ಹರಪನಹಳ್ಳಿ; ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಾಸಕರು ಹಾಗೂ ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016 ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016 ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಸೇವಾ ಜ್ಯೇಷ್ಠತೆ ಆಧಾರದಲ್ಲಿ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಮೊದಲಿಗೆ ಬಿಇಒಗೆ ಮನವಿ ಸಲ್ಲಿಸಿದ ಶಿಕ್ಷಕರು ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಅಲ್ಲಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.ನಂತರ ಕಾಶಿಬಡಾವಣೆಗೆ ತೆರಳಿ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ತಮ್ಮ ಬೇಡಿಕೆಗಳ ಕುರಿತು ಸಂಬಂಧ ಪಟ್ಟ ಸಚಿವರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ್, ರಾಜ್ಯ ಉಪಾದ್ಯಕ್ಷೆ ಜಿ.ಪದ್ಮಲತಾ, ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ರಾಜಶೇಖರ, ಕಾರ್ಯದರ್ಶಿ ನಟರಾಜ, ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ, ಖಜಾಂಚಿ ಬಿ.ಕೊಟ್ರೇಶಪ್ಪ, ಕಾರ್ಯಾದ್ಯಕ್ಷ ಪದ್ಮರಾಜ ಜೈನ್, ಗೌರವಾದ್ಯಕ್ಷ ಕೆ.ಅಂಜಿನಪ್ಪ, ಶಿವಾನಂದಗೌಡ, ಬಂದಮ್ಮ, ಮಡ್ಡಿ ನಾಗರಾಜ, ಎಚ್.ಬಿ.ಎಂ.ಕೊಟ್ರಮ್ಮ, ಮನ್ಸೂರು ಅಹಮದ್, ಎಂ.ರತ್ನಮ್ಮ, ಪತ್ತಿನ ಸಂಘದ ಅಧ್ಯಕ್ಷ ಚಂದ್ರಮೌಳಿ, ಬಿ.ಮಂಜುನಾಥ, ದಯಾನಂದ ಎಂ.ಪ್ರಭು, ಬಂಡಿ ಬಸವರಾಜ, ಟಿ.ಶ್ರೀಲತಾ, ಮಕರಬ್ಬಿ ಷರೀಪ, ಮಹದೇವಮ್ಮ ಸೇರಿದಂತೆ ಅನೇಕ ಶಿಕ್ಷಕರು ಪಾಲ್ಗೊಂಡಿದ್ದರು.