ಗ್ರಾಮದ ರಾ.ಹೆ.13ರಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಆಗ್ರಹಿಸಿ ರಸ್ತೆ ತಡೆ ನಡೆಯಿತು.