ಪುಟ್ಟಣ್ಣಯ್ಯ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದವರು: ಪ್ರೊ. ಪ್ರತಾಪ್ ಲಿಂಗಯ್ಯ

KannadaprabhaNewsNetwork |  
Published : Jan 10, 2024, 01:45 AM IST
9ಕೆಎಂಎನ್ ಡಿ22ಮಂಡ್ಯ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಕೆ.ಎಸ್. ಪುಟ್ಟಣ್ಣಯ್ಯರಿಗೆ ರಂಗ ನಮನ, ನಾಟಕಗಳ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕೆ.ಎಸ್ .ಪುಟ್ಟಣ್ಣಯ್ಯನವರು ಶಾಸಕರಾಗಿದ್ದ ವೇಳೆ ವಿಧಾನಸಭೆ ಅಧಿವೇಶನಗಳಲ್ಲಿ ನಿರ್ಗಳವಾಗಿ ಮಾತನಾಡುವ ಮೂಲಕ ಹಲವು ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಮನ ಸೆಳೆಯುತ್ತಿದ್ದರು. ವೈಜ್ಞಾನಿಕವಾಗಿ ಆಲೋಚನೆ ಮಾಡುತ್ತಿದ್ದರು. ಕ್ರೀಡೆ, ನಾಟಕ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು

ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ದಿ.ಕೆ.ಎಸ್.ಪುಟ್ಟಣ್ಣಯ್ಯನವರಿಗೆ ರಂಗನಮನ । ನಾಟಕಗಳ ಪ್ರದರ್ಶನ

ಕನ್ನಡಪ್ರಭ ವಾರ್ತೆ ಮಂಡ್ಯ

ರೈತ ನಾಯಕ ದಿ.ಕೆ.ಎಸ್ .ಪುಟ್ಟಣ್ಣಯ್ಯ ರೈತ ಪರ ಹೋರಾಟಗಾರರು ಮಾತ್ರವಲ್ಲದೇ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರೊ. ಪ್ರತಾಪ್ ಲಿಂಗಯ್ಯ ತಿಳಿಸಿದರು.

ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಮಂಗಲದ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಹಾಗೂ ನೀನಾಸಂ ತಿರುಗಾಟ ನಾಟಕಗಳು ವತಿಯಿಂದ ನಡೆದ ಕೆ.ಎಸ್. ಪುಟ್ಟಣ್ಣಯ್ಯರಿಗೆ ರಂಗ ನಮನ, ನಾಟಕಗಳ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಕೆ.ಎಸ್ .ಪುಟ್ಟಣ್ಣಯ್ಯನವರು ಶಾಸಕರಾಗಿದ್ದ ವೇಳೆ ವಿಧಾನಸಭೆ ಅಧಿವೇಶನಗಳಲ್ಲಿ ನಿರ್ಗಳವಾಗಿ ಮಾತನಾಡುವ ಮೂಲಕ ಹಲವು ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಮನ ಸೆಳೆಯುತ್ತಿದ್ದರು. ವೈಜ್ಞಾನಿಕವಾಗಿ ಆಲೋಚನೆ ಮಾಡುತ್ತಿದ್ದರು. ಕ್ರೀಡೆ, ನಾಟಕ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದರು.

ಕಳೆದ 25 ವರ್ಷಗಳಿಗಿಂತ ಹೆಚ್ಚು ಕಾಲ ಸಮಾಜಮುಖಿಯಾಗಿ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ನೀನಾಸಂ ನಾಟಕಗಳನ್ನು ಆಯೋಜನೆ ಮಾಡುತ್ತಿದ್ದರು ಎಂದು ಹೇಳಿದರು.

ಈ ವೇಳೆ ಅವರು ನಾಟಕಗಳ ಬಗ್ಗೆ ಮಾತನಾಡಿ, ಸಮಾಜದ ಹಲವಾರು ಸಮಸ್ಯೆಗಳಿಗೆ ನಾಟಕದ ಮೂಲಕ ಪರಿಹಾರ ದೊರಕುತ್ತದೆ. ಸಾವಿರಕ್ಕೂ ಹೆಚ್ಚು ನಾಟಕಗಳನ್ನು ನೀನಾಸಂ ಸಂಸ್ಥೆ ನಿರ್ವಹಣೆ ಮಾಡುತ್ತಾ ಬರುತ್ತಿದೆ. ಹಲವಾರು ಕಲಾವಿದರಿಗೆ ನಿರ್ಮಾಪಕರಾಗಿ, ರಂಗಭೂಮಿ ಕಲಾವಿದರನ್ನು ನೀನಾಸಂ ಸಂಸ್ಥೆ ತಯಾರು ಮಾಡಿದೆ. ಈ ಸಂಸ್ಥೆಯಲ್ಲಿ ಅಭಿನಯಿಸಿದ ಕಲಾವಿದರು ದೊಡ್ಡ ವ್ಯಕ್ತಿಗಳಾಗಿ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಕಾರ್ಯಪಾಲಕ ಅಭಿಯಂತರ ಹೊನ್ನರಾಜು ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರು ಸಾಮಾನ್ಯ ಪುಸ್ತಕವಲ್ಲ. ಅವರೊಂದು ಮಹಾನ್ ಗ್ರಂಥ. ಅದ್ಬುತ ಶಕ್ತಿಯಾಗಿರುವ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು ಎಂದು ಬಣ್ಣಿಸಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕೆ.ಎಸ್ .ಪುಟ್ಟಣ್ಣಯ್ಯ ಕಲಾವಿದರಾಗಿ, ಕ್ರೀಡಾಪಟುವಾಗಿ, ಉತ್ತಮ ಭಾಷಣಕಾರರಾಗಿದ್ದರು. ಅವರಲ್ಲಿ ಹಾಸ್ಯ ಮನೆ ಮಾತಾಗಿತು. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಟಕ ಪ್ರದರ್ಶನ ನೀಡುವವರಿಗೆ 25 ಸಾವಿರ ರು. ಪ್ರೋತ್ಸಾಹ ಧನ ಸಿಗುತ್ತಿರುವುದು ಪುಟ್ಟಣ್ಣಯ್ಯನವರ ಶ್ರಮದಿಂದ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಂಗಲ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ,ಯೋಗೀಶ್, ಸಾಮಾಜಿಕ ಕಾರ್ಯಕರ್ತ ಸಿ.ಎಂ.ದ್ಯಾವಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು. ನಂತರ ಚಂದ್ರಶೇಖರ್ ಕಂಬಾರ ರಚನೆಯ, ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನದ ನೀನಾಸಂ ಶಿಸ್ತಿನ ಹುಲಿಯ ನೆರಳು ನಾಟಕ ಜನಮನ ಸೂರೆಗೊಂಡಿತು.

--------------

9ಕೆಎಂಎನ್ ಡಿ22

ಮಂಡ್ಯ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆದ ಕೆ.ಎಸ್. ಪುಟ್ಟಣ್ಣಯ್ಯರಿಗೆ ರಂಗ ನಮನ ಹಾಗೂ ನಾಟಕಗಳ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