ಗೋಕರ್ಣ: ಇಲ್ಲಿನ ಮಹಾಬಲೇಶ್ವರ ಮಂದಿರದ ನಂದಿಮಂಟಪದಲ್ಲಿ ತೀರ್ಥ ನೀಡುವ ಅರ್ಚಕರ ಮನೆತನದ ನಡುವೆ ಪಾಳಿ(ಹಕ್ಕಿನ) ಕುರಿತು ಗುರುವಾರ ದೇವಾಲಯದಲ್ಲೇ ಗಲಾಟೆ ನಡೆದಿದೆ. ನಂತರ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಸ್ಥಳಕ್ಕೆ ಆಗಮಿಸಿ ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಿ ಏಳು ದಿನ ಯಥಾಸ್ಥಿತಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.
ಹೀಗೆ ತೀವ್ರ ವಾಗ್ವಾದ ನಡೆಯುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ತಡೆದರು. ಆನಂತರ ಮಂದಿರದ ಆಡಳಿತದವರು ಬರುವವರೆಗೂ ನಾವು ಕದಲುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಕುಮಟಾ ಉಪವಿಭಾಗಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದರು.
ಇದಾದ ಬಳಿಕ ಬಂದ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯವರು ಎರಡು ಕಡೆಯವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಆದರೂ ತಮ್ಮ ಬಳಿ ದಾಖಲೆಗಳಿವೆ, ನಿಮಗೂ ಅರ್ಜಿ ನೀಡಿದ್ದೇವೆ. ನಮಗೆ ಇಂದಿನಿಂದಲೇ ಅವಕಾಶ ನೀಡಿ ಎಂದ ಹಲವು ಗಂಟೆಗಳ ಕಾಲ ಪಟ್ಟು ಹಿಡಿದರು.ಅಂತಿಮವಾಗಿ ಒಂದು ವಾರ ಎರಡು ಕಡೆಯ ದಾಖಲಾತಿ ಪರಿಶೀಲನೆ ನಡೆಸಿ ಸಮಿತಿಯ ಮುಂದಿಟ್ಟು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಲ್ಲಿಯವರೆಗೆ ಮೊದಲಿನಂತೆ ಇರಲಿ ಎಂದರು.
ಈ ವೇಳೆ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಪರಮೇಶ್ವರ ಮಾರ್ಕಾಂಡೆ, ವೇ. ದತ್ತಾತ್ರೇಯ ಹಿರೇಗಂಗೆ, ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ವೇ. ರಾಜಗೋಪಾಲ ಅಡಿಗುರೂಜಿ, ಶಂಕರ ಗೋಪಿ, ರವಿ ಅಡಿ, ಪ್ರಸನ್ನ ಜೋಗ ಭಟ್, ರವಿ ಜೋಗಭಟ್, ನಾಗರಾಜ ಜೋಗ ಭಟ್, ವಿಶ್ವೇಶ್ವರ ಗೋಪಿ ಮತ್ತಿತರರು ಉಪಸ್ಥಿತರಿದ್ದರು.ಅವಕಾಶ ನೀಡಲು ಆಗ್ರಹ: ನಂದಿಮಂಟಪದಲ್ಲಿ ನಮ್ಮ ಮನೆತನದ ಆರು ತಿಂಗಳ ಕಾರ್ಯನಿರ್ವಹಿಸುವ ಹಕ್ಕಿನ ಕುರಿತು ಮಂದಿರದ ಕಾರ್ಯದರ್ಶಿಯವರಿಗೆ ಅರ್ಜಿ ನೀಡಿದ್ದೇನೆ. ನಮ್ಮ ಮನೆತನ ಅನಾದಿಕಾಲದಿಂದ ಬಂದ ಪಾಳಿ ನಿರ್ವಹಿಸಲು ತಕ್ಷಣ ಅವಕಾಶ ನೀಡಬೇಕು ಎಂದು ಗೋಪಿ ಮನೆತನದ ಅರ್ಚಕ ಶಂಕರ ಗೋಪಿ ತಿಳಿಸಿದರು.ಯಥಾಸ್ಥಿತಿ ಮುಂದುವರಿಕೆ: ಎರಡು ಕಡೆಯಯವರು ನೀಡಿದ ಅರ್ಜಿಯನ್ನು ಪರಿಶೀಲನೆ ನಡೆಸಿ ಸಮಿತಿ ಅಧ್ಯಕ್ಷರಿಗೆ ತಿಳಿಸಿ ನಂತರ ಅವರ ನಿರ್ದೇಶನದ ಮೇರೆಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಮೇ 16ರ ವರೆಗೆ ಯಥಾಸ್ಥಿತಿ ಮುಂದುವರಿಸಲು ಸೂಚಿಸಿದ್ದೇನೆ ಎಂದು ಕುಮಟಾ ಉಪವಿಭಾಗಾಧಿಕಾರಿ ಹಾಗೂ ಮಂದಿರ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಕಲ್ಯಾಣಿ ಕಾಂಬಳೆ ತಿಳಿಸಿದರು.
ಕ್ರಮ ಕೈಗೊಳ್ಳಲಿ: ಅನಾದಿ ಕಾಲದಿಂದ ನಂದಿಮಂಟಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೆ ಇತ್ತೀಚೆಗೆ ಇದಕ್ಕೆ ಸಂಬಂಧಿಸದವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ವಿಚಾರಣೆಯಲ್ಲಿ ಇದ್ದು, ಇದು ಮುಗಿದ ಬಳಿಕ ಅಲ್ಲಿನ ನಿರ್ಧಾರದಂತೆ ಕ್ರಮ ತೆಗೆದುಕೊಳ್ಳಲಿ ಎಂದು ಜಂಭೆ ಮನೆತನದ ಅರ್ಚಕ ಬಾಲಕೃಷ್ಣ ತಿಳಿಸಿದರು.ಕಾನೂನು ಕ್ರಮ: ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣ ವಿಚಾರಣೆಯಲ್ಲಿರುವಾಗ ಮಂದಿರಕ್ಕೆ ಬಂದು ವಾಗ್ವಾದ ನಡೆಸಿ ಭಕ್ತರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಅಲ್ಲದೇ ಗುರುವಾರ ಕುಮಟಾ ಉಪ ವಿಭಾಗಾಧಿಕಾರಿ ಅವರಿಗೆ ಧಿಕ್ಕಾರ ಕೂಗಿರುವುದು ವಿಷಾದನೀಯ. ಅನಗತ್ಯ ಗೊಂದಲ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮಂದಿರದ ಮೇಲುಸ್ತುವಾರಿ ಸಮಿತಿಯ ಸದಸ್ಯ ವೇ. ದತ್ತಾತ್ರೇಯ ಹಿರೇಗಂಗೆ ತಿಳಿಸಿದರು.