ಕನ್ನಡಪ್ರಭ ವಾರ್ತೆ ಹನೂರು
ಪ್ರತಿಭಟನೆಗೊ ಮುನ್ನ ಪಟ್ಟಣದ ಕೆಂಪೇಗೌಡ ಸರ್ಕಲ್ನಿಂದ ಮುಖ್ಯ ರಸ್ತೆಯಲ್ಲಿ ಸಾಗಿದ ಪ್ರತಿಭಟನಾಕಾರರು ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ನ್ಯಾಯಾಂಗ ಒಪ್ಪಿಸಬೇಕು. ಜತೆಗೆ ತಪ್ಪಿತಸ್ಥರಿಗೆ ಸೂಕ್ತ ದಂಡನೆ ಆಗಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರಗತಿಪರ ರೈತ ಸಂಘಟನೆಗಳ ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಿದ್ಧಾಂತಗಳ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಮಾತನಾಡಿ, ಆ.16 ರಂದು ಮುಖ್ಯಮಂತ್ರಿಗಳು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದರು. ಹೋರಾಟಗಳು ಶುರುವಾದ ನಂತರ ಅದನ್ನು ಸಿಐಡಿಗೆ ವರ್ಗಾಯಿಸಿದ್ದಾರೆ. ಆದರೆ ನಮ್ಮ ಬೇಡಿಕೆ ಇದನ್ನು ಸಿಬಿಐಗೆ ಕೊಡಬೇಕು ಅಥವಾ ನಿವೃತ್ತ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು. ಜತೆಗೆ ಆರೋಪಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಂಪರು ಪರೀಕ್ಷೆ ಮಾಡಿಸಿದರೆ ಸತ್ಯಾಂಶ ಹೊರಬರುತ್ತದೆ ಎಂದು ಒತ್ತಾಯಿಸಿದರು.ಅರಣ್ಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಈ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಅಧಿಕಾರಿಗಳನ್ನು ಅರಣ್ಯ ಭವನದ ಎಸಿ ಕಚೇರಿಯಲ್ಲಿ ಕೂರಿಸಿ ಎಲ್ಲಾ ಸೌಲಭ್ಯ ಕೊಡುತ್ತಿದ್ದಾರೆ. ಆದರೆ ನೊಂದ ಕುಟುಂಬಗಳು ಇಂದು ಬೀದಿಯಲ್ಲಿ ನಿಂತಿವೆ. ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ಘೋಷಿಸಿರುವ 5 ಲಕ್ಷ ರು. ಪರಿಹಾರ ಸಾಲದು. ಹೆಚ್ಚಿನ ಪರಿಹಾರ ನೀಡಬೇಕು, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದರು.
‘ಸುಳ್ಳು ಕತೆ ಕಟ್ಟೋದು ನಿಲ್ಲಿಸಿ, ಸಂತ್ರಸ್ತರಿಗೆ ನ್ಯಾಯ ಕೊಡಿ’
ನಿಮ್ಮ ಕೈಯಲ್ಲಿ ಇಂಟೆಲಿಜೆನ್ಸ್ ಇದೆ. ಒಂದು ವೇಳೆ ನಿಜವಾಗಿಯೂ ವೀರಪ್ಪನ್ ಅಥವಾ ಎಲ್ಟಿಟಿಇ ಸಹಚರರು ಬಂದು ಕುಮ್ಮಕ್ಕು ಕೊಡುತ್ತಿದ್ದರೆ ಅವರನ್ನು ಅರೆಸ್ಟ್ ಮಾಡಿ. ಅದನ್ನು ಬಿಟ್ಟು ಕಾಡಂಚಿನಲ್ಲಿ ವಾಸ ಮಾಡುವ ಮುಗ್ಧ ಜನರಿಗೆ ಯಾಕೆ ಹಿಂಸೆ ಕೊಡ್ತೀರಿ? ಇದು ನಿಮ್ಮ ಇಂಟೆಲಿಜೆನ್ಸ್ ವೈಫಲ್ಯವನ್ನು ಜನರ ಮೇಲೆ ಹಾಕುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಶೂಟೌಟ್ ಪ್ರಕರಣದ ಮೂವರು ಮೃತಪಟ್ಟ ಸದಸ್ಯರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಪ್ರಗತಿಪರ ಸಂಘಟನೆಯ ಮುಖಂಡರು ವಿವಿಧ ಭಾಗಗಳಿಂದ ಆಗಮಿಸಿದ ಮಹಿಳಾ ರೈತ ಮುಖಂಡರು ಹಾಜರಿದ್ದರು.