ಪಿಯು ಫಲಿತಾಂಶ ಪ್ರಕಟ : 5ನೇ ಸ್ಥಾನಕ್ಕಿಳಿದ ಕೊಡಗು

KannadaprabhaNewsNetwork |  
Published : Apr 11, 2024, 12:48 AM IST
ಚಿತ್ರ : 10ಎಂಡಿಕೆ6 : ಕೂಡ್ಲೂರು ಚೆಟ್ಟಳ್ಳಿ ಗ್ರಾಮದ  ರಿನಿಶಾ ಹಾಗು ಅವಳ ತಾಯಿ ಬೇಬಿರಾಣಿ  | Kannada Prabha

ಸಾರಾಂಶ

ಪಿಯು ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಕೊಡಗು ಜಿಲ್ಲೆ 5ನೇ ಸ್ಥಾನಕ್ಕೆ ಇಳಿದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಈ ಬಾರಿ ಕೊಡಗು 5ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಶೇ. 92.13ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2023ಕ್ಕೆ ಹೋಲಿಸಿದರೆ ಈ ವರ್ಷ ಶೇಕಡವಾರು ಪ್ರಮಾಣ ಏರಿಕೆ ಆಗಿದೆ. ಕಳೆದ ವರ್ಷ ಕೊಡಗಿನಲ್ಲಿ ಶೇ. 90.55 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು.

2022ನೇ ಸಾಲಿನಲ್ಲಿ ಕೊಡಗು ಆರನೇ ಸ್ಥಾನದಲ್ಲಿತ್ತು. 2022ಕ್ಕೆ ಹೋಲಿಸಿದರೆ 2023ರಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.17.23 ರಷ್ಟು ಹೆಚ್ಚಳವಾಗಿತ್ತು. ಈ ಬಾರಿ ಈ ಪ್ರಮಾಣ 1.58ರಷ್ಟು ಹೆಚ್ಚಳ ಕಂಡುಬಂದಿದೆ. ಜಿಲ್ಲೆಯಲ್ಲಿ 4,576 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4,216 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 804 ವಿದ್ಯಾರ್ಥಿಗಳ ಪೈಕಿ 671 (ಶೇ. 83.46), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 2,351 ವಿದ್ಯಾರ್ಥಿಗಳಲ್ಲಿ 2,196 (ಶೇ 93.41) ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 1,421 ವಿದ್ಯಾರ್ಥಿಗಳ ಪೈಕಿ 1,349 (ಶೇ 94.93) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 385 ಖಾಸಗಿ ಅಭ್ಯರ್ಥಿಗಳ ಪೈಕಿ 222 (ಶೇ 57.66) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತಾ 140 ಅಭ್ಯರ್ಥಿಗಳ ಪೈಕಿ 71 (ಶೇ 50.71) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಗೆ ಪ್ರಥಮ ಬಂದವರು : ಕಲಾ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಪಿಯು ಕಾಲೇಜಿನ ಹೇಮಾವತಿ ಎಸ್. 574 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದರೆ, ಸಿದ್ದಾಪುರ ಇಕ್ರಾ ಪಿಯು ಕಾಲೇಜಿನ ಸಫ್ನ ಪಿ.ಐ. 572 ಅಂಕ ಗಳಿಸಿ ದ್ವಿತೀಯ ಹಾಗೂ ಮಡಿಕೇರಿ ಸಂತ ಜೋಸೆಫರ ಪಿಯು ಕಾಲೇಜಿನ ಶ್ರೀ ನಂದಾ ಎಸ್. 571 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಗೋಣಿಕೊಪ್ಪ ವಿದ್ಯಾನಿಕೇತನ ಪ.ಪೂ. ಕಾಲೇಜಿನ ಚರಿಸ್ಮ ಜಾನ್ಸನ್ 591 ಅಂಕ ಗಳಿಸಿ ಪ್ರಥಮ, ಗೋಣಿಕೊಪ್ಪ ಸರ್ವ ದೈವತಾ ಪಿ.ಯು. ಕಾಲೇಜಿನ ರಶ್ಮಿತ ಕೆ.ಕೆ. 589 ಅಂಕ ಗಳಿಸಿ ದ್ವಿತೀಯ ಹಾಗೂ ಪೊನ್ನಂಪೇಟೆ ಸಂತ ಅಂತೋಣಿ ಪಿ.ಯು. ಕಾಲೇಜಿನ ಬಿಂದು ಐ. ಮತ್ತು ಕೊಟ್ಟಮುಡಿ ಮರ್ಕಜ್ ಪಿ.ಯು. ಕಾಲೇಜಿನ ಜೂವೇರಿಯಾ ಪಿ. ಝಡ್. ತಲಾ 588 ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಡಿಕೇರಿ ಸಂತ ಮೈಕಲರ ಪಿಯು ಕಾಲೇಜಿನ ಡಿಯಾನ ನವೀನ್ ಎ. 592 ಅಂಕ ಗಳಿಸಿ ಪ್ರಥಮ, ಇದೇ ಸಂಸ್ಥೆಯ ಜೀವನ್ ಡಿ.ಪಿ. ಮತ್ತು ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿಯು ಕಾಲೇಜಿನ ಸಿಂಚು ಹೆಚ್.ಆರ್. ತಲಾ 588 ಅಂಕ ಗಳಿಸಿ ದ್ವಿತೀಯ ಹಾಗೂ ಗೋಣಿಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ಕಾವೇರಮ್ಮ ಎಂ.ಎಂ. ತೃತೀಯ ಸ್ಥಾನ ಗಳಿಸಿದ್ದಾರೆ.

