ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಏ.26ರಂದು ಈ ಎರಡೂ ಹೋಬಳಿ ಗ್ರಾಮಗಳಲ್ಲಿ ಹಿಂದೆಂದೂ ಕಂಡರಿಯದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಸುಮಾರು ಮನೆಗಳು ಹಾನಿಯಾಗಿದ್ದು, ವಾಸ ಮಾಡಲಿಕ್ಕೆ ಆಗದಂತಾಗಿದೆ. ನಿರಾಶ್ರಿತರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಮರಗಳನ್ನು ಬೆಳೆಯಲಾಗಿದ್ದು, ಒಂದು ಎಕರೆಯಲ್ಲಿರುವ ಅಡಕೆ ಮರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮರಗಳು ನೆಲಕ್ಕುರುಳಿ ರೈತರು ಆತಂಕಕ್ಕೀಡಗಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ತೆಂಗಿನಮರಗಳು ಸಹ ನೆಲಕ್ಕುರುಳಿವೆ. ವರ್ಷಗಟ್ಟಲೆ ಬೆಳೆಸಿದ ಮರಗಳು ಒಂದೇ ರಾತ್ರಿಯಲ್ಲಿ ನೆಲಕ್ಕುರುಳಿರುವುದು ಸಾವಿರಾರು ರೈತರ ಜೀವನಾಧಾರಿತವೇ ಕಿತ್ತುಹೋಗಿದೆ. ರೈತನ ಬೆವರಿನ ಫಸಲು ನೀರಿನಲ್ಲಿ ಕೊಚ್ಚಿ ಹೋಗಿದೆ. ಅಡಿಕೆ ಒಂದು ಬೆಳೆ ಅಲ್ಲ, ಮಲೆನಾಡಿನ ಜೀವನಾಡಿ. ಆದ್ದರಿಂದ ಈ ಘಟನೆ ಬಗ್ಗೆ ಅಧಿಕಾರಿಗಳಿಂದ ನೈಜವಾದ ಸರ್ವೆ ಮಾಡಿಸಿ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ನೀಡಿ ಮಾರ್ಗಸೂಚಿ ಪ್ರಕಾರ ಪರಿಹಾರದ ಮೊತ್ತ 1 ಹೆಕ್ಟೇರ್ ಒಣಭೂಮಿ ಬೆಳೆಗೆ 8500 ರು., ನೀರಾವರಿ ಬೆಳೆಗೆ 17 ಸಾವಿರ ರು., ಬಹುವಾರ್ಷಿಕ ತೋಟದ ಬೆಳೆಗಳಿಗೆ 22 ಸಾವಿರ ರು., ಇದೆ. ಈ ಪರಿಹಾರವನ್ನು ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿದ್ದಲ್ಲಿ ಮಾತ್ರ ಕೊಡಬಹುದು. 1 ಹೆಕ್ಟೇರ್ನಲ್ಲಿ 2.5 ಎಕರೆ ಅಡಕೆ ಬೆಳೆಗೆ 22 ಸಾವಿರ ರು., 1 ಎಕರೆಗೆ 9 ಸಾವಿರದಂತೆ 548 ಗಿಡಗಳಿಗೆ ಲೆಕ್ಕ ಹಾಕಿದಾಗ ಒಂದು ಮರಕ್ಕೆ 16 ರು. ಬರುತ್ತದೆ. ಈ 16 ರು.ನಿಂದ 1 ಅಡಕೆ ಮರವನ್ನು ತೋಟದಿಂದ ಕಡಿದು ಹೊರಗೆ ಸಾಗಿಸಲಿಕ್ಕು ಸಹ ಸಾಧ್ಯವಿಲ್ಲ. ಆದ್ದರಿಂದ ವಿಪತ್ತು ಪರಿಹಾರ ನಿಧಿ ಹೆಚ್ಚಿಸಲು ಹಿಂದಿನಿಂದಲೂ ರೈತ ಸಂಘ ಪಾದಯಾತ್ರೆ, ಚಳವಳಿಗಳನ್ನು ಮಾಡಿ ಒತ್ತಾಯಿಸುತ್ತ ಬಂದಿದೆ. ಇಲ್ಲಿಯವರೆಗೂ ಹೆಚ್ಚಳ ಮಾಡಿಲ್ಲ. ಈಗಲಾದರೂ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಜಗದೀಶ್, ಪ್ರಮುಖರಾದ ಸಿ.ಬಿ.ಹನುಮಂತಪ್ಪ, ಡಿ.ಎನ್.ಪಂಚಾಕ್ಷರಿ ಹಲವರಿದ್ದರು.