ಮಾಗಡಿ ರಾಮನಗರಕ್ಕೆ ಕೆನಾಲ್‌ ಮೂಲಕ ನೀರು ಕೊಡಿ

KannadaprabhaNewsNetwork | Published : Jun 25, 2025 1:18 AM

ಹೇಮಾವತಿ ಜಲಾಶಯದ ನೀರು ತುಮಕೂರುನಿಂದ ಕುಣಿಗಲ್ ಮುಖಾಂತರ ಮಾಗಡಿ ಹಾಗೂ ರಾಮನಗರಕ್ಕೆ ಹರಿಸಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಮಂಜೇಗೌಡ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಹೇಮಾವತಿ ಜಲಾಶಯದ ನೀರು ತುಮಕೂರುನಿಂದ ಕುಣಿಗಲ್ ಮುಖಾಂತರ ಮಾಗಡಿ ಹಾಗೂ ರಾಮನಗರಕ್ಕೆ ಹರಿಸಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷ ಮಂಜೇಗೌಡ ಆಗ್ರಹಿಸಿದ್ದಾರೆ. ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಎಡೆಯೂರಿನಲ್ಲಿ ಏರ್ಪಡಿಸಿದ್ದ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹೇಮಾವತಿ ಜಲಾಶಯದಲ್ಲಿ ಸಂಗ್ರಹ ಆಗುವ ನೀರನ್ನು ಎರಡು ಬಾರಿ ಹರಿಸಲು ಸಿದ್ಧವಿದ್ದೇವೆ. ಈ ಭೂಮಿ ಮೇಲೆ ಇರುವ ಗಾಳಿ ನೀರು ಆಹಾರವನ್ನು ಪ್ರಕೃತಿ ಸ್ವಾಭಾವಿಕವಾಗಿ ಹಂಚಿಕೆ ಮಾಡಿದೆ. ಆದರೆ ಅದನ್ನು ನಾವು ತಡೆಯುವ ಅಧಿಕಾರ ವ್ಯವಸ್ಥೆ ನಮ್ಮಲ್ಲಿ ಖಂಡನೀಯ ಎಂದರು. ಮಾಗಡಿ ರಾಮನಗರ ರೈತರು ಕೂಡ ಅನ್ನದಾತರೇ. ಅವರು ಕೂಡ ಆಹಾರವನ್ನು ಉತ್ಪಾದನೆ ಮಾಡುತ್ತಾರೆ. ಅವರಿಗೆ ಕುಡಿಯಲು ವ್ಯವಸಾಯಕ್ಕೆ ಎಲ್ಲಾ ರೀತಿಯ ನೀರಿನ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಸರಕಾರದ ಜವಾಬ್ದಾರಿಯಾಗಿದೆ. ನೀರು ಪೂರೈಸುವ ನೆಪದಲ್ಲಿ ಪೈಪ್ಲೈನ್ ಮುಖಾಂತರ ಕಾಮಗಾರಿಯನ್ನು ನಡೆಸುವುದನ್ನು ಈ ಸರ್ಕಾರ ಕೈಬಿಡಬೇಕು. ಇದರಿಂದ ಅಂತರ್ಜಲ ಹಾಳಾಗುವುದರ ಜೊತೆಗೆ ಪ್ರಕೃತಿಯಲ್ಲಿ ವಾಸ ಮಾಡುವ ಪ್ರಾಣಿ ಪಕ್ಷಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಅಧಿಕಗೊಳ್ಳುತ್ತದೆ ಆದ್ದರಿಂದ ಪೈಪ್ಲೈನ್ ಕಾಮಗಾರಿಯನ್ನು ಬಿಟ್ಟು ಓಪನ್ ಕಾಲುವೆ ಮುಖಾಂತರ ನೀರು ಹರಿಸುವ ಕೆಲಸವನ್ನು ಮಾಡಬೇಕೆಂದರು.

ಪೈಪ್ ಲೈನ್ ಕಾಮಗಾರಿ ಎಂಬುದು ಇತ್ತೀಚೆಗೆ ಕೆಲವು ರಾಜಕಾರಣಿಗಳಿಗೆ ಹಣ ಮಾಡುವ ದೊಡ್ಡ ದಂಧೆ ಆಗಿದೆ ಕಮೀಷನ್‌ಗಾಗಿ ಪೈಪ್ ಲೈನ್ ಕಾಮಗಾರಿ ಮಾಡಿ ತಮ್ಮ ಜೋಬು ತುಂಬಿಸಿಕೊಳ್ಳುವಂತಹ ಕೆಟ್ಟ ಪದ್ಧತಿಗೆ ಅಂತ್ಯ ಆಡಬೇಕಾಗಿದೆ. ಪೈಪ್ಲೈನ್ ಕಾಮಗಾರಿಯನ್ನು ಬಿಟ್ಟು ತೆರೆದ ಕಾಲುವೆ ಮುಖಾಂತರ ನೀರು ಹರಿಸುವ ಕೆಲಸ ಮಾಡದಿದ್ದರೆ ರಾಜ್ಯ ರೈತ ಸಂಘ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಡಿಯೂರು ದೇವಾಲಯದ ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮುಖಾಂತರ ಪಟ್ಟಣದ ಬೀದಿಗಳಲ್ಲಿ ಗ್ರಾಮ ಪಂಚಾಯಿತಿ ಮುಂಭಾಗ ರೈತರು ಜಮಾವಣೆಗೊಂಡರು. ಹಲವಾರು ರೈತರಿಗೆ ಇದೇ ಸಂದರ್ಭದಲ್ಲಿ ಹಸಿರು ದೀಕ್ಷೆ ಹಾಗೂ ಗುರುತಿನ ಚೀಟಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಧ್ಯಕ್ಷರಾದ ಅಂಜನಪ್ಪ, ತಾಲೂಕು ಅಧ್ಯಕ್ಷರಾದ ಆರ್ ಕೆ ರಂಗಸ್ವಾಮಿ, ಯಡಿಯೂರು ಹೋಬಳಿ ಅಧ್ಯಕ್ಷ ನಾಗೇಶ, ಯುವ ಘಟಕದ ಅಧ್ಯಕ್ಷ ಮೂಡಲಗಿರಯ್ಯ, ರಾಜೇಶ್ವರಿ, ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಸೇರಿದಂತೆ ಹಲವಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.