ಅಮ್ಮ - ಮಗಳು ಇಬ್ಬರೂ ಪಾಸ್: ಕುಶಾಲನಗರ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ರಿನಿಶಾ ಹಾಗು ಅವಳ ತಾಯಿ ಬೇಬಿರಾಣಿ 2023-24ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜಿನಲ್ಲಿ ಓದುತ್ತಿರುವ ಎಲೆಕ್ಟ್ರಿಕಲ್ ಕ್ಲಾಸ್ 1 ಗುತ್ತಿಗೆದಾರ ಸುರೇಂದ್ರ.ಟಿ.ಕೆ ರವರ ಪುತ್ರಿ ರಿನಿಶಾ ಟಿ.ಎಸ್ 600ಕ್ಕೆ 570 ಪಡೆದು ಅತ್ಯುನ್ನತ ಅಂಕ ಪಡೆದರೆ ಅವಳ ತಾಯಿ ಬೇಬಿರಾಣಿ.ಎಂ. ಯು. ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜಿನಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು 600ಕ್ಕೆ 388 ಪಡೆಯುವ ಮೂಲಕ ಒಂದೇ ವರ್ಷದಲ್ಲಿ ತಾಯಿ-ಮಗಳು ಪಿಯುಸಿ ಉತ್ತೀರ್ಣ ರಾಗಿದ್ದಾರೆ. ಕನ್ನಡದಲ್ಲಿ ಮಗಳು 96 ಪಡೆದರೆ ತಾಯಿ 93 ಅಂಕಪಡೆದಿದ್ದಾರೆ.

ಕಳೆದ 25 ವರ್ಷಗಳ‌‌ ಹಿಂದೆ ಹತ್ತನೇ ತರಗತಿಯನ್ನು ಓದಿದ ನಂತರ ಈಗ ಮಗಳ ಒತ್ತಾಯಕ್ಕಾಗಿ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ಹೆಮ್ಮೆ ಎನಿಸಿದೆ ಎಂದು ಬೇಬಿರಾಣಿ ಹೇಳುತ್ತಾಳೆ.

ನನ್ನ ತಾಯಿಯು ಪಿಯುಸಿ ಉತ್ತೀರ್ಣರಾಗಿವುದು‌ ನಾನು ಉತ್ತೀರ್ಣರಾಗಿರುವುದಕ್ಕಿಂತಲೂ ಹೆಮ್ಮೆಯಾಗಿದೆ ಎನ್ನುತ್ತಾಳೆ ರಿನಿಶಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!