ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ಕಾನೂನು ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಸಾರ್ವಜನಿಕರ ಕುಂದುಕೊರತೆ ದೂರುಗಳ ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ತಮ್ಮ ಬುದ್ದಿ ಮತ್ತೆ ಬಳಕೆ ಮೂಲಕ ಸಮಾಜಕ್ಕೆ ತಮ್ಮ ಅಳಿಲು ಸೇವೆ ಒದಗಿಸಲು ಸದಾ ಸಿದ್ಧರಾಗಿರಿ ಎಂದು ತಿಳಿಸಿದರು.
ಲೋಕಾಯುಕ್ತ ಸಂಸ್ಥೆ ಅತ್ಯಂತ ಬಲಿಷ್ಠವಾದುದು. ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಅಧ್ಯಯನ ಮಾಡಿ ಪ್ರತಿ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಪ್ರಾರಂಭ ಮಾಡಲಾಯಿತು. ಲೋಕಾಯುಕ್ತ ಸಂಸ್ಥೆಗೆ ಬರುವ ದೂರುಗಳನ್ನು ಪ್ರಾರಂಭಿಕವಾಗಿ ಪರಿಶೀಲನೆ ಮಾಡಲಾಗುವುದು. ಲೋಕಾಯುಕ್ತ ವ್ಯಾಪ್ತಿಗೆ ಬರುವುದನ್ನು ಮಾತ್ರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರು ದೂರು ಕೊಡುವಾಗ ಸರಿಯಾದ ದಾಖಲೆಗಳನ್ನು ನೀಡಬೇಕು ಎಂದು ತಿಳಿಸಿದರಲ್ಲದೆ, ಘಟನೆಯಾದ ಐದು ವರ್ಷದೊಳಗೆ ದೂರು ಸಲ್ಲಿಸಿದ್ದರೆ ನಂತರ ಬಂದ ದೂರುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.ಲೋಕಾಯುಕ್ತ ಸಂಸ್ಥೆ ಅಸ್ತಿತ್ವ, ಅದರ ಕೆಲಸ ಕಾರ್ಯಗಳ ಕುರಿತು ಜನರಿಗೆ ತಿಳಿ ಹೇಳುವ ಸಲುವಾಗಿ ಜೊತೆಗೆ ಜನರ ಕುಂದು ಕೊರತೆಗಳ ದೂರುಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಿ ಅವುಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಆದಷ್ಟು ಶೀಘ್ರವೇ ಅವರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಸಲುವಾಗಿ ಈ ಕುಂದುಕೊರತೆಗಳ ದೂರುಗಳ ಸ್ವೀಕಾರ ವಿಚಾರಣೆ ಹಾಗೂ ವಿಚಾರಣೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಸರ್ಕಾರಿ ನೌಕರರಿಗೆ ರಾಜ್ಯ ಲೋಕಾಯುಕ್ತ ಸಂಸ್ಥೆಯ ಕಾಯ್ದೆಗಳ ಕುರಿತು ಪರಿಚಯ ಮಾಡಿಕೊಡುವುದಕ್ಕಾಗಿ ಹಾಗೂ ಅವರಿಗೂ ಕಾನೂನಿನ ಚೌಕಟ್ಟಿನಲ್ಲಿ ರಕ್ಷಣಾತ್ಮಕ ಅವಕಾಶಗಳಿವೆ ಎಂಬುದನ್ನು ತಿಳುವಳಿಕೆ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಎಂದರು. ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿರುವ ಸುಮಾರು ೪೫೦ ರಿಂದ ೫೦೦ ಪ್ರಕರಣಗಳಲ್ಲಿ ಆಯ್ದ ಇತ್ಯರ್ಥವಾಗುವ ೮೪ ಪ್ರಕರಣಗಳನ್ನು ನಾಳೆ ಇತ್ಯರ್ಥ ಪಡಿಸಲಾಗುವುದು ಎಂದರು.
ಜನ ಸಾಮಾನ್ಯರಿಗೆ ಹಕ್ಕು ಬಾಧ್ಯತೆಯನ್ನು ಕೊಡುವ ಸಲುವಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಲು ಅಧಿಕಾರವನ್ನು ಕೊಡುವ ಸಲುವಾಗಿ ಹಾಗೂ ಆ ಹಕ್ಕುಗಳನ್ನು ಎಲ್ಲಿ ಚಲಾಯಿಸಬೇಕು ಅದಕ್ಕೋಸ್ಕರ ನ್ಯಾಯಾಲಯಗಳು ಸರ್ಕಾರಿ ಕಚೇರಿಗಳು ಇವುಗಳೆಲ್ಲವನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಿಕೊಂಡಿದ್ದೇವೆ. ಪ್ರತಿಯೊಬ್ಬರು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.ರಾಷ್ಟ್ರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಶ್ರೆಯೋಭಿವೃದ್ಧಿಗಾಗಿ ಸರ್ಕಾರಗಳು ಅನೇಕ ಅಭಿವೃದ್ಧಿ ಯೋಜನೆಗ ಳನ್ನು ತಯಾರಿಸುತ್ತವೆ ಇದಕ್ಕೆ ನಿಯಮಾವಳಿಗಳನ್ನು ಮಾಡಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ಒಂದು ಮಗು ತಾಯಿಯ ಗರ್ಭದಲ್ಲಿರುವುದರಿಂದ ಆರಂಭಗೊಂಡು ಅದು ಮರಣವನ್ನ ಹೊಂದಿ ಮಣ್ಣಿಗೆ ಸೇರುವ ತನಕ ಅದರ ಯೋಗಕ್ಷೇಮ, ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ನೋಡಿಕೊಳ್ಳುವ ಕರ್ತವ್ಯ ಸರ್ಕಾರದ್ದಾಗಿದೆ ಎಂದರು. ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ತೆರೆದಿದೆ. ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ ಅವಶ್ಯಕತೆ ಇದ್ದರೆ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ಮಾಡುವಂತಹ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ ಎಂದರಲ್ಲದೆ, ಉತ್ತಮವಾದ ರಸ್ತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು. ಹೆಣ್ಣು ಮಕ್ಕಳ ರಕ್ಷಣೆಗಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಗೆ ಅವಕಾಶವಿಲ್ಲ, ಇಂತಹ ಅಪರಾಧ ಎಸಗಿದಲ್ಲಿ ಶಿಕ್ಷೆ ಇದೆ ಎಂದು ತಿಳಿಸಿದರು. ಒಬ್ಬರು ಮತ್ತೊಬ್ಬರ ಹಕ್ಕುಗಳನ್ನು ಗೌರವಿಸಬೇಕು ಹಾಗೆ ಮಾಡಿದರೆ ನಮ್ಮ ಹಕ್ಕುಗಳನ್ನು ಕೂಡ ನಾವು ಸಂರಕ್ಷಣೆ ಮಾಡಿಕೊಳ್ಳಬಹುದು ಎಂದರು.ಲೋಕಾಯುಕ್ತ ಸಂಸ್ಥೆಯಲ್ಲಿ ೪೦ ಜನ ಜಿಲ್ಲಾ ನ್ಯಾಯಾಧೀಶರಿದ್ದಾರೆ. ಅದರಲ್ಲಿ ಕೆಲವರು ಸೀನಿಯರ್ ನ್ಯಾಯಾಧೀಶರು, ಜೂನಿಯರ್ ನ್ಯಾಯಾಧೀಶರಿದ್ದಾರೆ, ಐದರಿಂದ ಆರು ಸಾವಿರ ಜನರು ಕರ್ನಾಟಕ ರಾಜ್ಯದಲ್ಲಿ ಸಿಬ್ಬಂದಿಗಳು ಇದ್ದಾರೆ ಎಂದು ತಿಳಿಸಿದರು. ಅದರಲ್ಲಿ ತಾಂತ್ರಿಕ ವರದಿಯನ್ನು ನೀಡುವುದಕ್ಕಾಗಿ ಪ್ರತ್ಯೇಕವಾಗಿ ಎಂಜಿನಿಯರ್ಗಳಿದ್ದಾರೆ. ಜೊತೆಗೆ ನಮ್ಮದೇ ಆದಂತಹ ಪೊಲೀಸ್ ಸಿಬ್ಬಂದಿ ಇದ್ದಾರೆ. ಲೆಕ್ಕಪತ್ರಗಳ ವಿಚಾರಣೆಗೆ ಲೆಕ್ಕಪತ್ರ ಶಾಖೆ ಇದೆ ಹಾಗೂ ಒಬ್ಬರು ಲೋಕಾಯುಕ್ತರು ಹಾಗೂ ಎರಡು ಜನ ಉಪ ಲೋಕಾಯುಕ್ತರು ನಮ್ಮ ಸಂಸ್ಥೆಯಲ್ಲಿ ಇದ್ದಾರೆ ಎಂದರು.
ಲೋಕಾಯುಕ್ತ ಸಂಸ್ಥೆಯೂ ಅತಿ ಹೆಚ್ಚಿನ ಗುರುತರವಾದ ಜವಾಬ್ದಾರಿಯನ್ನ ಹೊಂದಿರು ವಂತಹ ಕಾರ್ಯಾಂಗವಾಗಿದೆ. ನಿಷ್ಠೆಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡುವಂತಹ ಅಧಿಕಾರಿ, ಸಿಬ್ಬಂದಿ ಜನರಿಗೆ ಬಹಳ ಹತ್ತಿರವಾಗುತ್ತಾರೆ. ಇದರಿಂದ ಜನರಿಗೆ ಉತ್ತಮವಾದಂತಹ ಫಲಿತಾಂಶ ದೊರೆಯುತ್ತದೆ ಎಂದರು. ಅಧಿಕಾರಿಗಳು ಹಿಂದೆ ಹಾಕಿದ ಹೆಜ್ಜೆಗಳನ್ನ ಮರೆತು ಮುಂದೆ ನಾವು ನಮ್ಮ ಕೈಲಾದಂತಹ ಅಳಿಲು ಸೇವೆಯನ್ನು ಮಾಡಲು ಸದಾಕಾಲ ನಾವು ಸಿದ್ಧರಾಗಿರೋಣ ಎಂದು ಹೇಳಿದರು.ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು ೦೭ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್, ಕರ್ನಾಟಕ ಲೋಕಾಯುಕ್ತದ ಕಾನೂನು ಅಭಿಪ್ರಾಯ೦೨ ಸಹಾಯಕ ನಿಬಂಧಕರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶುಭವೀರ ಬಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಬಿ.ಕೆ. ಸಿವಿಲ್ ನ್ಯಾಯಾಧೀಶರು ಹಾಗೂ ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಲೋಕಾಯುಕ್ತ ಪೊಲೀಸ್ ಅಧಿಕ್ಷಕರಾದ ಸ್ನೇಹ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಪೊಲೀಸ್ ವರಿ?ಧಿಕಾರಿ ಮೊಹಮ್ಮದ್ ಸುಜೀತ, ಹೆಚ್ಚುವರಿ ಪೊಲೀಸ್ ವರಿ?ಧಿಕಾರಿ ತಮ್ಮಯ್ಯ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ ಉಪಸ್ಥಿತರಿದ್ದರು.