ಕನ್ನಡಪ್ರಭ ವಾರ್ತೆ ಖಾನಾಪುರ
ಕರ್ನಾಟಕ-ಗೋವಾ ಗಡಿಯಲ್ಲಿ ಶನಿವಾರ ಇಡೀ ದಿನ ಮಳೆಯ ಅಬ್ಬರ ಮುಂದುವರಿದ ಪರಿಣಾಮ ಮಲಪ್ರಭಾ, ಮಹದಾಯಿ ನದಿಗಳು ಮತ್ತು ಕಳಸಾ-ಭಂಡೂರಿ, ಅಲಾತ್ರಿ, ಮಂಗೇತ್ರಿ, ಪಣಸೂರಿ, ಕೋಟ್ನಿ, ಬೈಲ್, ಕುಂಬಾರ, ನಿಟ್ಟೂರ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಗುಂಜಿ ಮತ್ತು ಜಾಂಬೋಟಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಗೋಲಿಹಳ್ಳಿ, ಘಷ್ಟೊಳ್ಳಿ, ಕಸಮಳಗಿ, ಕರಂಬಳ, ನೀಲಾವಡೆ, ಕುಸಮಳಿ, ಮಂಗೇನಕೊಪ್ಪ, ಹಿಂಡಲಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಕುಸಿದ ವರದಿಯಾಗಿದೆ.
ಜಾಂಬೋಟಿ ಮತ್ತು ಗುಂಜಿ ಹೋಬಳಿ ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಇದುವರೆಗೂ ಯಾವುದೇ ಅವಘಡ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಕಚೇರಿಯ ಮೂಲಗಳು ಸ್ಪಷ್ಟಪಡಿಸಿವೆ.ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಶನಿವಾರ ಕಣಕುಂಬಿಯಲ್ಲಿ 13.2 ಸೆಂ.ಮೀ, ಖಾನಾಪುರ ಪಟ್ಟಣ ಹಾಗೂ ಜಾಂಬೋಟಿಯಲ್ಲಿ 3 ಸೆಂ.ಮೀ, ನಾಗರಗಾಳಿ, ಗುಂಜಿ, ಅಸೋಗಾ, ಬೀಡಿ, ಕಕ್ಕೇರಿಗಳಲ್ಲಿ ಸರಾಸರಿ 4 ಸೆಂ.ಮೀ ಮತ್ತು ಲೋಂಡಾದಲ್ಲಿ 6 ಸೆಂ.ಮೀ ಮಳೆಯಾಗಿದೆ.