ಸಿಎಂಗೆ ರೈತರು ಕೊಟ್ಟ ಮನವಿ ಕಸದ ಬುಟ್ಟಿಗೆ ಹಾಕಿದ್ದನ್ನು ಖಂಡಿಸಿ ಗುಂಡ್ಲುಪೇಟೆಯಲ್ಲಿ ಧರಣಿ

KannadaprabhaNewsNetwork |  
Published : Jul 15, 2024, 01:54 AM IST
ಸಿಎಂಗೆ ಕೊಟ್ಟ ಮನವಿ ಕಸದ ಬುಟ್ಟಿಗೆ….ಗುಂಡ್ಲುಪೇಟೇಲಿ ರೈತಸಂಘ ಹೆದ್ದಾರಿ ತಡೆ ! | Kannada Prabha

ಸಾರಾಂಶ

ಮುಖ್ಯಮಂತ್ರಿಗಳಿಗೆ ರೈತರು ಸಲ್ಲಿಸಿದ್ದ ದೂರುಗಳನ್ನು ಕಸದ ಬುಟ್ಟಿಗೆ ಎಸೆದ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಸಾಮೂಹಿಕ ರೈತ ಸಂಘದ ಕಾರ್ಯಕರ್ತರು ಗುಂಡ್ಲುಪೇಟೆಯಲ್ಲಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಗುಂಡ್ಲುಪೇಟೇಲಿ ರೈತ ಸಂಘ ಹೆದ್ದಾರಿ ತಡೆದು ಆಕ್ರೋಶ । ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರು, ಪ್ರವಾಸಿಗರ ಆಕ್ಷೇಪ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಖ್ಯಮಂತ್ರಿಗಳಿಗೆ ರೈತರು ಸಲ್ಲಿಸಿದ್ದ ದೂರುಗಳನ್ನು ಕಸದ ಬುಟ್ಟಿಗೆ ಎಸೆದ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಸಾಮೂಹಿಕ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಮೈಸೂರು-ಊಟಿ ಹೆದ್ದಾರಿ ತಡೆದ ಸಮಯದಲ್ಲಿ ಹಲವು ರೈತ ಸಂಘದ ಮುಖಂಡರು ಮಾತನಾಡಿ ಮುಖ್ಯಮಂತ್ರಿ, ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದರು.

ರೈತ ಮುಖಂಡ ಹೊನ್ನೂರು ಪ್ರಕಾಶ್‌ ಮಾತನಾಡಿ, ಚಾಮರಾಜನಗರಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾಗ ರೈತರು ನೀಡಿದ್ದ ಮನವಿ ಪತ್ರವನ್ನು ಕಸದಂತೆ ಬೀಸಾಕಿದ್ದಾರೆ. ಇದು ಖಂಡನೀಯ ಎಂದು ದೂರಿದರು.

‘ಮುಖ್ಯಮಂತ್ರಿಗಳೇ ನೀವು ರೈತ ಸಂಘದಿಂದ ಬಂದವರು, ಅಲ್ಲದೆ ಸಮಾಜವಾದಿ ಆಗಿದ್ದೀರಾ, ಮನವಿ ಪತ್ರಗಳನ್ನು ಬಿಸಾಡಿದ ಪ್ರಕರಣದಲ್ಲಿ ಸಿಎಂಗೆ ಮಾನ, ಮಾರ್ಯಾದೆ ಇದ್ರೆ ಕೂಡಲೇ ರೈತರ ಕ್ಷಮೆ ಕೇಳಬೇಕು, ಕ್ಷಮೆ ಕೇಳದಿದ್ದರೆ ರಾಜೀನಾಮೆ ನೀಡಿ ಮನೆಗೆ ತೆರಳಿ ಎಂದು ಕಿಡಿಕಾರಿದರು.

