ಮುಂಡರಗಿ: ಗ್ರಾಮೀಣ ಮಕ್ಕಳಿಗೆ ಉತ್ತಮ ಆಧುನಿಕ ಶಿಕ್ಷಣ ಒದಗಿಸುವಲ್ಲಿ ಇಲ್ಲಿನ ನವೋದಯ ವಿದ್ಯಾಲಯದ ಪಾತ್ರ ಬಹಳ ಮಹತ್ತರವಾದುದು. ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯ ನಮ್ಮ ಭಾಗದ ಹೆಮ್ಮೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಗದಗ ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗಲಿರುವ ಈ ಶಾಲೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಟ್ಟಿದೆ. ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಿದೆ. ಇಲ್ಲಿ ವ್ಯಾಸಂಗ ಮಾಡುವ ಮಕ್ಕಳೆಲ್ಲರೂ ಭಾಗ್ಯವಂತರು.ವಿದ್ಯಾಲಯದ ಏಳ್ಗೆಗೆ ನಮ್ಮ ಕ್ಷೇತ್ರದ ಸಾರ್ವಜನಿಕರು, ಸರ್ಕಾರಿ ಪ್ರತಿನಿಧಿಗಳು ಹಾಗು ಸ್ಥಳೀಯರೆಲ್ಲರ ಸಹಕಾರ ಅವಶ್ಯವಾಗಿದೆ. ಶಾಲೆಗೆ ಬೇಕಾದ ಅವಶ್ಯಕ ಅಭಿವೃದ್ಧಿ ಕಾರ್ಯ ಸರ್ಕಾರದಿಂದ ಮಾಡಿಸಿಕೊಡಲು ತಾವು ಸದಾ ಸಿದ್ಧರಿರುವುದಾಗಿ ಹೇಳಿದರು.
ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಂತರ ಸಿಬಿಎಸ್ಇ ಶೈಕ್ಷಣಿಕ ಮತ್ತು ಆಟೋಟಗಳಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪಾರಿತೋಷಕ ವಿತರಿಸಲಾಯಿತು.ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಜಿ.ಎಸ್. ಬಸವರಾಜು 2024-25ರ ಶೈಕ್ಷಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ, ಸಹಪಠ್ಯ ಚಟುವಟಿಗಳು, ಶಾಲಾ ಅಭಿವೃದ್ಧಿ ಕಾರ್ಯಗಳು ಮತ್ತು ಮಕ್ಕಳ ಸಾಧನೆ ವಿವರಿಸುತ್ತಾ ವರದಿ ಮಂಡಿಸಿದರು.