ಪುತ್ತೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 7ರಂದು ರೈತ ಸಂಘಗಳ ಒಕ್ಕೂಟ ಪ್ರತಿಭಟನೆ

KannadaprabhaNewsNetwork |  
Published : Mar 03, 2024, 01:31 AM IST
ಫೋಟೋ: ೨ಪಿಟಿಆರ್-ಪ್ರೆಸ್ಸುದ್ದಿಗೋಷ್ಠಿಯಲ್ಲಿ ಸನ್ನಿ ಡಿ'ಸೋಜ ಮಾತನಾಡಿದರು | Kannada Prabha

ಸಾರಾಂಶ

ವಿವಿಧ ಬೇಡಿಕೆಯನ್ನು ಇಟ್ಟುಕೊಂಡು ಮಾ.7 ರಂದು ಮಧ್ಯಾಹ್ನ 2ರಿಂದ ಬಿಸಿರೋಡಿನಿಂದ ಟ್ರ‍್ಯಾಕ್ಟರ್ ಹಾಗೂ ವಾಹನ ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಯಂಕಾಲ 4ಕ್ಕೆ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಿಳಿಸಿದರು.

ಕನ್ನಡಪ್ರಭವಾರ್ತೆ ಪುತ್ತೂರುಅಡಕೆ ಆಮದಿನಿಂದಾಗಿ ಅಡಕೆ ಬೆಲೆ ಕುಸಿತಗೊಂಡಿದ್ದು, ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಕೆ ಆಮದು ನಿಷೇಧಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ. 7ರಂದು ಬಿ.ಸಿ.ರೋಡ್‌ನಿಂದ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ತನಕ ಟ್ರ್ಯಾಕ್ಟರ್‌ ಹಾಗೂ ವಾಹನ ಜಾಥಾ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ರೈತ ಸಂಘಗಳ ಒಕ್ಕೂಟದ ಸಂಯೋಜಕ ಸನ್ನಿ ಡಿ''''''''ಸೋಜ ತಿಳಿಸಿದ್ದಾರೆ.

ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಹಾಗೂ ತೆಂಗಿನ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕಾರ್ಪೊರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಸರ್ಕಾರ ಸರ್ಕಾರದ ತಪ್ಪು ನೀತಿಯಿಂದಾಗಿ ರೈತರು ಸಾಲಗಾರರಾಗಿದ್ದಾರೆ. ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ನಡೆಸುವ ರೈತರ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಧಾರ್ಮಿಕ ಸಂಘರ್ಷದಲ್ಲಿ ಮೃತಪಟ್ಟವರಿಗೆ ಸರ್ಕಾರವು ನೀಡಿದ 25 ಲಕ್ಷ ಸಹಾಯಧನ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೂ ನೀಡಬೇಕು. ಎಲೆ ಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗ ಬಾಧಿತ ರೈತರಿಗೆ ಪ್ರತಿ ಎಕರೆಗೆ 25, 000 ಸಹಾಯಧನವನ್ನು ನೀಡಬೇಕು. ಬಂಟ್ವಾಳದ ಮೂಲಕ ಹಾದುಹೋಗುವ 400 ಕೆ ವಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕು ಎಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟು ಈ ಪ್ರತಿಭಟನೆ ನಡೆಯಲಿದೆ.

ಜಿಲ್ಲೆಗೆ ಆರ್ಥಿಕ ಬೆನ್ನೆಲುಬು ಆಗಿರುವ ಅಡಕೆ ಆಮದು ಪ್ರಕ್ರಿಯೆಯಿಂದ ಇಲ್ಲಿನ ಅಡಕೆಯ ಮೌಲ್ಯ ಕುಸಿತವಾಗಿದೆ, ಅಡಕೆ ಉತ್ಪಾದನಾ ವೆಚ್ಚ ಮೂರು ಪಟ್ಟು ಹೆಚ್ಚಾಗಿದ್ದು, ಬೆಲೆ ನಿರಂತರ ಕುಸಿತವಾಗುತ್ತಿದೆ. ಎಲೆ ಚುಕ್ಕಿ ಹಾಗೂ ಹಳದಿ ಎಲೆ ರೋಗದಿಂದ ತತ್ತರಿಸಿ ಜಿಲ್ಲೆಯ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೈತರಿಗೆ 25 ಲಕ್ಷ ಪರಿಹಾರವನ್ನು ಸರ್ಕಾರ ನೀಡಬೇಕು. ಅಡಕೆಯನ್ನು ಆಮದು ಮಾಡಿ ಮಿಶ್ರಣ ಮಾಡುವ ಮೂಲಕ, ದಕ್ಷಿಣ ಕನ್ನಡದ ಹೆಸರು ಕೆಡಿಸುವ ಕಾರ್ಯವಾಗುತ್ತಿದೆ. ಅಡಕೆ ಮಾರುಕಟ್ಟೆಯನ್ನು ಹಾಳು ಮಾಡುವ ನಿಟ್ಟಿನಲ್ಲಿ ವಿಮಾನಗಳ ಮೂಲಕ ತರಿಸಿಕೊಂಡು ಆತಂಕ ಸೃಷ್ಟಿಸುವ ಕಾರ್ಯವಾಗುತ್ತಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದ ಅಡಕೆ ಯಾರಿಗೆ ಸೇರಿದ್ದು, ಎಲ್ಲಿಗೆ ಹೋಗುವುದು ಎಂಬ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಬ್ರಿಟಿಷರು ಕಾರ್ಖಾನೆಗಳಿಗೆ ಕಡಿಮೆ ಬೆಲೆಯಲ್ಲಿ ಕಚ್ಚಾ ವಸ್ತುಗಳು ಬೇಕೆಂದು ಕೃಷಿ ಉತ್ಪನ್ನಗಳ ಬೆಲೆಯನ್ನು ಹತೋಟಿಯಲ್ಲಿಟ್ಟಿದ್ದಂತೆ, ಸರ್ಕಾರಗಳು ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ರೈತರ ಹೊಟ್ಟೆಗೆ ಹೊಡೆಯುತ್ತಿದ್ದರು. ರೈತರ ಫಲವತ್ತಾದ ಭೂಮಿಯನ್ನು ಹಾಳು ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ರೈತರ ಬಗ್ಗೆ ಕಳಕಳಿ ಇರುತ್ತಿದ್ದರೆ, ಇಂತಹ ದು:ಸ್ಥಿತಿ ಬರುತ್ತಿರಲಿಲ್ಲ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳು ಕಳೆದರೂ, ಜಿಲ್ಲಾಧಿಕಾರಿಯವರು ರೈತರ ಸಭೆ ನಡೆಸಿಲ್ಲ. ವಿವಿಧ ಬೇಡಿಕೆಯನ್ನು ಇಟ್ಟುಕೊಂಡು ಮಾ.7 ರಂದು ಮಧ್ಯಾಹ್ನ 2ರಿಂದ ಬಿಸಿರೋಡಿನಿಂದ ಟ್ರ‍್ಯಾಕ್ಟರ್ ಹಾಗೂ ವಾಹನ ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಯಂಕಾಲ 4ಕ್ಕೆ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ರೈತ ಸಂಘಗಳ ಒಕ್ಕೂಟದ ಸಮಿತಿ ಸದಸ್ಯರಾದ ಓಸ್ವಾಲ್ಡ್ಸ್ ಫೆರ್ನಾಂಡಿಸ್, ಅಮರನಾಥ ಆಳ್ವ, ಕಲೀಲ್ ಇಬ್ರಾಹಿಂ, ಭರತ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!