ಅಂಕೋಲಾ: ಅಂಕೋಲಾ ಗ್ರಾಪಂ ವ್ಯಾಪ್ತಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಭೂಮಿ ಹಾಗೂ ನಿವೇಶನಗಳಲ್ಲಿ ನಿಯಮಬಾಹಿರವಾಗಿ ನಿರ್ಮಿಸಲ್ಪಟ್ಟ ಕಟ್ಟಡ ಅಥವಾ ನಿವೇಶನಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅವಕಾಶ ಇರುವುದಿಲ್ಲ ಎಂದು ಬಿಜೆಪಿ ವಕ್ತಾರ ಜಗದೀಶ ನಾಯಕ ಮೊಗಟಾ ಹೇಳಿದರು.
ಸರ್ಕಾರಿ ಭೂಮಿ ಅರಣ್ಯ ಭೂಮಿ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಭೂಮಿಗಳಲ್ಲಿ ಈ ಹಿಂದಿನಿಂದಲೂ ವಾಸಿಸಿ ಗ್ರಾಪಂಗಳಿಗೆ ತೆರಿಗೆಯನ್ನು ಪಾವತಿಸುತ್ತಿರುವ ನಾಗರಿಕರಿಂದಲೂ ತೆರಿಗೆ ಪಡೆಯದೆ ಇರುವುದರಿಂದ ಆ ಆಸ್ತಿಗಳು ಅಕ್ರಮ ಆಸ್ತಿಗಳಾಗುವುದರಿಂದ ಸರ್ಕಾರದ ಯಾವ ಪ್ರಯೋಜನಗಳನ್ನು ಇಂತಹ ಫಲಾನುಭವಿಗಳು ಪಡೆಯಲಾರರು. ಸರ್ಕಾರ ಒಂದು ಕಡೆ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದ ಹುನ್ನಾರ ಮಾಡಿ ಇನ್ನೊಂದೆಡೆ ಜನರನ್ನು ಒಕ್ಕಲಿಬ್ಬಿಸುವ ಕೆಲಸಕ್ಕೆ ಮುಂದಾಗಿದೆ ಎಂದರು.
ಬಿಜೆಪಿ ಪ್ರಮುಖ ರಾಜೇಂದ್ರ ನಾಯ್ಕ ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿಗಳು ಬಡವರ ಸಂಕಟವನ್ನು ಅರಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ಪ್ರಮುಖರಾದ ರಾಘು ಭಟ್ ಮಾತನಾಡಿ, ಈ ಸುತ್ತೋಲೆಯನ್ನು ನೋಡಿದ ತಕ್ಷಣ ಅತಿಕ್ರಮಣದ ಪರವಾಗಿ ಮತ್ತು ಅತಿಕ್ರಮಣದಾರದ ಪರವಾಗಿ ಹೋರಾಟ ಮತ್ತು ಹಾರಾಟಗಳನ್ನು ಮಾಡುತ್ತಿರುವವರು ಈ ವಿಚಾರದಲ್ಲಿ ಮಾತನಾಡದೆ ಇರುವ ಹುನ್ನಾರವೇನು ಎಂದು ಪ್ರಶ್ನಿಸಿದರು.