ಪುತ್ತೂರು: ಶನಿಪೂಜೆಯು ಭಯದ ಜೊತೆಗೆ ನಿರ್ಭಯದಿಂದ ಕೂಡಿದ್ದು, ಧರ್ಮ ಭದ್ರವಾಗಿಸಲು ಶನಿಯ ಪಾಠ ಅನುಭವಿಸುವುದು ಮುಖ್ಯವಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ತಹಸೀಲ್ದಾರ್ ಅಜಿತ್ ರೈ ಸೊರಕೆ ಮಾತನಾಡಿ, ಸೇವಾ ಮನೋಭಾವದಲ್ಲಿರುವ ಭಗತ್ಸಿಂಗ್ ಯುವಶಕ್ತಿಯ ಕಾರ್ಯಕ್ರಮ ಉಪ್ಪಳಿಗೆಗೆ ಸೀಮಿತವಾಗದೆ ಪುತ್ತೂರು ತಾಲೂಕಿಗೆ ಪಸರಿಸಬೇಕು. ಧರ್ಮಸಭೆಯ ರಕ್ಷಣಾ ಸಭೆಯಾಬೇಕು. ಸನಾತನ ಹಿಂದೂ ಧರ್ಮರಕ್ಷಣೆಯ ಕಾರ್ಯವಾಗಬೇಕು. ಉತ್ಸಾಹಿ ಯುವಕರ ಸೇವಾ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಕೇಂದ್ರ ಜಾರಿ ನಿರ್ದೇಶನಾಲಯದ ವಕೀಲ ರಾಜಾರಾಮ ಸೂರ್ಯಂಬೈಲು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡಿದ್ದ ದೇಶದ, ದೇವಸ್ಥಾನಗಳ ಮೇಲಿನ ತೀವ್ರದಾಳಿ, ಷಡ್ಯಂತ್ರ ಇಂದಿಗೂ ಮುಂದುವರಿದಿದ್ದು ಶಬರಿಮಲೆ, ಧರ್ಮಸ್ಥಳ ಕ್ಷೇತ್ರಗಳ ಮೇಲೆ ಮುಂದುವರಿಯುತ್ತಿದೆ ಎಂದು ಹೇಳಿದರು.ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ ಸಿನಿಮಾ, ರಾಜಕಾರಣಿ, ಕ್ರಿಕೆಟ್ ಆಟಗಾರರ ಅಭಿಮಾನಿಗಳ ಸಂಘ ರಚಿಸುವುದು ಸಾಮಾನ್ಯ. ಆದರೆ ಉಪ್ಪಳಿಗೆಯಲ್ಲಿ ವಿಶೇಷ ಭಗತ್ಸಿಂಗ್ನ ಅಭಿಮಾನಿಗಳ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು ಭಾರತ ಬೆಳೆಯುತ್ತಿರುವುದಕ್ಕೆ ಜೀವಂತ ಸಾಕ್ಷಿ. ಸಂಘಟನೆಯ ಮೂಲಕ ಭಾರತ ಮತ್ತೊಮ್ಮೆ ವಿಶ್ವ ಶಾಂತಿಗೆ ಕಾರಣವಾಗುತ್ತಿದೆ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕರ್ನಾಟಕ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್ ಬೌದ್ಧಿಕ್ ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದಲ್ಲಿ ಹಿಂದುಗಳ ಸಂಘಟನೆಗಾಗಿ ನೂರು ವರ್ಷ ಕೆಲಸ ಮಾಡಿದೆ. ಜಾತಿ, ಮತ ಪಂಥ ಬೇದ ಬಿಟ್ಟು ಹಿಂದುತ್ವದ ಆಧಾರದಲ್ಲಿ ಜನರನ್ನು ಒಂದು ಮಾಡುವ ಕೆಲಸ ಮಾಡಿದೆ. ನೂರ ಒಂದನೇ ವರ್ಷದಿಂದ ವಿಶ್ವವನ್ನೇ ಒಂದು ಮಾಡುವ ಕಲ್ಪನೆಯಿದೆ. ಜಗತ್ತು ಕುಟುಂಬ, ಎಲ್ಲರೂ ಸಹೋದರರು. ಎನ್ನುವ ವಿಚಾರ ಸಂಘದಲ್ಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಭಗತ್ಸಿಂಗ್ ಸೇವಾ ಯುವಶಕ್ತಿಯ ಗೌರವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಯುವಕರ ಸಂಘಟನೆ ಇರ್ದೆ ಭಾಗದಲ್ಲಿ ಧರ್ಮ ಜಾಗೃತಿ ಜೊತೆಗೆ ಸಮಾಜವನ್ನು ಒಟ್ಟು ಸೇರಿಸುವ ಕೆಲಸವಾಗಿದೆ. ಇಂತಹ ಉತ್ಸಾಹಿ ಯುವಕರ ತಂಡ ಊರಿನಲ್ಲಿ ಆ ಊರು ಬೆಳೆಗುವಲ್ಲಿ ಸಹಕಾರಿಯಾಗಲಿದೆ ಎಂದ ಅವರು ಇರ್ದೆ ವಿಷ್ಣುಮೂರ್ತಿ ದೇವರ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ಕ್ಯಾಂಪ್ಕೋ ಅದ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಆರ್.ಬಿ ಸುವರ್ಣ, ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಕೀರ್ತಿ ಗೌಡ ಗುಮ್ಮಟೆಗದ್ದೆ ಸುಗಮ ಸಂಗೀತ ಕ್ಷೇತ್ರದ ವಿಷ್ಮ ಏಕತ್ತಡ್ಕ, ಸ್ಟಾಂಡ್ ಆರ್ಟ್ನಲ್ಲಿ ಸಾಧನೆ ಮಾಡಿದ ಲಿಖಿತಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಶನೈಶ್ಚರ ಕಲ್ಪೋಕ್ತ ಪೂಜೆ, ಎಳ್ಳಗಂಟು ದೀಪ ಸೇವೆ:ಸಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಅನಂತರಾಮ ಮಡಕುಳ್ಳಾಯ ಮತ್ತು ಪುರೋಹಿತ ರಾಧಾಕೃಷ್ಣ ಭಟ್ ಕಕ್ಕೂರ ಅವರ ಪೌರೋಹಿತ್ಯದಲ್ಲಿ ಶ್ರೀಶನೈಶ್ಚರ ಪೂಜೆ ಹಾಗೂ ಎಳ್ಳುಗಂಟು ದೀಪ ಸೇವೆಯು ನೆರವೇರಿತು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಭಗತ್ಸಿಂಗ್ ಸೇವಾ ಯುವಶಕ್ತಿಯ ಸ್ಥಾಪಕ ಅಧ್ಯಕ್ಷ ಚೇತನ್ ಉಪ್ಪಳಿಗೆ ಸ್ವಾಗತಿಸಿದರು. ಶಿಕ್ಷಕಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ತೀವ್ರ ಮಳೆಯ ಮಧ್ಯೆಯು ನೂರಾರು ಮಂದಿ ಭಕಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.