ಕನ್ನಡಪ್ರಭ ವಾರ್ತೆ ಬೇಲೂರು
ಪುರಸಭೆಯಿಂದ ಅಳವಡಿಸಿದ್ದ ನೀರಿನ ಕಂಟ್ರೋಲ್ ವಾಲ್ವ್ ತೆಗೆಯುವಂತೆ ಕೆಲವರು ಪುರಸಭೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಅಂಬೇಡ್ಕರ್ ನಗರದ ಎರಡನೇ ಬೀದಿ ನಿವಾಸಿಗಳು ವಾಲ್ವ್ ಇರುವ ಸ್ಥಳದಲ್ಲೆ ಇರಬೇಕೆಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.ಈ ಸಂದರ್ಭ ಮಾತನಾಡಿದ ಪುರಸಭೆ ಮಾಜಿ ಸದಸ್ಯೆ ಶಾಂತಮ್ಮ, ಪುರಸಭೆ ವ್ಯಾಪ್ತಿಯ ೧೭ನೇ ವಾರ್ಡಿನ ೨ನೇ ಬೀದಿಯಲ್ಲಿನ ಮೇಲ್ಬಾಗದ ಕೆಲ ಮನೆಗಳಿಗೆ ಕುಡಿಯುವ ನೀರು ನಲ್ಲಿಗಳಲ್ಲಿ ಬಾರದೆ ನೇರವಾಗಿ ಇಳಿಜಾರಿಗೆ ಹೋಗುತಿದ್ದುದರಿಂದ ನೀರು ಪೋಲಾಗುತಿತ್ತು. ಇದನ್ನು ತಡೆಗಟ್ಟಿದರೆ ಮೇಲ್ಭಾಗದ ಮನೆಗಳಿಗೂ ನೀರು ಸಿಗುವಂತೆ ಮಾಡಿ ಎಂದು ಎಲ್ಲರೂ ಸಹಿ ಮಾಡಿ ಮನವಿ ಸಲ್ಲಿಸಿದ್ದರಿಂದ ಅಧಿಕಾರಿಗಳು ಸಿಬ್ಬಂದಿ ಕಳುಹಿಸಿ ಕಂಟ್ರೋಲ್ ವಾಲ್ ಅಳವಡಿಸಿದ್ದರು. ಆದರೆ ಈ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೆ ವೈಯಕ್ತಿಕ ಕಾರಣಗಳಿಗಾಗಿ ಇಲ್ಲಿ ಹಾಕಿರುವ ಕಂಟ್ರೋಲ್ ವಾಲ್ ತೆಗೆಯುವಂತೆ ಅಧಿಕಾರಿ ಮತ್ತು ಅಧ್ಯಕ್ಷರಿಗೆ ಕೆಲವರು ಒತ್ತಡ ಹಾಕುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸ್ಥಳೀಯರು ಸೇರಿ ವಾಲ್ ಇರುವ ಸ್ಥಳದಲ್ಲೆ ಸೇರಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಆದರೆ ಈ ವಿಚಾರವಾಗಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಮುಂದುವರಿದು ಯಾರಾದರೂ ಕಂಟ್ರೋಲ್ ವಾಲ್ ತೆಗೆಯಲು ಮುಂದಾದರೆ ಬೀದಿಯ ನಾಗರಿಕರೊಂದಿಗೆ ಪುರಸಭೆ ಮುಂದೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡ ಸತೀಶ್ ಮಾತನಾಡಿ, ಕೆಲ ವರ್ಷಗಳಿಂದಲೂ ಮೇಲ್ಭಾಗದ ಮನೆಗಳಿಗೆ ಸರಿಯಾಗಿ ಕುಡಿಯುವ ನಿರು ಬರುತ್ತಿರಲಿಲ್ಲ. ಈ ವಿಚಾರವಾಗಿ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿ ಕಂಟ್ರೋಲ್ ವಾಲ್ ಹಾಕಿಸಲಾಗಿತ್ತು. ಆದರೆ ಕೆಲವರು ಹುನ್ನಾರ ನಡೆಸಿ ತೆಗೆಸಲು ಮುಂದಾಗಿದ್ದು ವಿಷಾದದ ಸಂಗತಿಯಾಗಿದ್ದು, ಇನ್ನಾದರೂ ಎಚ್ಚೆತ್ತು ಎಲ್ಲರಿಗೂ ಉಪಯೋಗುವಂತೆ ವಾಲ್ ಅಳವಡಿಸಿರುವುದು ಸೂಕ್ತವಾಗಿದ್ದು, ಈಗಿರುವಂತೆ ಮುಂದುವರಿಸಬೇಕು ಎಂದು ತಿಳಿಸಿದರು.ನಿವಾಸಿಗಳಾದ ತುಂಗಮ್ಮ, ಪುಟ್ಟಮ್ಮ, ರಾಮಣ್ಣ, ಪುನೀತ, ಪಾಪಣ್ಣಿ, ಚನ್ನಕೆಶವ, ಚಿನ್ನು, ಚಾಂದಿನಿ, ಮಮತಾ.ಬಿ.ಎಲ್. ಮೋಹನ್ ಕುಮಾರಿ ಸೇರಿದಂತೆ ಇತರರಿದ್ದರು.