ಎಸ್‌ಐಗೆ ಕರೆ:

ದಿಢೀರ್‌ ಪ್ರತಿಘಟನೆ ಕಂಡ ಸಾರ್ವಜನಿಕರು ಸಬ್‌ಇನ್ಸ್‌ಪೆಕ್ಟರ್‌ ಸಾಹೇಬ ಗೌಡರಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದಾಗ ಎಸ್‌ಐ ರಸ್ತೆ ತಡೆ ನಿಲ್ಲಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ವೀರನಪುರ ನಾಗಪ್ಪ, ಅಗತಗೌಡನಹಳ್ಳಿ ಜಗದೀಶ್‌, ಕೂತನೂರು ಗಣೇಶ್‌, ಪುಟ್ಟೇಗೌಡ, ಮಹೇಶ್‌, ಹಸಗೂಲಿ ಮಹೇಶ್‌, ಪಾಪಣ್ಣ, ಸ್ವಾಮಿ, ಪ್ರಸಾದ್‌, ಮಹದೇವಶೆಟ್ಟಿ, ಹೊಸಪುರ ಮರಿಸ್ವಾಮಿ, ಲೋಕೇಶ್‌, ಮಣಿಕಂಠ, ಪುಟ್ಟರಾಜು, ಬೆಟ್ಟಹಳ್ಳಿ ಲೋಕೇಶ್‌, ದಡದಹಳ್ಳಿ ಮಹೇಶ್‌ ಇದ್ದರು.

ಸಂಚಾರ ಅಸ್ತವ್ಯಸ್ತ:

ಗುಂಡ್ಲುಪೇಟೆಯಲ್ಲಿ ಭಾನುವಾರ ಬೆಳಗ್ಗೆ ೧೧ ರ ಬಳಿಕ ರಸ್ತೆ ತಡೆ ನಡೆಸಿದ ಪರಿಣಾಮ ಮೈಸೂರು-ಊಟಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲು ಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಾರ್ವಜನಿಕರ ಆಕ್ಷೇಪ:

ಗುಂಡ್ಲುಪೇಟೆ: ರೈತರು ದಿಢೀರ್ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಕ್ಕೆ ಹೆದ್ದಾರಿ ಬದಿಯಲ್ಲಿ ನಿಂತ ನೂರಾರು ಪ್ರವಾಸಿಗರು ಹಾಗೂ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಾಂವಿಧಾನಿಕ ಹಕ್ಕು ಆಗಂತ ದಿಢೀರ್‌ ಹೆದ್ದಾರಿ ತಡೆ ನಡೆಸಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರೀನಾ? ಪ್ರತಿಭಟನಾ ಮೆರವಣಿಗೆ ನಡೆಸಿ, ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಿ ಅದು ಬಿಟ್ಟು ಹೆದ್ದಾರೀಲಿ ರಸ್ತೆ ತಡೆ ನಡೆಸಲು ಅವಕಾಶವಿಲ್ಲ. ಆದರೂ ಸ್ಥಳೀಯ ಪೊಲೀಸರು ರಸ್ತೆ ತಡೆ ನಡೆಸಲು ಅವಕಾಶ ನೀಡಿದ್ದು ಸರಿಯಲ್ಲ ಎಂದು ಬೆಂಗಳೂರಿನ ವಕೀಲ ಪ್ರಶಾಂತ್‌ ಎಂಬುವರು ಕನ್ನಡಪ್ರಭದೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದರು.

ಸ್ಥಳೀಯ ಪೊಲೀಸರು ಪ್ರತಿಭಟನೆ ಅವಕಾಶ ಕೊಟ್ಟು ಹೆದ್ದಾರಿ ತಡೆದ ಪ್ರತಿಭಟನಾಕಾರರನ್ನು ಬಂಧಿಸಿ, ಸಂಚಾರಕ್ಕೆ ಅವಕಾಶ ಮಾಡಲು ಮುಂದಾಗಿಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮುಂದೆ ಹೀಗಾಗದಂತೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು.

ಕರೆ ಸ್ವೀಕರಿಸದ ಎಸ್ಪಿ!:

ಪಟ್ಟಣದಲ್ಲಿ ಪೊಲೀಸರ ಅನುಮತಿ ಪಡೆಯದೇ ರಸ್ತೆತಡೆ ನಡೆಸೋ ಬಗ್ಗೆ ಪ್ರತಿಕ್ರಿಯೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸಂಪರ್ಕಿಸಿದಾಗ ಮೊಬೈಲ್‌ ಕರೆ ಸ್ವೀಕರಿಸಿಲ್ಲ!

ಸಾರ್ವಜನಿಕರ ಆಕ್ರೋಶದ ಬಗ್ಗೆ ಕನ್ನಡಪ್ರಭ ಪತ್ರಿಕೆಯು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಎರಡು ಬಾರಿ ಕರೆ ಮಾಡಿದರೂ, ಕರೆ ಸ್ವೀಕರಿಸಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು