ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ ಎನ್‌ಐಎ ತನಿಖೆ ಆಗ್ರಹಿಸಿ 25ರಂದು ಬಜಪೆಯಲ್ಲಿ ಜನಾಗ್ರಹ ಸಭೆ

KannadaprabhaNewsNetwork | Published : May 23, 2025 12:21 AM
ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಸುಹಾಸ್‌ ಶೆಟ್ಟಿ ಶ್ರದ್ಧಾಂಜಲಿ ಸಭೆ ಮೇ 25ರಂದು ಸಂಜೆ 3.30ಕ್ಕೆ ಬಜಪೆ ಜಂಕ್ಷನ್‌ ಶಾರದ ಮಂಟಪ ಬಳಿ ನಡೆಯಲಿದೆ
Follow Us

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಸುಹಾಸ್‌ ಶೆಟ್ಟಿ ಶ್ರದ್ಧಾಂಜಲಿ ಸಭೆ ಮೇ 25ರಂದು ಸಂಜೆ 3.30ಕ್ಕೆ ಬಜಪೆ ಜಂಕ್ಷನ್‌ ಶಾರದ ಮಂಟಪ ಬಳಿ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ಎಚ್‌.ಕೆ. ಪುರುಷೋತ್ತಮ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ವಾಗ್ಮಿ ಶ್ರೀಕಾಂತ್‌ ಶೆಟ್ಟಿ ಪ್ರಮುಖ ಭಾಷಣ ಮಾಡುವರು. ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ್‌ ಮೆಂಡನ್‌ ಮಾತನಾಡಲಿದ್ದಾರೆ. ಮಂಗಳೂರು ಮಹಾನಗರ ಸೇರಿದಂತೆ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಹಿತೈಷಿಗಳು ಈ ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಪಾರ್ಕಿಂಗ್‌ ವ್ಯವಸ್ಥೆ: ಎಲ್ಲ ಕಾರ್ಯಕರ್ತರು, ಹಿತೈಷಿ ಬಂಧುಗಳು ಸಂಜೆ 3 ಗಂಟೆಯೊಳಗೆ ಬಜಪೆಯ ಶಾರದಾ ಮಂಟಪವನ್ನು ತಲುಪಬೇಕು. ಮಂಗಳೂರು - ಸುರತ್ಕಲ್‌ - ಕಾವೂರು ಭಾಗದಿಂದ ಬರುವ ವಾಹನಗಳಿಗೆ ಬಜಪೆ ನಾರಾಯಗುರು ಮಂದಿರ ಬಳಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಗುರುಪುರ - ವಾಮಂಜೂರು - ಮಳಲಿ ಕಡೆಯಿಂದ ಬರುವ ವಾಹನಗಳಿಗೆ ಸಂಜೀವ ಶೆಟ್ಟಿ ಸಭಾಭವನ ಮತ್ತು ಮೈದಾನದಲ್ಲಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮೂಲ್ಕಿ ಮೂಡುಬಿದಿರೆಯಿಂದ ಬರುವ ವಾಹನಗಳಿಗೆ ಯಾದವ್‌ ಕೋಟ್ಯಾನ್‌ ಕನ್ನಿಕಾ ನಿಲಯ ಮೈದಾನ ಬಳಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದರು.ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಮನೋಹರ್‌ ಸುವರ್ಣ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್‌, ಜಿಲ್ಲಾ ಸಂಯೋಜಕ ನವೀನ್‌ ಮೂಡುಶೆಡ್ಡೆ ಇದ್ದರು.ಬಾಕ್ಸ್‌----

ಹಿಂದುಗಳ ಬಳಕೆ ಬಗ್ಗೆ ತನಿಖೆಯಾಗಲಿಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಕಳಸದಿಂದ ಇಬ್ಬರು ಹಿಂದುಗಳನ್ನು ಕರೆಸಿ ಬಳಸಿಕೊಳ್ಳಲಾಗಿದೆ. ಸುಹಾಸ್‌ ಹತ್ಯೆಗೆ 50 ಲಕ್ಷ ರು. ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಎಚ್‌.ಕೆ. ಪುರುಷೋತ್ತಮ ಆಗ್ರಹಿಸಿದರು.ಪೊಲೀಸರ ಕಿರುಕುಳ:

ಸುಹಾಸ್‌ ಹತ್ಯೆ ನಡೆದ ಬಳಿಕ ಹಿಂದು ಸಂಘಟನೆಗಳ ಕಾರ್ಯಕರ್ತರು ಮನೆಯಲ್ಲಿ ಉಳಿದುಕೊಳ್ಳಲು ಪೊಲೀಸರು ಬಿಡುತ್ತಿಲ್ಲ. 10ಕ್ಕೂ ಅಧಿಕ ಮಂದಿ ಕಾರ್ಯಕರ್ತರನ್ನು ಪೊಲೀಸರು ಈಗಾಗಲೇ ಗಡಿಪಾರು ಮಾಡಿದ್ದಾರೆ. ಹಿಂದು ಕಾರ್ಯಕರ್ತರ ಮನೆಗಳಿಗೆ ತೆರಳಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಭುಜಂಗ ಕುಲಾಲ್‌ ಆರೋಪಿಸಿದರು.