ಚಿಕ್ಕಬಳ್ಳಾಪುರ : ವೈದ್ಯ, ವಿದ್ಯೆ ಮತ್ತು ಪೌಷ್ಟಿಕತೆಗಳು ಸಮಾಜಕ್ಕೆ ಬೇಕಾದ ಮೂಲಭೂತ ಅಗತ್ಯಗಳಾಗಿವೆ. ಇವುಗಳನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಲೋಕಕ್ಕೆ ಉಚಿತ ರೂಪದಲ್ಲಿ ಒದಗಿಸುತ್ತಿದ್ದಾರೆ. ವಾಸ್ತವವಾಗಿ ಸರ್ಕಾರ ಮಾಡಬೇಕಾದ ಕಾರ್ಯವನ್ನು ತಾವೇ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ತಿಳಿಸಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಇನ್ಫೋಸಿಸ್ ಪ್ರತಿಷ್ಠಾನವು ಕೊಡಮಾಡಿದ ಎಂಆರ್ ಐ ಉಪಕರಣ ಮತ್ತು ಅತ್ಯುನ್ನತ ಸೇವಾ ಸೌಲಭ್ಯಗಳ ವಿಸ್ತರಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಗೊಂದು ವೈದ್ಯಕೀಯ ಕಾಲೇಜು
ಸರ್ಕಾರದ ವತಿಯಿಂದಲೂ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಮತ್ತು ಅತ್ಯಾಧುನಿಕ ಸೇವಾ ಸೌಲಭ್ಯದ ಆಸ್ಪತ್ರೆಗಳನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸುವ ಉದ್ದೇಶವಿದೆ. ದುಬಾರಿ ವೆಚ್ಚದ ವೈದ್ಯಕೀಯ ಸೇವಾ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡುವ ಸದಾಲೋಚನೆ ಸರ್ಕಾರದ ಮುಂದಿದ್ದು ಅದರ ಕಾರ್ಯ ಸಾಧನೆಗೆ ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಸಹಕಾರ ಕ್ಷೇತ್ರದ ಪಾಲ್ಗೊಳ್ಳುವಿಕೆಯು ದೊರೆತರೆ ಕಾರ್ಯಸಾಧ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಭವಿಷ್ಯತ್ತಿಗೆ ಸಂವೇದಿ
ಇನ್ಫೋಸಿಸ್ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಕುಮಾರ್ ದಾರೇಶ್ವರ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನಾವು ಮಾಡುವ ಯಾವುದೇ ಉಪಕ್ರಮಗಳು ಸದೃಢವಾದ ಭವಿಷ್ಯತ್ತಿಗೆ ಸಂವೇದಿಯಾಗುತ್ತವೆ. ಸಮಾಜಕ್ಕೆ ಗಣನೀಯವಾದ ಸೇವೆ ಸಲ್ಲಿಸುತ್ತಿರುವ ಸದ್ಗುರುಗಳ ಸೇವಾ ಯಜ್ಞದ ಯಶಸ್ಸಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಾಗುವುದು ಎಂದು ತಿಳಿಸಿದರು.
ಸದ್ಗುರು ಶ್ರೀ ಮಧುಸೂಧನ ಸಾಯಿ ಮಾತನಾಡಿ, ಎಲ್ಲರಿಗೂ ಒಳಿತಾಗಲಿ ಎನ್ನುವುದು ನಮ್ಮ ಸಂಸ್ಕೃತಿಯ ತಿರುಳು. ಆದರೆ ಇದು ವ್ಯಕ್ತಿಗತವಾಗಿ ಕಷ್ಟ ಸಾಧ್ಯವಾಗಿದೆ. ಆದುದರಿಂದ ಇದರ ಕಾರ್ಯಸಾಧ್ಯ ಸಿದ್ಧಿಗೆ ಸಂಸ್ಥೆ, ಸಮಾಜ ಮತ್ತು ಸರ್ಕಾರದ ಸಮನ್ವಯ ಅತ್ಯಗತ್ಯವಿದೆ. ಈ ಮೂರು ಘಟಕಗಳು ಒಂದಾಗಿ ಇರುವುದರಿಂದ ಸಮಾಜಕ್ಕೆ ಅಗತ್ಯವಾಗಿ ಬೇಕಾದ ಸೇವಾ ಕಾರ್ಯಗಳು ದೊರೆಯುತ್ತಿವೆ. ಇಂದು ತಾಂತ್ರಿಕತೆಯು ಬಹಳ ಮುಂದುವರಿದಿದ್ದು ಅದರ ಸಹಕಾರದಿಂದ ಎಲ್ಲವನ್ನು ಸಾಧಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಮೂಹಗಳ ಪ್ರಧಾನ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ, ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎ.ಆರ್.ರಘುಪತಿ, ಶಿಕ್ಷಣ ಮತ್ತು ಗುಣಮಟ್ಟ ಸುಧಾರಣಾ ವಿಭಾಗದ ನಿರ್ದೇಶಕ ಡಾ. ಸತೀಶ್ ಬಾಬು, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ಭಕ್ತರು ಇದ್ದರು.