ಕನ್ನಡಪ್ರಭ ವಾರ್ತೆ ಗಂಗಾವತಿ
371ಜೆ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಶ್ರೀಕೃಷ್ಣದೇವರಾಯ ವೃತ್ತ, ಜುಲೈ ನಗರ, ಮಹಾವೀರ ವೃತ್ತಗಳ ಮೂಲಕ ಶಾಲಾ-ಕಾಲೇಜುಗಳಿಂದ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಗಾಂಧಿ ವೃತ್ತದಲ್ಲಿ ಆಗಮಿಸಿದರು. ನಗರದ ವಿವಿಧ ಶಾಲಾ ಕಾಲೇಜುಗಳ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.ನಂತರ ಗಾಂಧಿ ವೃತ್ತದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, 371ಜೆ ಸಮರ್ಪಕವಾಗಿ ಜಾರಿಗಾಗಿ ಪಕ್ಷಾತೀತ ಹೋರಾಟ ಮಾಡ ಬೇಕಾಗಿದೆ. ಆ. 3ರಂದು ನಡೆಯುವ ಕಲ್ಯಾಣ ಕರ್ನಾಟಕ ಸಭೆಯಲ್ಲಿ 371ಜೆ ಸಮರ್ಪಕವಾಗಿ ಜಾರಿ ವಿಷಯದ ಬಗ್ಗೆ ಚರ್ಚಿಸುತ್ತೇನೆ. ವಿದ್ಯಾರ್ಥಿಗಳಿಗೆ 371ಜೆ ಸರ್ಟಿಫಿಕೇಟ್ ನ್ನು ಸಹಾಯಕ ಆಯುಕ್ತರು ತ್ವರಿತಗತಿಯಲ್ಲಿ ನೀಡಬೇಕು, ವಿಳಂಬವಾದರೆ ಎಸಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, 371ಜೆ ಕಾಯ್ದೆ ಸಮರ್ಪಕವಾಗಿ ಜಾರಿಯಾಗಬೇಕಾಗಿದೆ. ನಮ್ಮ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಹೇಳಿದರು.ರಾಯಚೂರಿನ ಹೋರಾಟಗಾರ ರಜಾಕ್ ಉಸ್ತಾದ್ ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅನುಷ್ಠಾನ ಸಮಿತಿ ಸಂಚಾಲಕ ಈ. ಧನರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭ ಪ್ರಮುಖರಾದ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ನೆಕ್ಕಂಟಿ ಸೂರಿಬಾಬು, ಜೋಗದ ನಾರಾಯಣಪ್ಪನಾಯಕ, ಕೆ. ಚೆನ್ನಬಸಯ್ಯಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ, ರಾಜು ನಾಯಕ, ಯಂಕಪ್ಪ ಕಟ್ಟಿಮನಿ, ವೀರಭದ್ರಪ್ಪ ನಾಯಕ, ಶ್ಯಾಮೀದ್ ಮನಿಯಾರ್, ಡಾ. ಅಮರ್ ಪಾಟೀಲ್, ಅಮರಜೋತಿ ನರಸಪ್ಪ, ಶೈಲಜಾ ಹಿರೇಮಠ, ಸಿ. ಮಹಾಲಕ್ಷ್ಮೀ, ಎ.ಕೆ. ಮಹೇಶ, ಡಾ. ಕಾಸಿಂ ಅಲಿ ಮುದ್ದಾಬಳ್ಳಿ, ಜ. ಭಾರದ್ವಾಜ್ ಸೇರಿದಂತೆ ಕನ್ನಡಪರ, ರೈತ, ವಕೀಲರ ಸಂಘ ಮತ್ತು ವಿವಿಧ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು ಭಾಗವಹಿಸಿದ್ದರು.