ಗದಗ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 34ಕ್ಕೆ ಮೂಲಭೂತ ಸೌಕರ್ಯ ಪೂರೈಸುವಂತೆ ಸ್ಥಳೀಯ ನಿವಾಸಿಗಳು ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಾಮಾಜಿಕ ಹೋರಾಟಗಾರ ರವಿಕಾಂತ ಅಂಗಡಿ ಮಾತನಾಡಿ, 34ನೇ ವಾರ್ಡ್ನ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಇಲ್ಲಿಯ ರಸ್ತೆಯು 6 ಅಡಿ ತಗ್ಗು ಪ್ರದೇಶದಲ್ಲಿದ್ದು ಹುಡ್ಕೋ ಕಾಲನಿ ಸೇರಿದಂತೆ ನಗರದ ಹಲವು ಭಾಗಗಳಿಂದ ಗಟಾರು ನೀರು ಹರಿದು ಬರುತ್ತಿದ್ದು, ವಿಪರೀತ ಸೋಳ್ಳೆ ಕಾಟದಿಂದ ಹಲವು ನಿವಾಸಿಗಳು ಡೆಂಘೀ ರೋಗದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಾರ್ಡ್ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಬಹುದಿಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ ಅಮೃತ್ ನಗರೋತ್ಥಾನ ಅಡಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಚರಂಡಿ, ಡಾಂಬರ್ ರಸ್ತೆ ಮಂಜೂರು ಮಾಡಲಾಗಿದ್ದು, ಈ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ 3 ಸಲ ಟೆಂಡರ್ ಕ್ಯಾನ್ಸಲ್ ಆಗಿದ್ದು, ಈಗ ಮಂಜೂರಾಗಿರುವ ಡಾಂಬರ್ ರಸ್ತೆ ಮಾಡದೇ ಸಿಸಿ ರಸ್ತೆ ಮಾಡಿದರೆ ರಸ್ತೆಯು ಗಟ್ಟಿಯಾಗಿ ಇರಲು ಸಾಧ್ಯ ಮತ್ತು ಎಸ್ಎಫ್ಸಿ ಅಡಿಯಲ್ಲಿ ಜನವಸತಿ ಇಲ್ಲದ ಕಡೆ ₹ 20 ಲಕ್ಷ ಮೊತ್ತದ ಬೇರೆ 60 ಪೂಟ್ ಕಾಂಕ್ರೀಟ್ ರಸ್ತೆ ಮಂಜೂರು ಮಾಡಲಾಗಿದ್ದು, ಅದನ್ನು ರದ್ದುಗೊಳಿಸಿ ಜನವಸತಿ ಇದ್ದ ಕಡೆ ಮಾಡಬೇಕು. ಈ ಕೂಡಲೇ ಜಿಲ್ಲಾಡಳಿತ, ನಗರಸಭೆ ಸದಸ್ಯರು ಎಚ್ಚೆತ್ತು ನಮ್ಮ ಬೇಡಿಕೆ ಇಡೇರಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಆಯುಕ್ತರು, ಎಂಜೀನಿಯರ್ ಹಾಗೂ ಸದಸ್ಯೆ ವಿದ್ಯಾವತಿ ಗಡಗಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಆಲಿಸಿ, ನಂತರ ವಾರ್ಡ್ನ ಸಮಸ್ಯೆಯನ್ನು ನಿವಾಸಿಗಳೊಂದಿಗೆ ವಾರ್ಡ್ಗೆ ತೆರಳಿ ಪರಿಶೀಲಿಸಿ ನಿಮ್ಮ ಬೇಡಿಕೆಗಳನ್ನು ಇಡೇರಿಸಲಾಗುವುದೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಆರ್.ಎಂ. ಹೀರೆಮಠ, ವೀರಣ್ಣ ಕಡಗದ, ಫಕೀರಯ್ಯ ಹೀರೆಮಠ, ಎಸ್.ಬಿ.ಶಿವಳ್ಳಿ, ವಿ.ಎಂ. ಕುಂಡದಾಳ ಹೀರೆಮಠ, ಬಿ.ಸಿ. ಪಾಟೀಲ, ಮಹೇಶ ಭೋಜೆದಾರ, ಉಮೇಶ ಅನಕನಹಳ್ಳಿ, ಅಮರಪ್ಪ ಸುಂಕದ, ಸಂಗೀತಾ ದಾಸರ, ವಿದ್ಯಾವತಿ ಪಾಟೀಲ, ರಾಮಣ್ಣ ಪೂಜಾರ, ವಿಜಯ್ ಕೌಜಗೇರಿ, ಕುಮಾರ ಮಿಟ್ಟಿಮಠ, ವಿಜಯಲಕ್ಷ್ಮೀ ಹೀರೆಮನಿ, ಮಹಾದೇವಿ ಅಕ್ಕಮ್ಮನವರ, ಷಣ್ಮುಖ ಅಕ್ಕಮ್ಮನವರ, ಪಿ.ಎ. ನಾಯಕ, ಭೀಮಶಿ ಜಗ್ಗನ್, ಪಂಡಿತ ಹೀರೆಮಠ, ಎಸ್.ಎಂ. ಪಾಟೀಲ, ಬಾಬಾಜಾನ್ ಅಬ್ಬಿಗೇರಿ ಮತ್ತಿತರರು ಇದ್ದರು.