ಆಲೂರು: ಮೂಲಭೂತ ಸೌಕರ್ಯಗಳು, ಸೇವಾಭದ್ರತೆ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲೂರು ತಾಲೂಕು ಗ್ರಾಮ ಆಡಳಿತಾಧಿಕಾರಿಗಳು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಹಾಗೂ ಕಂದಾಯ ಇಲಾಖೆ ನೌಕರರ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟ ಅವಧಿ ಪ್ರತಿಭಟನೆಯನ್ನು ನಡೆಸಿ ತಹಸೀಲ್ದಾರ್ ಸಿ.ಪಿ ನಂದಕುಮಾರ್ಗೆ ಮನವಿ ಸಲ್ಲಿಸಲಾಯಿತು.
ಸರ್ಕಾರವು ರೈತ ಪರವಾದ ಸಮಾಜಮುಖಿ ಕೆಲಸಗಳಾದ ನಮೂನೆ 1-5 ದುರಸ್ತಿ, ಇ.ಆಫೀಸ್, ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬಿಟ್ ಆಫ್ ಸಂಯೋಜನೆ, ನವೋದಯ,ಗರುಡ ಆ್ಯಪ್, ,ಪಿಎಂ ಕಿಸಾನ್ ವೆಬ್ ಆಪ್, ಬೆಳೆ ಸಂರಕ್ಷಣೆ, ಬೆಳೆಕಟಾವು, ಬೆಳೆ ಸಮೀಕ್ಷೆ, ಕೃಷಿ ಗಣತಿ, ನೀರಾವರಿ ಗಣತಿ,ದಿಶಾಂಕ,ಸಿ.ವಿಜಯ್ ಇನ್ನೂ ಹತ್ತು ಹಲವು ಕೆಲಸಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಕೆಲಸ ನಿರ್ವಹಿಸಬೇಕಾಗಿರುತ್ತದೆ ಆದ್ದರಿಂದ ಸದರಿ ಕೆಲಸ ನಿರ್ವಹಿಸಲು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದಿರುವುದರಿಂದ ಪ್ರಗತಿ ಹಿನ್ನೆಡೆಗೆ ಕಾರಣವಾಗಿದೆ. ಆದರೆ ಇವ್ಯಾವುದೇ ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡದೆ ಟಾರ್ಗೆಟ್ ರೀತಿಯಲ್ಲಿ ಕಾಲಮಿತಿ ಒಳಗಡೆ ಇವೆಲ್ಲ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಒತ್ತಡ ಏರುತ್ತಿರುವುದರಿಂದ ಅಧಿಕಾರಿಗಳಿಗೆ ಮಾನಸಿಕ ಹಾಗೂ ದೈಹಿಕ ಒತ್ತಡಗಳು ಹೆಚ್ಚಾಗುತ್ತಿದ್ದು, ಅವರ ಆರೋಗ್ಯದಲ್ಲಿ ಏರುಪೇರು ಆಗುವ ಪರಿಸ್ಥಿತಿ ಬಂದೊದಗಿದೆ ಇದರಿಂದ ಹಲವಾರು ಗ್ರಾಮ ಆಡಳಿತ ಅಧಿಕಾರಿಗಳ ದಿಢೀರ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅಭಿಷೇಕ್ ಮಾತನಾಡಿ, ಒಬ್ಬ ಆಡಳಿತ ಅಧಿಕಾರಿಗಳಿಗೆ ನಿಯಮ ಪ್ರಕಾರ ಒಂದು ವೃತ್ತದ ಜವಾಬ್ದಾರಿಯನ್ನು ವಹಿಸಬೇಕು. ಆದರೆ ನಮ್ಮ ಆಲೂರು ತಾಲೂಕಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮಂಜೂರಾತಿ ಹುದ್ದೆಯು 24 ಇದ್ದು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವವರು 19 ಜನ ಗ್ರಾಮ ಆಡಳಿತಾಧಿಕಾರಿಗಳಿದ್ದು ಅದರಲ್ಲಿ 4 ಜನ ಸಿಬ್ಬಂದಿಗಳನ್ನು ಕಚೇರಿ ಕೆಲಸಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದ್ದು, ಉಳಿದ 15 ಜನ ಗ್ರಾಮ ಆಡಳಿತ ಅಧಿಕಾರಿಗಳು 24 ಜನ ಸಿಬ್ಬಂದಿ ಮಾಡುವ ಕೆಲಸಗಳನ್ನು ಹೆಚ್ಚುವರಿಯಾಗಿ ವಹಿಸಿಕೊಂಡು ಮಾಡುತ್ತಿದ್ದು, ಇದರ ಜೊತೆಗೆ ಇನ್ನೂ ಹೆಚ್ಚುವರಿಯಾಗಿ ಚುನಾವಣೆ ಕರ್ತವ್ಯಗಳು ಹಾಗೂ ಸರ್ಕಾರ ಹೊಸದಾಗಿ ಜಾರಿ ಮಾಡುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಹೊಣೆಗಾರಿಕೆಯನ್ನು ಕೂಡ ನಮಗೆ ವಹಿಸುತ್ತಿರುವುದರಿಂದ ನಮಗೆ ನಮ್ಮ ವ್ಯಾಪ್ತಿಯನ್ನ ಮೀರಿ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದು, ನಾವು ರಜಾ ದಿನಗಳನ್ನು ಲೆಕ್ಕಿಸದೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ರಜಾ ದಿನಗಳಲ್ಲೂ ಕೂಡ ನಾವು ನಮ್ಮ ಸಂಸಾರದ ಜೊತೆ ಕಾಲ ಕಳೆಯಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿದೆ ಎಂದು ತಿಳಿಸಿದರು.ಆದುದರಿಂದ ಸರ್ಕಾರವು ಕೂಡಲೇ ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಪುರಸ್ಕರಿಸಿ ಇವುಗಳ ಈಡೇರಿಕೆಗೆ ಮುಂದಾಗಬೇಕೆಂದು ಹಾಗೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಅಭಿಷೇಕ್,ಉಪಾಧ್ಯಕ್ಷ ಸಂಜೇವ್ ಚೌಹಣ್, ಕಾರ್ಯದರ್ಶಿ ದೇವೇಂದ್ರಪ್ಪ ಪೂಜಾರಿ ಖಜಾಂಚಿ ರಾಘವೇಂದ್ರ, ಮಂಜಪ್ಪ ಬಂಡಾರಿ, ಸಿಬ್ಬಂದಿಯಾದ ಸಂತೋಷ್, ಗೀತಾ, ಅಮೂಲ್ಯ, ಚಂದ್ರಶೇಖರ, ಹೇಮರಾಜು, ಬಸವರಾಜು,ಮನು,ರಂಗಸ್ವಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.