ಕನ್ನಡಪ್ರಭ ವಾರ್ತೆ ತುಮಕೂರು
ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಗುಬ್ಬಿ ಪಟ್ಟಣದ ಡಾ: ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸೆಪ್ಟೆಂಬರ್ 5ರಂದು ಬೆಳಗ್ಗೆ 10 ಗಂಟೆಗೆ ಪ್ರಜಾಸೇವಾ ಆಂದೋಲನ ಸಭೆ ನಡೆಸಲಾಗುವುದು. ಅದೇ ದಿನ ಜಿಲ್ಲೆಯ ಉಳಿದ 9 ತಾಲೂಕುಗಳಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದ್ದು, ಸೆಪ್ಟೆಂಬರ್ 12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದೆ.
ಸಾರ್ವಜನಿಕರು ಅಹವಾಲುಗಳೇನಾದರೂ ಇದ್ದಲ್ಲಿ ಸೆಪ್ಟೆಂಬರ್ 5 ಹಾಗೂ 12ರಂದು ನಡೆಯುವ ಪ್ರಜಾಸೇವೆ ಆಂದೋಲನ ಸಭೆಗೆ ಖುದ್ದಾಗಿ ಹಾಜರಾಗಿ ಸಲ್ಲಿಸಬಹುದಾಗಿದೆ. ಅಲ್ಲದೇ ಸಭಾ ಸ್ಥಳಗಳಲ್ಲಿ ತೆರೆಯಲಾಗುವ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಾಗರಿಕರು ತಮ್ಮ ಅಹವಾಲು /ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಆಂದೋಲನದ ಸದುಪಯೋಗ ಪಡೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.ಪ್ರಜಾಸೇವೆ ಆಂದೋಲನ ಸಭೆಯನ್ನು ಸೆಪ್ಟೆಂಬರ್ ೫ರಂದು ತುಮಕೂರು ಉಪವಿಭಾಗ ವ್ಯಾಪ್ತಿ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಅಂಬೇಡ್ಕರ್ ಭವನದಲ್ಲಿ, ಕುಣಿಗಲ್ ತಾಲೂಕು - ಹುತ್ರಿದುರ್ಗ ಹೋಬಳಿ ಸಂತೇಪೇಟೆ ಗ್ರಾಮ ಪಂಚಾಯತಿ ಪಕ್ಕದ ಆವರಣ, ಗುಬ್ಬಿ ಪಟ್ಟಣ ಡಾ: ಗುಬ್ಬಿ ವೀರಣ್ಣ ರಂಗಮಂದಿರ; ಮಧುಗಿರಿ ಉಪವಿಭಾಗ ವ್ಯಾಪ್ತಿ - ಮಧುಗಿರಿ ತಾಲೂಕು ಕಚೇರಿ ಆವರಣ, ಶಿರಾ ತಾಲೂಕು ಗೌಡಗೆರೆ ಗ್ರಾಮ ಪಂಚಾಯತಿ ಆವರಣ, ಕೊರಟಗೆರೆ ತಾಲೂಕು - ಹೊಳವನಹಳ್ಳಿ ಹೋಬಳಿ ಸಮುದಾಯ ಭವನ, ಪಾವಗಡ ತಾಲೂಕು - ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯತಿ ಆವರಣ; ತಿಪಟೂರು ಉಪವಿಭಾಗ - ತಿಪಟೂರು ತಾಲೂಕು ಹೊನ್ನವಳ್ಳಿ ಹೋಬಳಿ ಹುಡಿಸಲಮ್ಮ ದೇವಸ್ಥಾನ ಆವರಣ, ಚಿಕ್ಕನಾಯಕನಹಳ್ಳಿ ತಾಲೂಕು - ಕಂದಿಕೆರೆ ಗ್ರಾಮ ಪಂಚಾಯತಿ ಆವರಣ ಹಾಗೂ ತುರುವೇಕೆರೆ ತಾಲೂಕು - ಮಾಯಸಂದ್ರ ಹೋಬಳಿ ರಂಗಮಂದಿರ ಸಭಾಂಗಣದಲ್ಲಿ ನಡೆಸಲಾಗುವುದು.