ಬೆಳಗಾವಿ: ಜಾನುವಾರಗಳಿಗಾಗಿ ಖರೀದಿ ಮಾಡಿ ಸಂಗ್ರಹಿಸಿಟ್ಟಿದ್ದ ಮೇವಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿರುವ ಘಟನೆ ಶನಿವಾರ ಬೆಳಗಾವಿ ಗಾಂಧಿನಗರದ ಲಕ್ಷ್ಮೀ ಗಲ್ಲಿಯಲ್ಲಿ ನಡೆದಿದೆ. ರೈತ ಪ್ರಕಾಶ ಸಂಪಗಾಂವಿಗೆ ಸೇರಿದ ಮೇವಿನ ಬಣವಿಗೆ ಬೆಂಕಿ ಹೊತ್ತಿಕೊಂಡಿದೆ. ಬರಗಾಲ ಹಿನ್ನೆಲೆಯಲ್ಲಿ ಸುಮಾರು ₹70 ಸಾವಿರ ಹಣಕೊಟ್ಟು ಮೇವು ಖರೀದಿ ಮಾಡಿ ಸಂಗ್ರಹ ಮಾಡಿಕೊಂಡಿದ್ದರು. ಶನಿವಾರ ಮಧ್ಯಾಹ್ನದ ಹೊತ್ತಿಗೆ ಮೇವಿನ ಬಣವಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಮೇವಿನ ಬಣವಿ ಸುಟ್ಟಿರುವುದರಿಂದ ಜಾನುವಾರಗಳ ಮೇವಿನ ಕುರಿತು ರೈತ ಕಂಗಾಲಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಿದರು. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.