ಶಿರಸಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ, ಈ ಯೋಜನೆ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಎಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕಿರವತ್ತಿ ಮಾತನಾಡಿ, ಈಗಾಗಲೇ ಟಾಟಾ ಪವರ್ ಕಂಪನಿಯು ರಾಜ್ಯದ ಸಮಾನಾಂತರ ವಿದ್ಯುತ್ ವಿತರಣೆ ಪರವಾನಿಗೆ ಪಡೆಯಲು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಮುಂದೆ ಅರ್ಜಿ ಸಲ್ಲಿಸಿರುವ ವಿಷಯ ತಿಳಿದು ಬಂದಿದೆ.
ತಕ್ಷಣವೇ ಈ ನಿರ್ಧಾರ ಕೈಬಿಡಬೇಕು ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಕನ್ನಡದಲ್ಲಿ ನೀಡಬೇಕು ಎಂದು ಆಗ್ರಹಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ ಮಾತನಾಡಿ, ಒಂದು ವೇಳೆ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣೆ ಪರವಾನಗಿ ನೀಡಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಲ್ಲದೆ, ಹಳ್ಳಿ-ಹಳ್ಳಿಗಳಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆದು ಚಳವಳಿ ನಡೆಸಲಾಗುವುದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ರೈತ ಮುಖಂಡರು ಹಾಗೂ ಸಾರ್ವಜನಿಕರಿದ್ದರು.
ವಿದ್ಯುತ್ ಖಾಸಗೀಕರಣ ವಿರೋಧಿಸಿ ಪಟ್ಟಣದ ಹೆಸ್ಕಾಂ ಕಚೇರಿ ಎದುರಿಗೆ ಅಧಿಕಾರಿಗಳು, ನೌಕರರು ಪ್ರತಿಭಟನೆ ನಡೆಸಿದರು.
ಖಾಸಗೀಕರಣದ ದುಷ್ಪರಿಣಾಮ ತಡೆಯುವಂತೆ ಆಗ್ರಹ
ಹೊನ್ನಾವರ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಪಟ್ಟಣದ ಹೆಸ್ಕಾಂ ಕಚೇರಿ ಎದುರಿಗೆ ಅಧಿಕಾರಿಗಳು, ನೌಕರರು ಪ್ರತಿಭಟನೆ ನಡೆಸಿದರು.ಕೇಂದ್ರ, ರಾಜ್ಯ ಸರ್ಕಾರಗಳು ಒಂದೊಂದೇ ಸಾರ್ವಜನಿಕ ವಲಯ ಖಾಸಗೀಕರಣಗೊಳಿಸುತ್ತಿದ್ದು, ವಿದ್ಯುತ್ ಖಾಸಗೀಕರಣ ತಡೆಯದಿದ್ದರೆ ಮುಂದೆ ಹೆಸ್ಕಾಂ ನೌಕರರಷ್ಟೆ ಅಲ್ಲದೇ, ರೈತರು, ಕಾರ್ಮಿಕರು, ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಖಾಸಗೀಕರಣದ ವಿರುದ್ಧ ಹೋರಾಡುತ್ತಿರುವ ಹೆಸ್ಕಾಂ ನೌಕರರಿಗೆ ಸಾರ್ವಜನಿಕರು ರೈತ ಸಂಘಟನೆ ಸೇರಿದಂತೆ ಎಲ್ಲಾ ಸಂಘಟನೆ ಒಗ್ಗೂಡಿ ಬೆಂಬಲಿಸಬೇಕು. ಈಗಾಗಲೇ ರಾಜ್ಯದಲ್ಲಿ ಖಾಸಗೀಕರಣ ನಡೆಸುವ ಕೆಲಸ ಪ್ರಾರಂಭಗೊಂಡಿದೆ. ಟಾಟಾ ಕಂಪನಿ ಖಾಸಗಿಯಾಗಿ ಪಡೆಯಲು ಅರ್ಜಿ ಹಾಕಿದ್ದಾರೆ. ಹೀಗಾಗಿ ಪ್ರತಿಯೊಬ್ಬನಾಗರಿಕರು ಆಕ್ಷೇಪಣೆ ಸಲ್ಲಿಸುವ ಮೂಲಕ ಖಾಸಗೀಕರಣದಿಂದ ಸಂಭವಿಸಬಹುದಾದ ದುಷ್ಪರಿಣಾಮ ತಡೆಯುವಂತೆ ಆಗ್ರಹಿಸಲಾಯಿತು.ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ರವಿ ನಾಯ್ಕ, ಎಂಜನಿಯರ್ ಸಂದೇಶ ಬೋಮ್ಮರ್, ನಿವೃತ್ತ ಅಧಿಕಾರಿ ಅಂತೋನಿ, ನಿವೃತ್ತ ಪಿಂಚಣಿದಾರ ಸಂಘದ ಡಿ.ಡಿ. ಮಡಿವಾಳ, ಉಪ ವಿಭಾಗದ ಸಹಾಯಕ ಎಂಜಿನಿಯರ್ ಮಾತನಾಡಿದರು. ಕಾರ್ಯನಿರ್ವಾಹಕ ಆರ್.ಎನ್. ಭಟ್, ಕೇಂದ್ರ ಸಮಿತಿ ಸದಸ್ಯರಾದ ರಾಮ ಪೂಜಾರಿ, ಕಾರವಾರ ವಿಭಾಗದ ಕೇಂದ್ರ ಸಮಿತಿ ಸದಸ್ಯ ರಾಘು ನಾಯ್ಕ ಹಾಗೂ ಸ್ಥಳೀಯ ಸಮಿತಿ ಅಧ್ಯಕ್ಷ ಪ್ರಶಾಂತ್ ಗಾಂವ್ಕರ್, ಕಾರ್ಯದರ್ಶಿ ಸತೀಶ ನಾಯ್ಕ ಹೊನ್ನಾವರ, ಕುಮಟಾ, ಭಟ್ಕಳ, ಶಿರಸಿ ವಿಭಾಗದ ಪದಾಧಿಕಾರಿಗಳು, ಸಿಬ್ಬಂದಿ ಇದ್ದರು.