ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕ್ರಷರ್‌ ಬಂದ್‌ಗೆ ಜನಾಭಿಪ್ರಾಯ ಮುಖ್ಯ: ಶಾಸಕ

KannadaprabhaNewsNetwork | Published : Jun 4, 2025 12:31 AM

ಹಿರೆನಾಗವೇಲಿ ಗ್ರಾಮವು ಕ್ರಷರ್‌ ಮತ್ತು ಬಂಡೆಸಿಡಿತದಿಂದ ಆಗುವ ಶಬ್ದ ಮತ್ತು ಧೂಳಿನಿಂದ ತತ್ತರಿಸಿವೆ. ಡೈನಮೇಟ್ ಸಿಡಿತದಿಂದ ಗ್ರಾಮದ ಹಲವು ಮನೆಗಳಿಗೆ ಹಾನಿಯಾಗಿದೆ. ಸಾಕಷ್ಟು ಜನ ಅನಾರೋಗ್ಯಗಳಿಗೆ ತುತ್ತಾಗಿದ್ದಾರೆ. ಈಗ ನನ್ನ ಬಳಿ ಕ್ರಷರ್ ಗಳನ್ನು ನಿಲ್ಲಿಸುವಂತೆ ಶಾಸಕರಿಗೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕ್ಷೇತ್ರದ ಮೂಲೆ ಮೂಲೆಗಳ ಕುಗ್ರಾಮಗಳಿಗೆ ಭೇಟಿ ನೀಡುವುದರಿಂದ ಅಲ್ಲಿನ ಜನತೆಯ ಸಮಸ್ಯೆ ಅರಿತು ಅವುಗಳನ್ನು ಪರಿಹರಿಸಲು ಸಾಧ್ಯವಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯ 366 ಹಳ್ಳಿಗಳ ಪೈಕಿ ಇದುವರೆಗೂ 152 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನತೆಯ ಸಮಸ್ಯೆಗಳ ಅರಿತಿದ್ದು, ಸಾಧ್ಯವಾದಷ್ಟೂ ಮಟ್ಟಿಗೆ ಪರಿಹರಿಸಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದಡಿ ಮಂಗಳವಾರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಹಿರೆನಾಗವೇಲಿ ಗ್ರಾಮಕ್ಕೆ 36 ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಕ್ರಷರ್‌ ಪರ- ವಿರುದ್ಧ ಅಭಿಪ್ರಾಯ

ಹಿರೆನಾಗವೇಲಿ ಗ್ರಾಮವು ಕ್ರಷರ್‌ ಮತ್ತು ಬಂಡೆಸಿಡಿತದಿಂದ ಆಗುವ ಶಬ್ದ ಮತ್ತು ಧೂಳಿನಿಂದ ತತ್ತರಿಸಿವೆ. ಡೈನಮೇಟ್ ಸಿಡಿತದಿಂದ ಗ್ರಾಮದ ಹಲವು ಮನೆಗಳಿಗೆ ಹಾನಿಯಾಗಿದೆ. ಸಾಕಷ್ಟು ಜನ ಅನಾರೋಗ್ಯಗಳಿಗೆ ತುತ್ತಾಗಿದ್ದಾರೆ. ಈಗ ನನ್ನ ಬಳಿ ಕ್ರಷರ್ ಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ನಾನು ಶಾಸಕನಾದ ಪ್ರಾರಂಭದಲ್ಲಿಯೇ ಎಲ್ಲ ಕ್ರಷರ್ ಗಳನ್ನು ಬಂದ್ ಮಾಡಿಸಿದಾಗ, ಕ್ರಷರ್ ಮಾಲಿಕರು ಕೋರ್ಟ್ ಗೆ ಹೋಗಿ, ಕ್ರಷರ್‌ಗೆ ಶಾಸಕರು ಮಾತ್ರ ವಿರೋಧಿಸುತ್ತಿದ್ದಾರೆ ಜನತೆಯ ವಿರೋಧ ಇಲ್ಲ ಎಂದು ವಾದಿಸಿ ಆದೇಶ ತಂದು ಕ್ರಷರ್ ಗಳನ್ನು ಪ್ರಾರಂಭಿಸಿದರು. ಈಗ ಗ್ರಾಮಸ್ಥರೆಲ್ಲರೂ ಸೇರಿ ಕ್ರಷರ್ ಗಳನ್ನು ಬಂದ್ ಮಾಡಲು ಪರ ಮತ್ತು ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ. ಯಾವ ಅಭಿಪ್ರಾಯಕ್ಕೆ ಹೆಚ್ಚಿಗೆ ಮತ ಬಂದರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು. ಸ್ಮಶಾನಕ್ಕೆ ತೆರಳಲು ರಸ್ತೆ

