ಕನ್ನಡಪ್ರಭ ವಾರ್ತೆ ರಾಮನಗರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಖರೀದಿ ಕೇಂದ್ರವನ್ನು ಆರಂಭಿಸಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೋಂದಾಯಿತ ರೈತರಿಂದ ರಾಗಿ ಖರೀದಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ, ಖರೀದಿ ಕೇಂದ್ರದ ಅಧಿಕಾರಿಗಳು ಮತ್ತು ಅಸ್ಸೇಯರ್ಗಳು ಉತ್ತಮ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಬೇಕು. ಕಳಪೆ ಗುಣಮಟ್ಟದ ರಾಗಿಯನ್ನು ಖರೀದಿಸಿದರೆ ಕಾನೂನು ರೀತ್ಯ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.ರಾಗಿ ಖರೀದಿ ಕೆಂದ್ರಗಳಲ್ಲಿ ದಲ್ಲಾಳಿಗಳಿಗೆ ಅವಕಾಶವಿರುವುದಿಲ್ಲ. ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ಗಳಂತೆ ಗರಿಷ್ಟ 20 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುವುದು, ರೈತರ ಯಾವುದೇ ದೂರುಗಳು, ಸಮಸ್ಯೆಗಳು ಇದ್ದರೆ ಆಯಾ ತಾಲ್ಲೂಕಿನ ತಹಶೀಲ್ದಾರ್, ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.ಖರೀದಿ ಕೇಂದ್ರಗಳಲ್ಲಿ ರೈತರನ್ನು ಹೊರತುಪಡಿಸಿ ಇತರೆ ಜನ ಅಥವಾ ದಲ್ಲಾಳಿ ಅಥವಾ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ ಒಂದು ವೇಳೆ ಕಂಡು ಬಂದಲ್ಲಿ ಅವರ ವಿರುದ್ದ ಕಾನೂನು ರೀತಿಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಯಶವಂತ್ ವಿ.ಗುರುಕರ್ ಎಚ್ಚರಿಕೆ ನೀಡಿದರು.ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಂಬಿಕಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ರಮ್ಯಾ ಮತ್ತಿತರರು ಉಪಸ್ಥಿತರಿದ್ದರು.ಖರೀದಿ ಕೇಂದ್ರಗಳ ವಿವರ ಇಂತಿದೆ
ಚನ್ನಪಟ್ಟಣ ತಾಲೂಕು: ಕೆ.ಎಫ್.ಸಿ.ಎಸ್.ಸಿ ಚನ್ನಪಟ್ಟಣ ಸಗಟು ಮಳಿಗೆ, ಜಾನಪದ ಲೋಕದ ಎದುರು, ಬಿ.ಎಂ.ರಸ್ತೆ, ಚನ್ನಪಟ್ಟಣ. ಕನಕಪುರ ತಾಲೂಕು: ಎ.ಪಿ.ಎಂ.ಸಿ.ಗೋದಾಮು, ಕನಕಪುರ ಬೈಪಾಸ್ ರಸ್ತೆ, ಕನಕಪುರ.ಹಾರೋಹಳ್ಳಿ ತಾಲೂಕು: ವರದಯ್ಯ ಗೋದಾಮು, ನಂ.16 ಮಾರಸಂದ್ರ, ಹಾರೋಹಳ್ಳಿ ತಾಲೂಕು.ಮಾಗಡಿ ತಾಲೂಕು: ಜವಾಹರ್ ಅಹಮದ್ ಗೋದಾಮು, ನಂ.127/4, 127/5, ಬಸ್ ನಿಲ್ದಾಣದ ಹತ್ತಿರ, ಸೋಲೂರು, ಮಾಗಡಿ ತಾಲೂಕು.ರಾಮನಗರ ತಾಲೂಕು: ಕೆ.ಎಫ್.ಸಿ.ಎಸ್.ಸಿ.ರಾಮನಗರ ಸಗಟು ಮಳಿಗೆ-ಜಾನಪದ ಲೋಕದ ಎದುರು, ಬಿ.ಎಂ.ರಸ್ತೆ, ರಾಮನಗರ.