ಸಹಕಾರಿ ಭಾರತಿಯಿಂದ ಸಹಕಾರಿ ಕ್ಷೇತ್ರದ ಶುದ್ಧೀಕರಣ: ಸುರೇಶ್ ಪ್ರಭು

KannadaprabhaNewsNetwork | Published : Aug 12, 2024 1:34 AM

ಸಾರಾಂಶ

ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸತ್ಕಾರಕೂಟ ನಡೆಯಿತು. ರಾಷ್ಟ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಸುರೇಶ್ ಪಿ. ಪ್ರಭು ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸಹಕಾರ ಭಾರತಿಯು ರಾಷ್ಟ್ರೀಯ ಮಟ್ಟದಲ್ಲಿ ಸಹಕಾರಿ ಕ್ಷೇತ್ರದ ಶುದ್ಧೀಕರಣ, ವೃದ್ಧೀಕರಣ ಮತ್ತು ಆಧುನೀಕರಣಕ್ಕೆ ಶ್ರಮಿಸುತ್ತಿರುವ ಏಕೈಕ ಸರ್ಕಾರೇತರ ಸಂಘಟನೆ ಎಂದು ರಾಷ್ಟ್ರೀಯ ಸಹಕಾರಿ ನೀತಿ ಆಯೋಗದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಸುರೇಶ್ ಪಿ. ಪ್ರಭು ಹೇಳಿದ್ದಾರೆ.

ಅವರು ಭಾನುವಾರ ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ಸತ್ಕಾರಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಕೂಡಾ ಬ್ಯಾಂಕಿಂಗ್, ಶಿಕ್ಷಣ ಮತ್ತು ಆರೋಗ್ಯ ರಂಗಗಳ ಉತ್ಕರ್ಷದ ಬಳಿಕ ಇದೀಗ ಸಹಕಾರಿ ರಂಗ ಕೂಡಾ ಗಮನಾರ್ಹವಾಗಿ ಬೆಳೆಯುತ್ತಿರುವುದು ಅಭಿನಂದನೀಯ ಎಂದು ಸುರೇಶ್ ಪ್ರಭು ಸಂತಸ ವ್ಯಕ್ತಪಡಿಸಿದರು.

ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅವರು ಸುರೇಶ್ ಪಿ. ಪ್ರಭು ಮತ್ತು ಅವರ ಪತ್ನಿ, ವಿಶ್ರಾಂತ ಪತ್ರಕರ್ತೆ ಉಮಾ ಸುರೇಶ್ ಪ್ರಭು ಅವರನ್ನು ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ, ಸಹಕಾರ ರತ್ನ ಯಶ್ ಪಾಲ್ ಸುವರ್ಣ, ಕೇಂದ್ರದಲ್ಲಿ ನೂತನ ಸಹಕಾರಿ ಸಚಿವಾಲಯ ರಚನೆಯಾದ ಬಳಿಕ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಈ ನಿಟ್ಟಿನಲ್ಲಿ ಸಹಕಾರ ಭಾರತಿ ಇನ್ನಷ್ಟು ಹೆಚ್ಚಿನ ಆಸಕ್ತಿಯಿಂದ ಸಂಘಟನಾತ್ಮಕವಾಗಿ ಗ್ರಾಮಮಟ್ಟದ ಸಹಕಾರಿಗಳನ್ನು ತಲುಪಲು ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಠದ ಸಹ ಸಂಚಾಲಕರಾದ ಮಂಜುನಾಥ ಎಸ್.ಕೆ. ಅವರು ನೂತನ ಸಹಕಾರಿ ನೀತಿಯಲ್ಲಿ ಹಾಲು ಉತ್ಪಾದಕ ಸಂಘಗಳಿಗೆ ವಿವಿದೋದ್ದೇಶ ಹೈನುಗಾರಿಕಾ ಸಂಘಗಳಾಗಿ ಪರಿವರ್ತಿಸಲು ಅವಕಾಶ , ಕೇಂದ್ರ ಸರ್ಕಾರದಿಂದ ರೈತರ ಖಾತೆಗಳಿಗೆ ನೇರವಾಗಿ ಪ್ರತಿ ಲೀಟರಿಗೆ 5 ರು. ಪ್ರೋತ್ಸಾಹ ಧನ, ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಸಹಕಾರಿ ನ್ಯಾಯಾಲಯಗಳ ಸ್ಥಾಪನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ಪ್ರತ್ಯೇಕ ರೈತ ಜನೋಪಯೋಗಿ ಕೇಂದ್ರಗಳ ಸ್ಥಾಪನೆ ಮೊದಲಾದ ಬೇಡಿಕೆಗಳ ಮನವಿ ಮಂಡಿಸಿದರು.

ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ರಘುವೀರ ಶೆಣೈ ವಂದಿಸಿದರು.

ಉಡುಪಿ ಜಿಲ್ಲಾ ಸಹಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಜಿಲ್ಲಾ ಸಹಕಾರ ಭಾರತಿ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

------

ಏಕರೂಪಿ ತಂತ್ರಜ್ಞಾನಕ್ಕೆ ಶಿಫಾರಸು

ದೇಶದಲ್ಲಿ ಜಾರಿಗೆ ತರಲುದ್ದೇಶಿಸಿರುವ ರಾಷ್ಟ್ರೀಯ ಸಹಕಾರಿ ನೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಏಕರೂಪಿ ತಂತ್ರಜ್ಞಾನದ ಅಳವಡಿಕೆಗೆ ಶಿಫಾರಸು ಮಾಡಲಾಗಿದೆ. ಭವಿಷ್ಯದ ಭಾರತದಲ್ಲಿ ಸಹಕಾರಿ ಕ್ಷೇತ್ರವು ಆರ್ಥಿಕ, ವಾಣಿಜ್ಯಿಕ, ಔದ್ಯಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಸಹಕಾರಿ ಕ್ಷೇತ್ರದಲ್ಲಿ ದೇಶವ್ಯಾಪಿ ಏಕರೂಪಿ ತಂತ್ರಜ್ಞಾನ ಜಾರಿಗೆ ತಂದು ಭವಿಷ್ಯದ ಆರ್ಥಿಕತೆಯ ನಾಯಕತ್ವ ವಹಿಸಲು ಸಹಕಾರಿ ಕ್ಷೇತ್ರವನ್ನು ಸಜ್ಜುಗೊಳಿಸಲಾಗುವುದು ಎಂದು ಸುರೇಶ್ ಪ್ರಭು ಹೇಳಿದರು.

Share this article