ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕು ಸರ್ಕಾರಿ ವೈದ್ಯರ ಸಂಘದ ಘಟಕ ಹಾಗೂ ಖಾಸಗಿ ಘಟಕದ ವೈದರು, ಸಿಬ್ಬಂದಿ ಪಟ್ಟಣದ ಅನಕೃ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಕರ್ತವ್ಯ ನಿರತ ವೈದರ ಮೇಲಿನ ಅತ್ಯಾಚಾರ, ಕೊಲೆಯಾಗಿರುವುದು ಅಮಾನುಷ ಕೃತ್ಯವಾಗಿದೆ. ಇದರಿಂದ ವೈದ್ಯಕೀಯ ಸೇವೆ ಸಲ್ಲಿಸುವ ವೃಂದಕ್ಕೆ ಜೀವ ಭಯ ಉಂಟು ಮಾಡಿದೆ. ವೈದ್ಯರಿಗೆ ಸೂಕ್ತ ಭದ್ರತೆ ಇಲ್ಲವಾಗಿದೆ. ಸರ್ಕಾರ ವೈದ್ಯರಿಗೆ ರಕ್ಷಣೆ ನೀಡುವ ಮೂಲಕ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಕಾನೂನು ರೂಪಿಸಬೇಕು ಎಂದು ಮನವಿ ಮಾಡಿದರು. ಅನಕೃ ವೃತ್ತದಿಂದ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ತಾಲೂಕು ಕಚೇರಿ ತನಕ ಸಾಗಿ ಗ್ರೇಡ್- 2 ತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ಡಾ.ಲತಾ, ಡಾ.ನಮೃತಾ, ಡಾ. ಸುರೇಶ್, ಡಾ. ದಿವ್ಯಾ, ಡಾ.ಸಿಂಧು, ಡಾ. ಸುನಿಲ್, ಡಾ.ಅನಿಲ್, ಡಾ.ಶರತ್, ಸಿಬ್ಬಂದಿ ಪಾಲ್ಗೊಂಡಿದ್ದರು.