ಈ ಗ್ರಾಮದಲ್ಲಿ ಸುಮಾರು 50 ವರ್ಷಗಳಿಂದ ಸ್ಮಶಾನಕ್ಕೆ ತೆರಳುವ ರಸ್ತೆಯೇ ಇಲ್ಲದೇ ಗ್ರಾಮದ ಜನತೆ ಶವಸಂಸ್ಕಾರಕ್ಕೆ ಬಹಳ ತೊಂದರೆ ಅನುಭವಿಸುತ್ತಿದ್ದರು. ಈವಿಷಯ ತಿಳಿದು ಮಂಗಳವಾರ ಸ್ಮಶಾನಕ್ಕೆ ತೆರಳುವ ರಸ್ತೆಗೆ ಗ್ರಾಮದ ಹಲವು ಜನರ ಮನವೊಲಿಸಿ, ಅವರ ಜಮೀನುಗಳಲ್ಲಿಯೇ ರಸ್ತೆ ಬಿಡುವಂತೆ ಮನವಿ ಮಾಡಿದಾಗ ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ರಸ್ತೆ ಮಾಡಲು ಅವಕಾಶ ನೀಡಿದರು. ತಕ್ಷಣವೇ ತಾಲ್ಲೂಕು ಆಡಳಿತಕ್ಕೆ ತಿಳಿಸಿ ರಸ್ತೆ ನಿರ್ಮಾಣಕ್ಕೆ ಜೆಸಿಬಿಯಿಂದ ಚಾಲನೆ ನೀಡಿದ್ದೇನೆ. ಕುಳಿತು ಮಾತನಾಡಿದರೆ ಎಂತಹ ಸಮಸ್ಯೆಯೂ ಬಗೆ ಹರಿಯುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು. ಗ್ರಾಮದಲ್ಲಿ ವಸತಿ ಮತ್ತು ಮನೆ ರಹಿತರಿಗೆ ವಸತಿ ಮತ್ತು ಮನೆ ನಿರ್ಮಿಸಲು, ಸುಮಾರು 2.5 ಎಕರೆ ಜಮೀನು ಗುರ್ತಿಸಿದ್ದು ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು, ಗ್ರಾಮಗಳಲ್ಲಿ ರಸ್ತೆ, ಚರಂಡಿ, ಹೊಲ- ತೋಟ,ಗದ್ದೆಗಳಿಗೆ ತೆರಳಲು ರಸ್ತೆ, ಬೀದಿ ದೀಪ, ಸಮುದಾಯ ಭವನಗಳಿಗೆ ಜಾಗ ಮತ್ತು ಹಣ ಮಂಜೂರು ಮಾಡಲು ಶಾಸಕರ ಅನುದಾನ ತರಲಿದ್ದೇನೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗೂ ಸರಾಸರಿ 10 ಕೋಟಿ ರೂಗಳ ಅನುದಾನ ಹಾಕುತ್ತಿದ್ದೇನೆ. ಆದರೆ ಆ ಅನುದಾನ ನನ್ನ ಕ್ಷೇತ್ರದ ಜನತೆಯ ಬೇಡಿಕೆ ಈಡೇರಿಸಲು ಸಾಕಾಗುತ್ತಿಲ್ಲ ಎಂದರು.

ಈ ವೇಳೆ ತಾಲೂಕು ತಹಸೀಲ್ದಾರ್ ಅನಿಲ್, ತಾಪಂ ಇಒ ಮಂಜುನಾಥ್, ಟಿಎಚ್‌ಒ ಡಾ.ಮಂಜುಳಾ, ಎಡಿಎಲ್ಆರ್ ವಿವೇಕ್ ಮಹದೇವ್, ಪಿಡಿಓ ಮದ್ದಿರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ರಮೇಶ್ ಬಾಬು,ಜಿ.ಉಮೇಶ್, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು,ಗ್ರಾಮಸ್ಥರು ಇದ್ದರು.