ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಂತೇಬೆನ್ನೂರು ಪೊಲೀಸರು ಕಾಕನೂರು ಗ್ರಾಮದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ವ್ಯಾಪ್ತಿಯ ವ್ಯಕ್ತಿಯನ್ನು ಅನುಮಾನದ ಮೇರೆಗೆ ಆತನಿಂದ ಸಮಂಜಸ ಉತ್ತರ ಬರದಿದ್ದರಿಂದ ಠಾಣೆಗೆ ಕರೆ ತಂದು, ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು, ನಂತರ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಆತನ ಆರೋಗ್ಯ ತಪಾಸಣೆ ಮಾಡಿಸಿದ್ದರು ಎಂದರು.
ಚನ್ನಗರಿ ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿದ್ದು, ಆತ ಆರೋಗ್ಯಕರವಾಗಿರುವುದಾಗಿ ವರದಿ ಹೇಳಿತ್ತು. ನಂತರ ತಹಸೀಲ್ದಾರರು ವಿಚಾರಣೆ ಮಾಡಿ, ಆತನಿಂದ ಮುಚ್ಚಳಿಕೆ ಬರೆಸಿಕೊಂಡು, ಆತನ ತಂದೆ, ತಾಯಿ ಜೊತೆ ಕಳಿಸಿಕೊಟ್ಟಿದ್ದರು. ಆದಾದ ನಂತರ ಅ.30ರಂದು ಪ್ರಕರಣದಲ್ಲಿ ಬಾಂಡ್ ಬರೆದುಕೊಡುವ ಬಗ್ಗೆ ತಹಸೀಲ್ದಾರ್ ಕಚೇರಿಗೆ ಆ ವ್ಯಕ್ತಿ ಹೋಗಿದ್ದ. ಅಲ್ಲಿ ಆತ ರೆಗ್ಯುಲರ್ ಬೇಲ್ ಪಡೆದು, ಮನೆಗೆ ವಾಪಸ್ಸಾಗಿದ್ದಾನೆ ಎಂದು ತಿಳಿಸಿದರು.ಆದರೆ, ಆತನ ಕುಟುಂಬದವರು ಆರೋಪಿಸಿದಂತೆ ಪೊಲೀಸರು ಆತನಿಗೆ ಯಾವುದೇ ಹಿಂಸೆ ನೀಡಿಲ್ಲ, ಆತನ ವಿಚಾರದಲ್ಲಿ ಪೊಲೀಸರ ಯಾವುದೇ ಪಾತ್ರವೂ ಇಲ್ಲ. ರಾಜ್ಯದ ವಿವಿಧೆಡೆ ದರೋಡೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದು, 1.5 ಕೋಟಿ ರು. ದರೋಡೆ ಪ್ರಕರಣದಲ್ಲಿ ಆತನಿಗೆ 1 ವರ್ಷ ಜೈಲು ಶಿಕ್ಷೆಯಾಗಿರುವ ಬಗ್ಗೆ ಮಾಹಿತಿ ಇದೆ. ಪೊಲೀಸರು ಆತನ ತಂಟೆಗೆ ಬರಬಾರದೆಂಬ ಕಾರಣಕ್ಕೆ ವಿನಾಕಾರಣ ಪೊಲೀಸರ ಮೇಲೆ ಆತನ ಕುಟುಂಬದವರು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಪೊಲೀಸರು ಇಂತಹ ಆರೋಪಕ್ಕೆ ಕಂಗೆಡದೆ, ನೈತಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳಬೇಕು. ಒಂದು ವೇಳೆ ತನಿಖಾ ಕಾಲದಲ್ಲಿ ಪೊಲೀಸರಿಂದ ತಪ್ಪು ಎಂಬುದು ಕಂಡು ಬಂದರೆ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ, ಪೊಲೀಸರ ವಿರುದ್ಧ ನಡೆಯುವಂತಹ ಷಡ್ಯಂತ್ರಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದರು.ಸಂಘಟನೆಯ ಡಿ.ಸುರೇಶ, ಎನ್.ಶಿವರಾಮ್, ಎನ್.ಮಹಾಂತೇಶ ಇತರರು ಇದ್ದರು.