ಯತ್ನಾಳ ಉಚ್ಚಾಟನೆ ಖಂಡಿಸಿ ನವಲಗುಂದದಲ್ಲಿ ಪ್ರತಿಭಟನೆ

KannadaprabhaNewsNetwork | Published : Apr 2, 2025 1:04 AM

ಸಾರಾಂಶ

ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ನವಲಗುಂದ: ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ನೀಲಮ್ಮ ಜಲಾಶಯದ ಬಳಿ ಜಮೆಯಾದ ಕಾರ್ಯಕರ್ತರು, ಕೆಲಕಾಲ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದರು. ಬಳಿಕ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿದರು.

ಸಮಾಜದ ಮುಖಂಡ ಸದುಗೌಡ ಪಾಟೀಲ ಮಾತನಾಡಿ, ಯತ್ನಾಳ ಅವರು ಪಂಚಮಸಾಲಿ ಸಮಾಜದ ಹಿರಿಯ ಮುಖಂಡರು. 2ಎ ಮೀಸಲಾತಿ ಹೋರಾಟದ ರಾಷ್ಟ್ರೀಯ ಗೌರವಾಧ್ಯಕ್ಷರು. ಇಂಥವರನ್ನು ಅನಾವಶ್ಯಕವಾಗಿ ಉಚ್ಛಾಟನೆ ಮಾಡಿದ್ದು ಖಂಡನೀಯ.

ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ ತಪ್ಪು. ಹಿಂದೂಗಳ ರಕ್ಷಣೆ ಹಾಗೂ ಪಕ್ಷದ ಹಿತದೃಷ್ಟಿಯಿಂದ ಯತ್ನಾಳ ಅವರನ್ನು ಮತ್ತೆ ಪಕ್ಷಕ್ಕೆ ಗೌರವಯುತವಾಗಿ ಸ್ವಾಗತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಂಕರಗೌಡ ಬಾಳನಗೌಡ್ರ, ಲಕ್ಶ್ಮಣ ನಿಡವಣಿ, ನಾಗನಗೌಡ ಪಾಟೀಲ, ಗೌರೀಶ್ ಕಮತರ, ಸುರೇಶ ಕಮ್ಮಾರ, ದ್ಯಾಮನಗೌಡ ಪಾಟೀಲ, ಮಹೇಶ್ ಕುರ್ತಕೋಟಿ, ಲಾಲ್‌ ಬಹುದ್ದೂರ ಶಾಸ್ತ್ರಿ, ಸುರೇಶ ನಿಡವಣಿ, ಮಹೇಶ್ ದೇಸಾಯಿ, ಶಂಕರಪ್ಪ ಯಮನೂರ, ಶಂಕರಗೌಡ ಪಾಟೀಲ, ಎಂ.ವಿ. ಹೊಳೆಯನ್ನವರ, ವಿನೋದ ನಾಗರಹಳ್ಳಿ, ಸಂಗಪ್ಪ ನೀಡವಣಿ ಸೇರಿ ನೂರಾರು ಮುಖಂಡರು ಪಾಲ್ಗೊಂಡಿದ್ದರು.

ಯತ್ನಾಳ ವಾಪಸ್‌ ಬಿಜೆಪಿಗೆ ಕರೆತರಲು ಆಗ್ರಹಿಸಿ ಪತ್ರ ಚಳವಳಿಪಂಚಮಸಾಲಿ ವಕೀಲರ ಪರಿಷತ್ತಿನಿಂದ ಚಳವಳಿ

ಧಾರವಾಡ:

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಗ್ರಹಿಸಿ ಪಂಚಮಸಾಲಿ ವಕೀಲರ ಪರಿಷತ್ತು ಮಂಗಳವಾರ ಪತ್ರ ಚಳವಳಿ ನಡೆಸಿ ಆಗ್ರಹಿಸಿತು.

ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದು, ಯತ್ನಾಳ ಅವರು ನೇರ ನುಡಿಯ ನಿಷ್ಠುರ ವ್ಯಕ್ತಿ. ವಾಜಪೇಯಿ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದವರು. ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದಕ್ಕೆ ಲಕ್ಷಾಂತರ ಹಿಂದೂ ಕಾರ್ಯಕರ್ತರು ನೊಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳ ಅವರಿಲ್ಲದೇ ಬಿಜೆಪಿ ಬರುವ ದಿನಗಳಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ. ಲಕ್ಷಾಂತರ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದು ಅತೀವ ನೋವುಂಟು ಮಾಡಿದೆ. ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಾದರೆ ಯತ್ನಾಳ ಅವರಂತಹ ಶಕ್ತಿ ಬಿಜೆಪಿಯಲ್ಲಿ ಇರಲೇಬೇಕು. ಪಕ್ಷದಲ್ಲಿರುವ ಸಣ್ಣಪುಟ್ಟ ವೈಮನಸ್ಸುಗಳನ್ನು ವರಿಷ್ಠರು ಕುಳಿತು ಬಗೆಹರಿಸುವ ಕೆಲಸ ಮಾಡಬೇಕು. ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಕರೆತರಲೇಬೇಕು ಎಂದು ಆಗ್ರಹಿಸಿದರು.

Share this article