ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಗುಣಮಟ್ಟದ ಶಿಕ್ಷಣದಿಂದ ದೇಶದ ಪ್ರಗತಿಗೆ ಬುನಾದಿ

KannadaprabhaNewsNetwork | Published : Jun 16, 2025 1:34 AM

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ ಉದ್ಗಾಟಿಸಿದ ಶಾಸಕ ಡಾ.ಎಂ.ಚಂದ್ರಪ್ಪ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ದೇಶದಲ್ಲಿನ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಿದರೆ ಅದು ದೇಶದ ಪ್ರಗತಿಗೆ ಬುನಾದಿ ಆಗಲಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಭರಮಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶ ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ. ಆದ್ದರಿಂದಲೇ ಜಗತ್ತಿನ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಇರುವ ದೇಶಗಳೂ ಸಹ ಭಾರತದ ಕಡೆ ಮುಖಮಾಡಿ ಪ್ರಶಂಸೆಯ ಮಾತುಗಳನ್ನಾಡುತ್ತಿವೆ ಎಂದರು.

ಯುವ ವಿದ್ಯಾರ್ಥಿಗಳು ತಮ್ಮ ಆಂತರ್ಯದಲ್ಲಿ ದೇಶಾಭಿಮಾನವನ್ನೂ, ಹಿರಿಯರನ್ನು ಗೌರವಿಸುವ ಸದ್ಗುಣಗಳನ್ನೂ ಬೆಳೆಸಿಕೊಳ್ಳಬಹುದು. ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ ಎಂದು ಶಾಸಕರು ಹೇಳಿದರು.

ವಿಶ್ವವಿದ್ಯಾನಿಲಯವು ನಡೆಸುವ ಪದವಿ ಪರೀಕ್ಷೆಗಳಲ್ಲಿ ಪ್ರಥಮ ರ್ಯಾಂಕ್‌ ಗಳಿಸುವ ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ರೂ.ಗಳ ನಗದು ಬಹುಮಾನ ನೀಡುವ ಸಂಕಲ್ಪ ಮಾಡಿದ್ದೇನೆ. ಅದರಂತೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಅಂಕ ಗಳಿಸುವ ವಿದ್ಯಾರ್ಥಿಗಳಿಗೂ ಒಂದು ಲಕ್ಷ ರೂ.ಗಳ ನಗದು ಬಹುಮಾನ ನೀಡುವೆ. ಕನಿಷ್ಠ 200 ವಿದ್ಯಾರ್ಥಿಗಳಾದರೂ ಶೇ. 100 ಅಂಕಗಳನ್ನು ಗಳಿಸಬೇಕೆನ್ನುವುದು ನನ್ನ ಅಪೇಕ್ಷೆಯಾಗಿದೆ ಎಂದರು.

ತಾಲೂಕಿನಾದ್ಯಂತ 350 ರಿಂದ 400 ಶಾಲೆಗಳನ್ನು ಕಟ್ಟಿಸಿದ್ದೇನೆ. ಎಲ್ಲೆಲ್ಲಿ ಶಿಕ್ಷಕರಿಲ್ಲವೋ ಅಲ್ಲೆಲ್ಲಾ ಶಿಕ್ಷಕರನ್ನು ನೇಮಿಸಲಾಗಿದೆ. ಬಹಳಷ್ಟು ಶಾಲೆಗಳಿಗೆ ನನ್ನ ಅನುದಾನದಲ್ಲಿ ಬಸ್‌ಗಳನ್ನು ಬಿಟ್ಟಿದ್ದೇನೆ. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು, ಕುಡಿಯುವ ನೀರು, ಸಿಸಿ ರಸ್ತೆ, ರೈತರಿಗೆ ವಿದ್ಯುತ್ ಹೀಗೆ ಸಾರ್ವಜನಿಕರ ಬದುಕಿಗೆ ಏನು ಅವಶ್ಯಕತೆಯಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಕಾಲೇಜು ಪ್ರಾಚಾರ್ಯೆ ಡಾ.ಎಸ್.‌ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಿ.ಎಸ್.ಪ್ರವೀಣ್‌ಕುಮಾರ್, ಕರಿಯಮ್ಮ, ಸರ್ಕಾರಿ ಪ್ರಥಮ ದರ್ಜೆ ಉಪನ್ಯಾಸಕರಾದ ಸತ್ಯನಾರಾಯಣ, ಡಾ.ಹರೀಶ್, ಚಂದ್ರಕುಮಾರ್, ಗಿರೀಶ್, ಮಸೂದ್ ಅಹಮದ್, ಮಮತಾ, ಶ್ರೀದೇವಿ, ವಿರುಪಾಕ್ಷಪ್ಪ, ಚಂದ್ರಶೇಖರಪ್ಪ, ಭೋಧಕ-ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.